ರಾಮನಗರ: 9 ತಿಂಗಳ ಹಿಂದೆ ಮೃತಪಟ್ಟ ಮಹಿಳೆಗೂ ಕೋವಿಡ್ ಬೂಸ್ಟರ್ ಡೋಸ್!
ರಾಮನಗರ, ಮೇ 8: ಕೋವಿಡ್ 4ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ, ಮುಂಜಾಗ್ರತೆಯಾಗಿ ಜನರಿಗೆ ಕೊರೋನಾ ಮೂರನೇ ಡೋಸ್ ನೀಡುವುದನ್ನು ಚುರುಕುಗೊಳಿಸಿದ್ದೇವೆ ಎಂಬುದನ್ನು ಬಿಂಬಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ ರಾಮನಗರ ವೈದ್ಯರು 9 ತಿಂಗಳ ಹಿಂದೆಯೇ ಮೃತಪಟ್ಟ ಮಹಿಳೆಗೆ ಕೋವಡ್ ಮೂರನೇ ಲಸಿಕೆ ಹಾಕಿದ್ದೇವೆ ಎಂದು ವರದಿ ನೀಡಿ ಪ್ರಮಾದ ಎಸಗಿದ್ದಾರೆ.
9 ತಿಂಗಳ ಹಿಂದೆ ಮೃತಪಟ್ಟಿರುವ ರಂಗನಾಯಕಮ್ಮ ಎಂಬುವರ ನೊಂದಾಯಿತ ಮೊಬೈಲ್ ನಂಬರ್ ಗೆ ಮೇ 6 ರಂದು ಮುಂಜಾಗ್ರತಾ ಕೋವಿಡ್ ಮೂರನೇ ಡೋಸ್ ನೀಡಿರುವ ಬಗ್ಗೆ ಸಂದೇಶ ರವಾನಿಸಿ ಆರೋಗ್ಯ ಇಲಾಖೆ ಚಮತ್ಕಾರ ಸೃಷ್ಟಿ ಮಾಡಿದೆ.
ಪಟ್ಟಣದ ಅಗ್ರಹಾರ ಬಡಾವಣೆಯ ನಿವಾಸಿ ರಂಗನಾಯಕಮ್ಮ ಆರ್. ಎಂಬುವರು 2021ರ ಆಗಸ್ಟ್ 16 ರಂದು ಮೃತಪಟ್ಟಿದ್ದಾರೆ. ಮೇ 6 ಶುಕ್ರವಾರ ಮಧ್ಯಾಹ್ನ ಅವರಿಗೆ ಮೂರನೇ ಡೋಸ್ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ ಎಂಬ ಸಂದೇಶ ಅವರ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬಂದಿದೆ. ಹಿಂದೆಯೇ ಮೃತಪಟ್ಟಿರುವ ರಂಗನಾಯಕಮ್ಮ ನವರಿಗೆ ನಗರದ ರಾಯರ ದೊಡ್ಡಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಲ್ಪನಾ ಎಂಬ ನರ್ಸ್ ಕೋವಿಶೀಲ್ಡ್ ಮೂರನೇ ಡೋಸ್ ನೀಡಿದ್ದಾರೆ ಎಂಬ ಪ್ರಮಾಣ ಪತ್ರವೂ ಕೋವಿನ್ ವೆಬ್ಸೈಟ್ನಲ್ಲಿ ಸೃಷ್ಠಿಯಾಗಿದೆ.

ಆರ್.ಸಿ.ಎಚ್ ಡಾ.ಪದ್ಮ ಪ್ರತಿಕ್ರಿಯೆ
ಅರೋಗ್ಯ ಇಲಾಖೆಯ ಎಡವಟ್ಟು ಸಮರ್ಥನೆಗೆ ಮುಂದಾದ ಪ್ರಾದೇಶಿಕ ಆರೋಗ್ಯಾಧಿಕಾರಿ ಡಾ.ಪದ್ಮಾ, "ಒಂದೇ ಕುಟುಂಬದಲ್ಲಿನ ಐವರು ಸದಸ್ಯರಿಗೆ ಒಂದೇ ಮೊಬೈಲ್ ಸಂಖ್ಯೆ ಕೊಡಲು ಅವಕಾಶವಿದೆ. ಸಂದೇಶ ತಲುಪಿರುವ ಮೊಬೈಲ್ ಸಂಖ್ಯೆ ನೀಡಿ ಕುಟುಂಬದ ಬೇರೆ ವ್ಯಕ್ತಿ ಲಸಿಕೆ ಪಡೆದುಕೊಂಡಿದ್ದರೆ, ಆ ಕುಟುಂಬದ ಅನ್ಯ ಸದಸ್ಯರ ಹೆಸರಿನಲ್ಲಿ ಈ ಪ್ರಮಾಣಪತ್ರ ಸೃಷ್ಠಿಯಾಗಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ,'' ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಸಮಜಾಯಿಷಿ ನೀಡಿದ್ಧಾರೆ.

ದಿ.ರಂಗನಾಯಕಮ್ಮ ಮೊಮ್ಮಗನ ಪ್ರತಿಕ್ರಿಯೆ
ಅರೋಗ್ಯ ಇಲಾಖೆಯ ಅಧಿಕಾರಿಗಳ ಸಮಜಾಯಿಷಿ ನಿರಾಕರಿಸಿರುವ ರಂಗನಾಯಕಮ್ಮನವರ ಮೊಮ್ಮಗ ಲಿಖಿತ್, "ನಮ್ಮ ಅಜ್ಜಿ ಮೃತ ಪಟ್ಟು 9 ತಿಂಗಳಾಗಿದೆ. ಲಸಿಕೆ ಕೊಟ್ಟಿರುವುದಾಗಿ ಸಂದೇಶ ಬಂದಿದೆ. ಪ್ರತಿ ಡೋಸ್ ಕೊಡುವ ಮುನ್ನ ಓಟಿಪಿ ವ್ಯವಸ್ಥೆ ಅಥವಾ ಇನ್ನಾವುದೇ ವ್ಯವಸ್ಥೆ ಜಾರಿಯಾದರೆ ಇಂತಹ ಎಡವಟ್ಟುಗಳು ಬಹುಶಃ ತಡೆಯಬಹುದು. ನಮ್ಮ ಕುಟುಂಬದಲ್ಲಿ ಯಾರೊಬ್ಬರು ಇತ್ತೀಚಿನ ದಿನಗಳಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡಿಲ್ಲ,'' ಎಂದು ಸ್ಪಷ್ಟಪಡಿಸಿದ್ದಾರೆ.

ಅರ್ಹತೆ ಇಲ್ಲದವರಿಗೆ ಮೂರನೇ ಡೋಸ್
ಕೋವಿಡ್ ಮೂರನೇ ಡೋಸ್ ಪಡೆಯಲು 60 ವರ್ಷ ತುಂಬಿರಬೇಕು ಎಂಬ ಸರ್ಕಾರದ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿನ ಭೀತಿಯಿಂದ 60 ವರ್ಷ ತುಂಬದ ಜನರು ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಕಾಡಿ ಬೇಡಿ ಮೂರನೇ ಲಸಿಕೆ ಪಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅರ್ಹತೆ ಇಲ್ಲದ ವ್ಯಕ್ತಿಗಳಿಗೆ ಮೂರನೇ ಡೋಸ್ ನೀಡಲು ಆರೋಗ್ಯ ಇಲಾಖೆಯ ಸಿಬ್ಬಂದಿ ನೊಂದಾಯಿತ ಅನ್ಯರ ಮೊಬೈಲ್ ಸಂಖ್ಯೆಯನ್ನು ದುರುಪಯೋಗ ಮಾಡಿಕೊಂಡ ಹಿನ್ನೆಲೆಯಲ್ಲಿಇಂತಹ ಪ್ರಮಾದಗಳು ನಡೆಯುತ್ತಿವೆ ಎನ್ನುತ್ತಾರೆ ಸಾರ್ವಜನಿಕರು.
ಕೊರೋನಾ ಮೊದಲನೇ ಡೋಸ್ ಲಸಿಕೆ ಪಡೆಯಲು ಮಾತ್ರ ಲಸಿಕೆ ಕೊಡುವ ಸಮಯದಲ್ಲಿ ಆರೋಗ್ಯ ಸಿಬ್ಬಂದಿಗಳು ಓಟಿಪಿ ಕೇಳುತ್ತಾರೆ. ಎರಡು ಮತ್ತು ಮೂರನೇ ಡೋಸ್ ನೀಡುವ ಸಮಯದಲ್ಲಿ ಓಟಿಪಿ ಅಗತ್ಯವಿಲ್ಲ. ಹೀಗಾಗಿಯೇ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಡಿದ್ದೇ ಆಟವಾಗಿದೆ ಎಂದು ನಾಗರೀಕರು ಆರೋಪಿಸಿದ್ದಾರೆ. ಕೋವಿಡ್ ಲಸಿಕೆ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಶೇ 100 ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಂಡಿರುವ ರಾಮನಗರ ಆರೋಗ್ಯ ಇಲಾಖೆಯ ಹೇಳಿಕೆಯ ಬಗ್ಗೆ ನಾಗರೀಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಲಸಿಕೆ ಸಂದೇಶಗಳು ನಗೆಪಾಟಲಿಗೆ !
ಕೋವಿಡ್ ಮೂರನೇ ಡೋಸ್ ಅಭಿಯಾನದಲ್ಲೂ ಗಮನಾರ್ಹ ಸಾಧನೆ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳಲು ಸತ್ತವರಿಗೂ ಲಸಿಕೆ ಹಾಗೂ ಲಸಿಕೆ ಪಡೆಯದಿದ್ದವರಿಗೂ ಲಸಿಕೆ ಕೊಟ್ಟಿರುವ ಸಂದೇಶಗಳು ನಗೆಪಾಟಲಿಗೆ ಕಾರಣವಾಗಿದೆ. ಎರಡನೇ ಡೋಸ್ ಪಡೆಯದಿದ್ದ ಗರ್ಭಿಣಿಯೊಬ್ಬರಿಗೆ ಎರಡನೇ ಡೋಸ್ ಲಸಿಕೆ ಪಡೆದಿದ್ದೀರಿ ಎಂಬ ಸಂದೇಶ ರವಾನೆಯಾಗಿದೆ. ಇಂತಹ ಅನೇಕ ಎಡವಟ್ಟಿನ ಪ್ರಕರಣಗಳು ನಾಗರೀಕರ ವಲಯದಲ್ಲಿ ದಿನನಿತ್ಯ ಕೇಳಿ ಬರುತ್ತಲೇ ಇದೆ. ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ನಿಮಗೆ ಲಸಿಕೆ ಬೇಕಲ್ಲವೇ, ಬನ್ನಿ ಕೊಡುತ್ತೇವೆ ಎಂಬ ಉಡಾಫೆ ಉತ್ತರ ನೀಡುತ್ತಾರೆ ಎಂದು ನಾಗರೀಕರು ಆರೋಪಿಸಿದ್ದಾರೆ.
ಕೋವಿಡ್ ಸೋಂಕಿನ ವೇಳೆ ತಮ್ಮ ಆರೋಗ್ಯವನ್ನು ಪಣಕ್ಟಿಟ್ಟು ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ ನಾಗರೀಕರ ಆರೋಗ್ಯ ಕಾಪಾಡಲು ಶ್ರಮಿಸಿದ್ದಾರೆ. ಕೆಲವು ಸಿಬ್ಬಂದಿಗಳು ಮಾಡುವ ಎಡವಟ್ಟಿನಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು. ಕೋವಿನ್ ತಂತ್ರಾಂಶದಲ್ಲೇ ಲೋಪವಿದ್ದರೆ ಸರಿಪಡಿಸಲು ಹಿರಿಯ ಅಧಿಕಾರಿಗಳು ಕ್ರಮವಹಿಸಬೇಕು. ಆರೋಗ್ಯ ಇಲಾಖೆಯ ಬಗ್ಗೆ ಜನತೆಗೆ ಇರುವ ವಿಶ್ವಾಸವನ್ನು ಇನ್ನಷ್ಟು ಬಲಪಡಿಸ ಬೇಕು ಎಂದು ವ್ಯಾಪಾರಿ ಪಿ.ವಿ.ಬದ್ರಿನಾಥ ಆಗ್ರಹಿಸಿದ್ದಾರೆ.












Click it and Unblock the Notifications