ಮಾಗಡಿ ತಾಲೂಕಿನಲ್ಲಿ ಮೈತ್ರಿ ಪಕ್ಷಗಳ ಸಹೋದರರ ಮಧ್ಯೆ ಗಲಾಟೆ
ಮಾಗಡಿ (ರಾಮನಗರ ಜಿಲ್ಲೆ), ಜುಲೈ 22: ರಾಜ್ಯದಲ್ಲಿ ಕೈ-ತೆನೆ ಪಕ್ಷಗಳು ಒಟ್ಟಾಗಿ ಸಮ್ಮಿಶ್ರ ಸರಕಾರ ರಚನೆ ಮಾಡಿದ್ದು, ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿನಿಧಿಸುವ ರಾಮನಗರ ಜಿಲ್ಲೆ ವ್ಯಾಪ್ತಿಯ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಎರಡೂ ಪಕ್ಷದ ಮುಖಂಡರು ಹಾವು- ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ.
ಅದರಲ್ಲೂ ಎರಡು ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಮಾಜಿ ಹಾಗೂ ಹಾಲಿ ಶಾಸಕರ ಬೆಂಬಲರಾಗಿರುವ ಸಹೋದರರ ಮಧ್ಯೆಯೇ ಹೊಡೆದಾಟ ನಡೆದಿದೆ ಎಂಬುದು ವಿಶೇಷ. ಮಾಜಿ ಶಾಸಕ- ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ ಹಾಗೂ ಹಾಲಿ ಶಾಸಕ- ಜೆಡಿಎಸ್ ನಾಯಕ ಎ. ಮಂಜು ಕಟ್ಟಾ ಬೆಂಬಲಿಗರು ಕೋರ್ಟ್ ಪ್ರಕರಣದ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾರೆ.
ಶಾಸಕ ಎ. ಮಂಜು ಬೆಂಬಲಿಗ ಮಾಗಡಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೃಷ್ಣಮೂರ್ತಿ ಮೇಲೆ ಅವರ ಖಾಸಾ ಸಹೋದರ- ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಬೆಂಬಲಿಗ, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಗಡಿ ತಾಲೂಕಿನ ಪೂಜಾರಿ ಪಾಳ್ಯ ಸಮೀಪದ ಗೊಲ್ಲರಹಟ್ಟಿ ಗ್ರಾಮದ ಬಳಿ ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ಅವರ ಅಣ್ಣ ನರಸಿಂಹಮೂರ್ತಿ ಮತ್ತು ಮಕ್ಕಳು ಕೃಷ್ಣಮೂರ್ತಿಯ ಮೇಲೆ ಹಲ್ಲೆ ಮಾಡಿದ್ದು, ಇದೇ ಸಂದರ್ಭದಲ್ಲಿ ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರನ್ನು ಜಖಂ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಎ. ಮಂಜು ಮತ್ತು ಎಚ್. ಸಿ. ಬಾಲಕೃಷ್ಣ ಮತ್ತು ಅವರ ಬೆಂಬಲಿಗರು ಪರಸ್ಪರ ಪಕ್ಷಾಂತರ ಮಾಡಿ, ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹೋರಾಟ ಮಾಡಿದ್ದರು. ಅಂತಿಮವಾಗಿ ಜೆಡಿಎಸ್ ಗೆ ಪಕ್ಷಾಂತರ ಮಾಡಿದ್ದ ಎ.ಮಂಜು ಚುನಾವಣೆಯಲ್ಲಿ ಐವತ್ತು ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದ ಎಚ್. ಸಿ. ಬಾಲಕೃಷ್ಣ ವಿರುದ್ಧ ಜಯ ಗಳಿಸಿದ್ದರು.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಒಂದೇ ವೇದಿಕೆಯಲ್ಲಿ ಮಾಜಿ ಮತ್ತು ಹಾಲಿ ಶಾಸಕರು ಕಾಣಿಸಿಕೊಂಡಿದ್ದರು ಹಾಗೂ ಡಿ.ಕೆ. ಸುರೇಶ ಗೆಲುವಿಗೆ ಶ್ರಮಿಸಿದ್ದರು. ಅದರೆ ಅವರ ಬೆಂಬಲಿಗರ ನಡುವಿನ ವೈಷಮ್ಯ ಕಡಿಮೆ ಆಗಿರಲಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.












Click it and Unblock the Notifications