ಬೆಂಗಳೂರಿಗರ ರಾತ್ರಿಯ ಜಾಲಿ ರೈಡ್ಗೆ ತಡೆ ಹಾಕಿದ ಜಿಲ್ಲಾಡಳಿತ
ರಾಮನಗರ, ಡಿಸೆಂಬರ್ 26 : ಬೆಂಗಳೂರಿನಲ್ಲಿ ನೈಟ್ ಜಾಲಿ ರೈಡ್, ನೈಟ್ ಔಟ್ ಹೋಗುವವರ ನೆಚ್ಚಿನ ಸ್ಥಳ ಮೈಸೂರು ರಸ್ತೆ. ಆದರೆ, ಈಗ ಜಾಲಿ ರೈಡ್ ಹೋಗುವ ಅಭ್ಯಾಸಕ್ಕೆ ರಾಮನಗರ ಜಿಲ್ಲಾಡಳಿತ ತಡೆ ಹಾಕಿದೆ. ರಾತ್ರಿಯ ಹೊತ್ತು ಮೈಸೂರು ರಸ್ತೆ ಕಡೆ ಇನ್ನು ಹೋಗುವಂತಿಲ್ಲ.
ಹೌದು, ಬೆಂಗಳೂರು-ಮೈಸೂರು ರಸ್ತೆಯಲ್ಲಿ ರಾತ್ರಿ 11.30ಕ್ಕೆ ಎಲ್ಲಾ ಡಾಬಾ, ರೆಸಾರ್ಟ್, ವೈನ್ ಶಾಪ್ಗಳನ್ನು ಮುಚ್ಚಬೇಕು ಎಂದು ರಾಮನಗರ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ರಾಮನಗರ ಜಿಲ್ಲಾಧಿಕಾರಿ ಎಂ. ಎಸ್. ಅರ್ಚನಾ ಈ ಕುರಿತು ಆದೇ ಹೊರಡಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ರಾತ್ರಿ 11.30ರಿಂದ ಬೆಳಗ್ಗೆ 6 ಗಂಟೆಯ ತನಕ ಡಾಬಾ, ರೆಸಾರ್ಟ್, ಹೋಟೆಲ್, ವೈನ್ ಶಾಪ್ಗಳನ್ನು ಮುಚ್ಚಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ನಿಲ್ಲಿಸಲು ರಾಮನಗರ ಜಿಲ್ಲಾಡಳಿತ ಇಂತಹ ದಿಟ್ಟ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆಯ ಸಹಕಾರದಿಂದ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.
ಅಪರಾಧ ಚಟುವಟಿಕೆಗಳು : 2015ರ ಸೆಪ್ಟೆಂಬರ್ ನಿಂದ 2019ರ ಸೆಪ್ಟೆಂಬರ್ ತನಕ 66 ಕೊಲೆ, 14 ದರೋಡೆ, 53 ದರೋಡೆ ಯತ್ನ, 12 ಸರಗಳ್ಳತನ, 665 ರಾತ್ರಿಯ ಕಳವು ರಾಮನಗರ ಭಾಗದಲ್ಲಿ ನಡೆದಿದೆ. ಬೆಂಗಳೂರಿಗರು ರಾತ್ರಿಯೇ ಮೈಸೂರು ರಸ್ತೆಯಲ್ಲಿ ಜಾಲಿ ರೈಡ್ ಮಾಡುವುದರಿಂದ ಅಪರಾಧ ಹೆಚ್ಚಾಗಿ ನಡೆಯುವ ಸಾಧ್ಯತೆ ಇದೆ. ಆದ್ದರಿಂದ, ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.
"ಬೆಂಗಳೂರು-ಮೈಸೂರು ರಸ್ತೆ ಬೆಂಗಳೂರಿಗೆ ಹಾಟ್ ಸ್ಪಾಟ್. ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ತೀರ್ಮಾನವನ್ನು ಕೈಗೊಳ್ಳಬೇಕಾಯಿತು" ಎಂದು ಜಿಲ್ಲಾಧಿಕಾರಿ ಅರ್ಚನಾ ಹೇಳಿದ್ದಾರೆ.












Click it and Unblock the Notifications