ಅಡುಗೆ ಎಣ್ಣೆ ದರ ನಿಯಂತ್ರಿಸಿ: ಪ್ರಧಾನಿ, ಸಿಎಂಗೆ ಡಿ.ಕೆ ಸುರೇಶ್ ಪತ್ರ
ರಾಮನಗರ, ಮೇ 29: ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅಡುಗೆ ಎಣ್ಣೆ ದರ ದುಪ್ಪಟ್ಟಾಗಿರುವುದರಿಂದ ಜನ ಹೈರಾಣಾಗಿದ್ದಾರೆ. ಹೀಗಾಗಿ ಅಡುಗೆ ಎಣ್ಣೆ ದರ ಏರಿಕೆಯನ್ನು ನಿಯಂತ್ರಣ ಮಾಡುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಆಹಾರ ಸಚಿವ ಮತ್ತು ನಾಗರಿಕ ಸರಬರಾಜು ಸಚಿವ ಪಿಯೂಷ್ ಗೋಯಲ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರಿಗೆ ಪತ್ರ ಬರೆದು ಸಂಸದ ಡಿ.ಕೆ ಸುರೇಶ್ ಮನವಿ ಮಾಡಿದ್ದಾರೆ.

"ಲಾಕ್ಡೌನ್ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ಮೇಲೆ ಆರ್ಥಿಕ ಒತ್ತಡ ತಂದಿದೆ. ಇದರ ಜತೆಗೆ ಅಡುಗೆ ಎಣ್ಣೆ ಬೆಲೆ ದುಪ್ಪಟ್ಟಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಅಡುಗೆ ಎಣ್ಣೆ ದರ 150ರಿಂದ 180 ರೂ. ವರೆಗೆ, ಬ್ರಾಂಡೆಡ್ ಅಡುಗೆ ಎಣ್ಣೆ 230 ರೂ. ವರೆಗೂ ಇದೆ. ಕೋವಿಡ್ ಲಾಕ್ಡೌನ್ನಿಂದ ಆದಾಯವಿಲ್ಲದ ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ ಅವರಿಗೆ ಕೈಗೆಟುಕದಾಗಿದೆ ಎಂದರು.

Recommended Video
ಹೀಗಾಗಿ ಅಡುಗೆ ಎಣ್ಣೆ ದರ ನಿಯಂತ್ರಣ ಮಾಡಲು ಸರ್ಕಾರ ಮಧ್ಯ ಪ್ರವೇಶ ಮಾಡಿ ಕ್ರಮ ಕೈಗೊಳ್ಳಬೇಕು. ಅಡುಗೆ ಎಣ್ಣೆ ಮೇಲಿನ ಆಮದು ಸುಂಕ, ಜಿಎಸ್ಟಿ ಪ್ರಮಾಣ ಕಡಿಮೆ ಮಾಡಿ, ದೇಶೀಯ ಉತ್ಪಾದನೆ ಹೆಚ್ಚಿಸಲು ರೈತರಿಗೆ ಉತ್ತೇಜನ ನೀಡಬೇಕು ಎಂದು ಸಂಸದ ಡಿ.ಕೆ ಸುರೇಶ್ ಪತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.












Click it and Unblock the Notifications