ಬೆಂಗಳೂರು-ಕನಕಪುರ 4 ಪಥದ ರಸ್ತೆ ಕಾಮಗಾರಿ ಮತ್ತೆ ಆರಂಭ
ಬೆಂಗಳೂರು, ನವೆಂಬರ್ 25 : ಹಲವಾರು ಅಡೆ-ತಡೆಗಳನ್ನು ದಾಟಿ ಕನಕಪುರ ರಸ್ತೆ ವಿಸ್ತರಣೆ ಕಾರ್ಯವನ್ನು ಪುನಃ ಆರಂಭಿಸಲಾಗಿದೆ. 2021ರ ಜೂನ್ ಅಥವ ಜುಲೈನಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು-ಕನಕಪುರ ರಸ್ತೆ ಅಗಲೀಕರಣಕ್ಕೆ ಮತ್ತೆ ಚಾಲನೆ ನೀಡಿದೆ. ನಾಲ್ಕು ಪಥದ ರಸ್ತೆ ಕಾಮಗಾರಿ ವಿವಿಧ ಕಾರಣಗಳಿಂದಾಗಿ ವಿಳಂಬವಾಗುತ್ತಲೇ ಇದೆ.
ಭೂ ಸ್ವಾಧೀನದ ವಿಚಾರದಲ್ಲಿ ಕುಟುಂಬಗಳ ನಡುವಿನ ಕಾನೂನು ಹೋರಾಟದಿಂದಾಗಿ ರಸ್ತೆ ಕಾಮಗಾರಿ ವಿಳಂಬವಾಗಿತ್ತು. ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದರಿಂದ ಅಪಘಾತಗಳು ಸಹ ನಡೆದಿದ್ದವು. ಕಾಮಗಾರಿ ಪೂರ್ಣಗೊಳಿಸಿ ಎಂದು ಒತ್ತಾಯ ಮಾಡಲಾಗುತ್ತಿತ್ತು.

ನೈಸ್ ಜಂಕ್ಷನ್ನಿಂದ ಕನಕಪುರದ ತನಕ ನಾಲ್ಕು ಪಥದ ರಸ್ತೆ ನಿರ್ಮಾಣ ವಾಗಲಿದೆ. ಕನಕಪುರದಿಂದ ತಮಿಳುನಾಡು ಗಡಿಯ ತನಕ ಇರುವ ರಸ್ತೆಯನ್ನು ಎರಡು ಪಥವಾಗಿ ಅಭಿವೃದ್ಧಿ ಮಾಡಲಾಗುತ್ತದೆ.
ಬೆಂಗಳೂರು-ಕನಕಪುರ ರಸ್ತೆಯನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ 4 ಪಥದ ರಸ್ತೆಯಾಗಿ ಅಭಿವೃದ್ಧಿಗೊಳಿಸಲು ಮೊದಲು ತೀರ್ಮಾನಿಸಲಾಗಿತ್ತು. ಆಗ ಯೋಜನೆ ಪೂರ್ಣಗೊಂಡ ಬಳಿಕ ರಸ್ತೆಯಲ್ಲಿ ಸಂಚಾರ ನಡೆಸುವ ಜನರು ಟೋಲ್ ಕಟ್ಟಬೇಕಿತ್ತು. ಬೆಂಗಳೂರು ಗ್ರಾಮಾಂತರ ಸಂಸದ ಡಿ. ಕೆ. ಸುರೇಶ್ ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಾಮಾನ್ಯ ರಸ್ತೆಯಾಗಿ ಅಭಿವೃದ್ಧಿಪಡಿಸಲು ಒತ್ತಾಯಿಸಿದ್ದರು.
ಕನಕಪುರ ರಸ್ತೆ ಅಪಾಯಕಾರಿಯಾಗಿದ್ದು, ವಿಸ್ತರಣೆ ಕಾರ್ಯ ಅನಿವಾರ್ಯವಾಗಿತ್ತು. ಮೈಸೂರು, ಕೊಯಮತ್ತೂರು ಕಡೆ ಸಂಚಾರ ನಡೆಸುವ ಬೆಂಗಳೂರಿನ ಅನೇಕ ಸವಾರರು ಕನಕಪುರ ರಸ್ತೆಯನ್ನು ಬಳಕೆ ಮಾಡುತ್ತಾರೆ.
ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ಬೆಟ್ಟಕ್ಕೆ ಸಾಗುವ ಪ್ರವಾಸಿಗರು ಸಹ ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ ಸಂಚಾರ ನಡೆಸುತ್ತಾರೆ. ಆದ್ದರಿಂದ ಕಾಮಗಾರಿ ವೇಗವಾಗಿ ಪೂರ್ಣಗೊಂಡರೆ ಸವಾರರಿಗೆ ಅನುಕೂಲವಾಗಲಿದೆ.












Click it and Unblock the Notifications