ಮೇಕೆದಾಟು ಯೋಜನೆ; ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದ ಕುಮಾರಸ್ವಾಮಿ
ರಾಮನಗರ, ಆಗಸ್ಟ್ 06; ಬಯಲುಸೀಮೆ ಜಿಲ್ಲೆಗಳ ಕುಡಿಯುವ ನೀರಿನ ಬವಣೆಯನ್ನು ನೀಗಿಸುವ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ತಳೆದಿರುವ ಧೋರಣೆಯನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಖಂಡಿಸಿದರು.
ಶುಕ್ರವಾರ ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆಯ ಬಳಿ ಮಾಧ್ಯಮಗಳ ಜೊತೆ ಕುಮಾರಸ್ವಾಮಿ ಮಾತನಾಡಿದರು. "ನಾವು ಈಗಾಗಲೇ ರಾಜ್ಯಪಾಲರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದೇವೆ" ಎಂದರು.
"ನಮ್ಮ ಪಕ್ಷದ ಸಂಸತ್ ಸದಸ್ಯರಾದ ಪ್ರಜ್ವಲ್ ರೇವಣ್ಣ ಸದನದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಕೇಂದ್ರದ ಮಂತ್ರಿಗಳು ಮೇಕೆದಾಟು ಯೋಜನೆಗೆ ನಾವು ಯಾವುದೇ ರೀತಿಯ ಒಪ್ಪಿಗೆ ನೀಡಿಲ್ಲ ಎಂದಿದ್ದಾರೆ. ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು ಎಂದು ಉತ್ತರ ನೀಡಿದ್ದಾರೆ" ಎಂದು ಕುಮಾರಸ್ವಾಮಿ ಹೇಳಿದರು.

"ಮೇಕೆದಾಟು ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಒಪ್ಪಿಗೆ ಬೇಕು ಎನ್ನುವ ಕೇಂದ್ರದ ಮಂತ್ರಿಗಳ ಹೇಳಿಕೆ ರಾಷ್ಟ್ರೀಯ ಪಕ್ಷಗಳ ಧೋರಣೆಯನ್ನು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಪಕ್ಷಗಳ ನಡುವಳಿಕೆಯನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕಿದೆ. ಕರ್ನಾಟಕವನ್ನ ರಾಷ್ಟ್ರೀಯ ಪಕ್ಷಗಳು ಲಘುವಾಗಿ ಕಾಣುತ್ತಾ ಬಂದಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಕೇಂದ್ರದಲ್ಲಿ ಆಡಳಿತ ನಡೆಸುವ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ವಿಚಾರದಲ್ಲಿ ತುಂಬಾ ಲಘುವಾಗಿ ನಡೆದುಕೊಳುತ್ತವೆ. ಕಾಂಗ್ರೆಸ್ ಕೂಡ ಇದಕ್ಕೆ ಹೊರತಾಗಿಲ್ಲ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಬಳಕೆಗೆ 9 ಟಿಎಂಸಿ ನೀರು ಬಳಕೆಗೆ ಕಾಂಗ್ರಸ್ ಒಪ್ಪಿಗೆ ನೀಡಲಿಲ್ಲ. ನಂತರ ದೇವೇಗೌಡರು ಪ್ರಧಾನಿಗಳಾದ ಹತ್ತು ತಿಂಗಳ ಅಧಿಕಾರವಧಿಯಲ್ಲಿ ನೀರು ಬಳಕೆಗೆ ಒಪ್ಪಿಗೆ ನೀಡಿದ್ದು" ಎಂದು ರಾಷ್ಟ್ರೀಯ ಪಕ್ಷಗಳ ಧೋರಣೆ ಖಂಡಿಸಿದರು.
"ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದ 14 ತಿಂಗಳ ಅವಧಿಯಲ್ಲಿ ಕೇಂದ್ರದ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದ ಸಮಯದಲ್ಲಿ ಅವರೇ ನನಗೆ ಮೇಕೆದಾಟು ಯೋಜನೆಯ ಡಿಪಿಆರ್ ಸಿದ್ಧಪಡಿಸಿಕೊಡುವಂತೆ ತಿಳಿಸಿದರು. ಯೋಜನೆಗೆ ಅವರೇ ಒಪ್ಪಿಗೆ ನೀಡಿ ಈಗ ಅದ್ಯಾವುದು ಲೆಕ್ಕ ಇಲ್ಲಾ ಎನ್ನುತ್ತಾರೆ ಎಂದರೆ ಕರ್ನಾಟಕ ರಾಜ್ಯದ ಬಗ್ಗೆ ಅವರ ತಾತ್ಸಾರ ಮನೋಭಾವವನ್ನು ತೋರಿಸುತ್ತದೆ" ಎಂದರು.
"ನಾವು ಏನೇ ಹೇಳಿದರು ರಾಜ್ಯದ ಜನ ಒಪ್ಪುತ್ತಾರೆ ಎನ್ನುವ ಧೋರಣೆ ಎರಡು ರಾಷ್ಟ್ರೀಯ ಪಕ್ಷಗಳದ್ದು. ನೋಡೋಣ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನೆ ಅನುಷ್ಠಾನ ಮಾಡೇ ಮಾಡುತ್ತೇನೆ ಎಂದಿದ್ದಾರೆ. ನೋಡೋಣ" ಎಂದು ಕುಮಾರಸ್ವಾಮಿ ಹೇಳಿದರು.
ಜಮೀರ್ ಬಗ್ಗೆ ನಾನು ದೂರು ನೀಡಿಲ್ಲ; "ಜಮೀರ್ ಅಹಮ್ಮದ್ ಖಾನ್ ವಿರುದ್ಧ ಇಡಿಗೆ ನಾನು ದೂರು ಕೊಟ್ಟಿಲ್ಲ. ಇಡಿಗೆ ಯಾರು ದೂರು ನೀಡಿದ್ದಾರೆಂದು ನನಗೆ ಗೊತ್ತಿಲ್ಲ, ನಾನಂತೂ ಯಾರ ಬಗ್ಗೆಯು ದೂರು ನೀಡಿಲ್ಲ. ಅವರ ಬಗ್ಗೆ ಯಾರು ದೂರು ಕೊಟ್ಟಿದ್ದಾರೋ ಅವರೇ ಸಮರ್ಥವಾಗಿ ಉತ್ತರ ಕೊಡಬೇಕು" ಎಂದು ತಿಳಿಸಿದರು.
"ಕೇಂದ್ರ ಸರ್ಕಾರಲ್ಲಿರುವಂತಹ ಕೆಲವು ಸಂಸ್ಥೆಗಳಿಗೆ ಮೂಗರ್ಜಿಗಳನ್ನು ಬರೆದು, ಈ ರೀತಿಯ ಸಂದರ್ಭದಲ್ಲಿ ತನಿಖೆ ಮಾಡಿಕೊಂಡು ಬಂದಿರುವಂತದ್ದು, ಆಗಿನಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಮೇಲೂ ಹಲವಾರು ಬಾರಿ ತನಿಖೆಯಾಗಿಲ್ವಾ?, ಇದೇ ಜಮೀನಿನ ಮೇಲೆ 25 ವರ್ಷ, 30 ವರ್ಷಗಳು ನಮಗೆಷ್ಟು ಕಾಟ ನೀಡಿದ್ದಾರೆಂಬುದು ನಮಗೆ ಮಾತ್ರ ಗೊತ್ತು, ರಾಜಕೀಯದಲ್ಲಿ ಇರುವಾಗ ಹಲವಾರು ರೀತಿಯ ರಾಜಕೀಯ ತೊಂದರೆಗಳನ್ನು ನಾವು ಅನುಭವಿಸಲೇ ಬೇಕು. ಆದರೆ ನಾವು ಸರಿಯಾಗಿದ್ದರೆ ಯಾರು ಏನೂ ಮಾಡಲು ಸಾಧ್ಯವಾಗುವುದಿಲ್ಲ" ಎಂದರು.












Click it and Unblock the Notifications