ಮುಂದೆ ನಿಖಿಲ್ ರಾಮನಗರದಿಂದಲೇ ಸ್ಪರ್ಧಿಸಬಹುದು: ಎಚ್ಡಿಡಿ
ರಾಮನಗರ ಜನತೆಯ ಆಶೀರ್ವಾದವಿದ್ದರೆ ನಿಖಿಲ್ ಕುಮಾರಸ್ವಾಮಿ ಇಲ್ಲಿಂದಲೇ ಸ್ಪರ್ಧಿಸುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಹೇಳಿದರು.
ರಾಮನಗರ, ಮಾರ್ಚ್ 03: ರಾಮನಗರ ಜನತೆಯ ಆಶೀರ್ವಾದವಿದ್ದರೆ ನಿಖಿಲ್ ಕುಮಾರಸ್ವಾಮಿ ಇಲ್ಲಿಂದಲೇ ಸ್ಪರ್ಧಿಸುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಹೇಳಿದರು.
ರಾಮನಗರದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಜನತೆಯ ಆಶೀರ್ವಾದವಿದ್ದರೆ ನಿಖಿಲ್ ರಾಮನಗರದಿಂದಲೇ ಸ್ಪರ್ಧೆ ಮಾಡುತ್ತಾರೆ, ಆಕಸ್ಮಿಕವಾಗಿ ಹಿಂದಿನ ಚುನಾವಣೆಯಲ್ಲಿ ಮಂಡ್ಯಕ್ಕೆ ನಿಖಿಲ್ ಹೋಗಬೇಕಾಯಿತು ಎಂದರು.
ನನ್ನ ನಂತರ ಕುಮಾರಸ್ವಾಮಿಗೆ ರಾಜಕೀಯ ಶಕ್ತಿ ನೀಡಿದ ಕ್ಷೇತ್ರ ಇದು, ನಮ್ಮ ಶಕ್ತಿ ಕೇಂದ್ರ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿಖಿಲ್ ಕುಮಾರಸ್ವಾಮಿಯ ರಾಜಕೀಯ ಭವಿಷ್ಯ ನುಡಿದರು.

ರಾಮನಗರ ಹೊರವಲಯದ ಜಾನಪದ ಲೋಕ ಬಳಿಯ ಸಪ್ತಪದಿ ಮಂಟಪದಲ್ಲಿ ನಿಖಿಲ್ ಮತ್ತು ರೇವತಿ ಮದುವೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಮೊಮ್ಮಗನ ಮದುವೆಯ ಸ್ಥಳ ವೀಕ್ಷಣೆಗೆ ಪುತ್ರ ಎಚ್.ಡಿ.ಕುಮಾರಸ್ವಾಮಿಯೊಂದಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಎಚ್.ಡಿ.ರೇವಣ್ಣ ಹಾಸನಕ್ಕೆ ಸೀಮಿತವಾಗಿದ್ದಾರೆ. ನಾನು ಮತ್ತು ಕುಮಾರಸ್ವಾಮಿ ರಾಮನಗರಕ್ಕೆ ಇದ್ದೆವು, ಇದೀಗ ನಿಖಿಲ್ ಗೆ ಜನ ಆಶೀರ್ವಾದ ಮಾಡಿದರೆ ಮುಂದೆ ಅದು ಆಗುತ್ತೆ. ಚಿತ್ರರಂಗ ಮತ್ತು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ನಿಖಿಲ್ ಮದುವೆಗೆ ಎಲ್ಲರನ್ನೂ ಕರೆಯುವ ಸದುದ್ದೇಶದಿಂದ ಇಲ್ಲಿ ಮಾಡಲಾಗುತ್ತಿದೆ ಎಂದರು.

ಇನ್ನೂ ಪ್ರಶಾಂತ ಕಿಶೋರ್ ಬಳಿ ಈಗಾಗಲೇ ಕುಮಾರಸ್ವಾಮಿ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ, ಮುಂದೆ ಎಲ್ಲರೂ ಕುಳಿತು ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದ ದೇವೇಗೌಡರು, ಮಧು ಬಂಗಾರಪ್ಪ ಅವರ ಅಸಮಾಧಾನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ನಾನು ಪಕ್ಷ ಕಟ್ಟುವುದಕ್ಕೆ ಮಂಡ್ಯಕ್ಕೆ ಹೋಗುತ್ತೇನೆ, ಪಕ್ಷಕ್ಕೆ ಶಕ್ತಿ ಕೊಟ್ಟಿರುವ ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳಿಗೆ ಹೋಗುತ್ತೇನೆ. ನಮಗೆ ಶಕ್ತಿ ಕೊಟ್ಟ ಕ್ಷೇತ್ರಗಳಲ್ಲಿ ಕೆಲವರು ನಮ್ಮ ಬಗ್ಗೆ ಇಲ್ಲದ ಕತೆ ಕಟ್ಟಿ ಶಕ್ತಿ ಕುಂದಿಸುವ ಕಾರ್ಯ ಮಾಡಿದ್ದಾರೆ, ನಮಗೂ ಟೈಂ ಬರುತ್ತೆ ಕಾಯಿರಿ ಎಂದು ಮಾರ್ಮಿಕವಾಗಿ ಮಾತನಾಡಿದರು.












Click it and Unblock the Notifications