ರಾಮನಗರದಲ್ಲಿ ಸ್ವಪಕ್ಷದ ವಿರುದ್ಧವೇ ಗುಡುಗಿದ ಸಿ.ಪಿ.ಯೋಗೇಶ್ವರ್
ರಾಮನಗರ, ಆಗಸ್ಟ್, 24: ''ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಎನ್ನುವ ಸುದ್ದಿ ಕೇವಲ ವದಂತಿ ಆಗಿದೆ. ನನ್ನ ಮುಂದಿನ ರಾಜಕೀಯ ಜೀವನ ಬಿಜೆಪಿ ಪಕ್ಷದಲ್ಲಿ ಮಾತ್ರ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ರಾಮನಗರದಲ್ಲಿ ಸ್ಪಷ್ಟನೆ ನೀಡಿದರು. ಮತ್ತು ಸ್ವಪಕ್ಷದಲ್ಲಿ ನನ್ನ ವಿರುದ್ಧವೇ ಸಂಚು ರೂಪಿಸಿದ್ದಾರೆ'' ಎಂದು ಗಂಭೀರ ಆರೋಪ ಮಾಡಿದರು.
ಹೀಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ಅಲ್ಲಗೆಳೆದರು. ಯೋಗೇಶ್ವರ್ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ನಗರದ ಹೊರ ವಲಯದ ಜಾನಪದ ಲೋಕ ಬಳಿಯ ಕಾಮತ್ ವಿಹಾರಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಅಲ್ಲಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ಅಲ್ಲಗೆಳೆದರು.
"ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ನನ್ನನ್ನು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಾರೆ ಅನ್ನುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಕೆಲವರು ಸುಖಾ ಸುಮ್ಮನೆ ಗೊಂದಲ ಸೃಷ್ಟಿಸಿ, ಬಿಜೆಪಿ ಪಕ್ಷದಲ್ಲಿ ನನ್ನ ಬಗ್ಗೆ ಅಪನಂಬಿಕೆ ಸೃಷ್ಠಿಸಲು ಹುನ್ನಾರ ನಡೆಸಿದ್ದಾರೆ ಅಷ್ಟೇ. ನನ್ನ ಮುಂದಿನ ರಾಜಕೀಯ ಜೀವನ ಬಿಜೆಪಿಯಲ್ಲಿ ಮಾತ್ರ," ಎಂದು ಸಿ.ಪಿ.ಯೋಗೇಶ್ವರ್ ತಮ್ಮ ನಿರ್ಧಾರವನ್ನು ಹೇಳಿದರು.

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿ.ಪಿ.ವೈ ನಿಲುವು?
''ಕಾಂಗ್ರೆಸ್ ಹಾಗೂ ನನ್ನ ನಡುವೆ ಯಾವುದೇ ಸಂಬಂಧ, ಸಂಪರ್ಕ ಇಲ್ಲ. ಇವತ್ತಿನ ಕಾಂಗ್ರೆಸ್ ಸ್ಥಿತಿ ನೋಡಿದರೆ ಅವರು ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಹಾಗಾಗಿ ನಾನು ಅವರ ಪಕ್ಷಕ್ಕೆ ಹೋದರೆ ಅನುಕೂಲ ಆಗುತ್ತದೆ ಎನ್ನುವ ದೃಷ್ಟಿಯಿಂದ ವದಂತಿ ಸೃಷ್ಠಿಸುತ್ತಿದ್ದಾರೆ. ನನ್ನನ್ನು ಇತರೆ ಪಕ್ಷದ ಮುಖಂಡರು ಸಂಪರ್ಕಿಸುವ ಧೈರ್ಯವು ಇಲ್ಲ. ನನಗೆ ಅದರ ಅನಿವಾರ್ಯತೆಯೂ ಇಲ್ಲ. ಕಾಂಗ್ರೆಸ್ ಪಕ್ಷದವರು ಭ್ರಮೆಯಲ್ಲಿದ್ದಾರೆ'' ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದರು.

ಸಿ.ಪಿ.ಯೋಗೇಶ್ವರ್ ಸಿಡಿಸಿದ ಹೊಸ ಬಾಂಬ್?
ನಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತು ಇರಲಿ, ಅನ್ಯ ಪಕ್ಷಗಳ ಮುಖಂಡು 15 ರಿಂದ 20 ಜನ ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಹೆಚ್ಚು ಯುವ ನಾಯಕರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದರು.

ಗೆಲುವಿನ ಭವಿಷ್ಯ ನುಡಿದ ಸಿ.ಪಿ.ಯೋಗೇಶ್ವರ್
ಮಂಡ್ಯದಲ್ಲಿ ನಾಲ್ಕೈದು ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಸಚ್ಚಿದಾನಂದ, ಮದ್ದೂರಿನಲ್ಲಿ ಉದಯಗೌಡರಿಗೆ ಪಕ್ಷಕ್ಕೆ ಬರುವಂತೆ ಅಹ್ವಾನ ಮಾಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಭವಿಷ್ಯ ನುಡಿದರು.

ನಮ್ಮ ಪಕ್ಷದಲ್ಲೇ ನನ್ನ ವಿರುದ್ಧ ಸಂಚು ಎಂದ ಸಿ.ಪಿ.ವೈ
ಕಾಂಗ್ರೆಸ್ ನನಗೆ ಎಂದಿಗೂ ಮಾತೃ ಪಕ್ಷ ಆಗಿಲ್ಲ. ನಾನು ಮೊದಲ ಬಾರಿಗೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಗೆದ್ದಿದ್ದು, ನಂತರ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಾರಿ ಸ್ವರ್ಧೆ ಮಾಡಿದ್ದೇನೆ. 2009 ರಲ್ಲಿ ಬಿಜೆಪಿ ಸೇರಿದ್ದು, ಅಲ್ಲಿಂದ ಇಲ್ಲಿಯವರೆಗೂ ಸಿದ್ಧಾಂತವನ್ನು ಪಾಲಿಸುವುದರ ಮೂಲಕ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. "ಈ ಮಧ್ಯೆ ಬಿಜೆಪಿಯು ಮೂರು ಹೋಳು ಆದಾಗ ಪಕ್ಷ ತೊರೆದು ಸ್ವತಂತ್ರ್ಯವಾಗಿ ಸ್ವರ್ಧಿಸಿದ್ದೇನೆ." ನಂತರದ ದಿನಗಳಲ್ಲಿ ಮತ್ತೆ ನನ್ನ ಮಾತೃ ಪಕ್ಷ ಬಿಜೆಪಿಗೆ ಸೇರಿಕೊಂಡೆ. ಬಿಜೆಪಿ ನನಗೆ ನಾಲ್ಕು ಬಾರಿ ಸ್ವರ್ಧೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಬಿಜೆಪಿ ಪಕ್ಷ ಹಳೇ ಮೈಸೂರು ಭಾಗದಲ್ಲಿ ಗಟ್ಟಿಯಾಗಿ ನೆಲೆ ಊರುತ್ತಿದೆ. ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಈ ರೀತಿ ಗೊಂದಲ ಸೃಷ್ಟಿಸಿ ನಮ್ಮ ಪಕ್ಷದಲ್ಲೆ ನನ್ನ ವಿರುದ್ಧ ಸಂಚು ನಡೆಸುತ್ತಿದ್ದಾರೆ ಎಂದು ಸ್ವಪಕ್ಷ ಬಿಜೆಪಿ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗಂಭೀರ ಆರೋಪ ಮಾಡಿದರು.












Click it and Unblock the Notifications