ಡಿಸಿಎಂ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಂಸದ ಡಿ.ಕೆ ಸುರೇಶ್
ರಾಮನಗರ, ಡಿಸೆಂಬರ್ 4: ""ಅವನಿಗೆ ಪಂಚಾಯತಿ ಎಂದರೆ ಏನು ಅಂತಾ ಗೊತ್ತಿಲ್ಲ'' ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.
ಶುಕ್ರವಾರ ರಾಮನಗರದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಗ್ರಾಮ ಸ್ವರಾಜ್ಯ ಅಂದರೆ ಗೊತ್ತಿದೆಯೋ ಇಲ್ಲವೋ, ಮೊದಲು ಅದನ್ನ ಮೊದಲು ಅರ್ಥ ಮಾಡಿಕೊಳ್ಳಲಿ. ನರೇಗಾ ತಂದಿದ್ದು ಪ್ರಧಾನಿ ಮೋದಿನಾ ಎಂದು ಪ್ರಶ್ನೆ ಮಾಡಿದರು.
ಗ್ರಾಮ ಸ್ವರಾಜ್ಯ ಏನು ಅನ್ನೋದು ಅವರಿಗೆ ಗೊತ್ತಿಲ್ಲ, ಸುಮ್ಮನೆ ಭಾಷಣ ಮಾಡುತ್ತಾರೆ. ಇವರು ಉಪ ಮುಖ್ಯಮಂತ್ರಿಗಳಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಕಡಿದು ಕಟ್ಟೆ ಹಾಕಿರೋದು ಏನು ಎಂದು ಪ್ರಶ್ನಿಸಿದರು.

ಕಳೆದ ಒಂದೂವರೆ ವರ್ಷದಿಂದ ಏನ್ ಮಾಡಿದ್ದಾರೆ ಇವರು. ಕಾರ್ಯಕರ್ತರನ್ನು ಹುರಿದುಂಬಿಸಲು ಭಾಷಣ ಮಾಡುತ್ತಿದ್ದಾರೆ, ಒಂದಷ್ಟು ಜನರನ್ನು ಹಿಡಿಯಬೇಕು ಅದಕ್ಕೆ ಕಷ್ಟಪಡುತ್ತಿದ್ದಾರೆ, ಒಳ್ಳೆಯದಾಗಲಿ ಎಂದು ಡಿ.ಕೆ ಸುರೇಶ್ ಕುಟುಕಿದರು.
ಇನ್ನು ಬಿಜೆಪಿಗೆ ಬಹುಮತ ನೀಡಿದರೆ ಪ್ರತಿ ಪಂಚಾಯತಿಗೆ 1.5 ಕೋಟಿ ಅನುದಾನ ನೀಡುವುದಾಗಿ ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ.ಸುರೇಶ್, ಪ್ರತಿ ಪಂಚಾಯತಿಗೆ ಕೇವಲ 5 ಲಕ್ಷ ನೀಡುವ ಯೋಗ್ಯತೆ ಇಲ್ಲ ಇವರಿಗೆ. ರಾಮನಗರ ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ 250 ಕೋಟಿ ರೂ. ಹಣ ಖರ್ಚು ಮಾಡಿದ್ದಾರಂತೆ. ಏನ್ ಡಿಸಿಎಂ ಬಂದ್ಮೇಲೆ ಹಣ ಖರ್ಚು ಮಾಡಿದ್ದಾರಾ ಎಂದು ವ್ಯಂಗ್ಯವಾಡಿದರು.











Click it and Unblock the Notifications