Chennapatna By Poll: ಮೂರು ಪಕ್ಷದ ನಿದ್ದೆ ಕದ್ದ ಚನ್ನಪಟ್ಟಣದ ಬ್ರೇಕಿಂಗ್ ನ್ಯೂಸ್!
ರಾಮನಗರ, ಆಗಸ್ಟ್ 10: ಕೇಂದ್ರ ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಬಹುದು. ಲೋಕಸಭೆ ಚುನಾವಣೆ 2024ರ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಈ ಪೈಕಿ ಚನ್ನಪಟ್ಟಣದ ಉಪ ಚುನಾವಣೆ ಕುತೂಹಲ ಮೂಡಿಸಿದೆ.
ಚನ್ನಪಟ್ಟಣದ ಶಾಸಕರಾಗಿದ್ದ ಎಚ್. ಡಿ. ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಕಣಕ್ಕಿಳಿದು ಗೆದ್ದರು. ಬಳಿಕ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ಮಂಡ್ಯ ಸಂಸದರಾದ ಅವರು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು. ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ಕಾರಣಕ್ಕೆ ಈಗ ಚನ್ನಪಟ್ಟಣಕ್ಕೆ ಉಪ ಚುನಾವಣೆ ಎದುರಾಗಿದೆ.

2023ರ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ. ವಿಧಾನ ಪರಿಷತ್, ಲೋಕಸಭೆ ಚುನಾವಣೆಯನ್ನು ಸೀಟು ಹಂಚಿಕೆ ಮಾಡಿಕೊಂಡು ಮೈತ್ರಿಕೂಟ ಎದುರಿಸಿದೆ. ಈಗ ಮೂರು ಕ್ಷೇತ್ರಗಳ ಉಪ ಚುನಾವಣೆಯನ್ನು ಸಹ ಸೀಟು ಹಂಚಿಕೆ ಮೂಲಕವೇ ಎದುರಿಸಲಿವೆ. ಹಾಗಾದರೆ ಚನ್ನಪಟ್ಟಣ ಬಿಜೆಪಿಗೋ?, ಜೆಡಿಎಸ್ ಪಕ್ಷಕ್ಕೋ? ಎಂಬುದು ಎಲ್ಲರ ಪ್ರಶ್ನೆ.
ಸಿ. ಪಿ. ಯೋಗೇಶ್ವರ ಟಿಕೆಟ್ ಆಕಾಂಕ್ಷಿ: ಚನ್ನಪಟ್ಟಣದ ಚುನಾವಣೆ ಎಂದರೆ ಎಚ್. ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ. ಪಿ. ಯೋಗೇಶ್ವರ ನಡುವಿನ ಹೋರಾಟ. ಆದರೆ ಈಗ ಮೈತ್ರಿಕೂಟದ ಪರಿಣಾಮವಾಗಿ ಇಬ್ಬರೂ ಒಂದಾಗಿದ್ದಾರೆ. ಚನ್ನಪಟ್ಟಣದ ಉಪ ಚುನಾವಣೆ ಘೋಷಣೆಯಾದರೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಸಿ. ಪಿ. ಯೋಗೇಶ್ವರ ಇದ್ದಾರೆ.
ಆದರೆ ಚನ್ನಪಟ್ಟಣ ಜೆಡಿಎಸ್ಗೆ ಸಿಗಬೇಕು, ಅಭ್ಯರ್ಥಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯಬೇಕು ಎಂದು ಎಚ್. ಡಿ. ಕುಮಾರಸ್ವಾಮಿ ಬೇಡಿಕೆ ಇಟ್ಟಿದ್ದಾರೆ. ಮತ್ತೊಂದು ಕಡೆ ಸಿ. ಪಿ. ಯೋಗೇಶ್ವರ ಬೆಂಬಲಿಸಲು ಸ್ಥಳೀಯ ಜೆಡಿಎಸ್ ನಾಯಕರು ಅಪಸ್ವರ ಎತ್ತಿದ್ದಾರೆ. ಆದ್ದರಿಂದ ಟಿಕೆಟ್ ಕೈತಪ್ಪುವ ಭೀತಿಯಲ್ಲಿರುವ ಯೋಗೇಶ್ವರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಚಿಂತನೆ ನಡೆಸಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಚನ್ನಪಟ್ಟಣದಿಂದ ಬಂದಿದೆ. ಇದು ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೂರು ಪಕ್ಷಗಳ ನಿದ್ದೆ ಕದ್ದಿದೆ.
ಸಿ. ಪಿ. ಯೋಗೇಶ್ವರ ಚನ್ನಪಟ್ಟಣದಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ ಎಂಬುದು ಮೂರು ಪಕ್ಷಗಳಿಗೂ ಗೊತ್ತು. ಆದ್ದರಿಂದ ಉಪ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾದರೆ ಗೆಲುವಿನ ಲೆಕ್ಕಾಚಾರವೆಲ್ಲ ತಲೆಕೆಳಗಾಗಲಿದೆ. ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಜೆಪಿ ಹೀಗೆ ವಿವಿಧ ಪಕ್ಷಗಳಿಂದ ಚುನಾವಣೆಗೆ ನಿಂತು ಕ್ಷೇತ್ರದಲ್ಲಿ ಯೋಗೇಶ್ವರ ಸೋಲು-ಗೆಲುವು ಕಂಡಿದ್ದಾರೆ.
ಸದ್ಯ ಬಿಜೆಪಿಯಲ್ಲಿರುವ ಸಿ. ಪಿ. ಯೋಗೇಶ್ವರ ಹಾಲಿ ವಿಧಾನ ಪರಿಷತ್ ಸದಸ್ಯರು. ಅವರ ಸದಸ್ಯತ್ವದ ಅವಧಿ 2026ರ ತನಕ ಇದೆ. ಚನ್ನಪಟ್ಟಣ ಉಪ ಚುನಾವಣೆಗೆ ಅವರು ಜೆಡಿಎಸ್ನಿಂದ ಸ್ಪರ್ಧಿಸಬೇಕಾದರೆ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು, ಉಪ ಚುನಾವಣೆ ಗೆದ್ದರೆ ಮಾತು ಬೇರೆ, ಸೋಲು ಕಂಡರೆ ರಾಜಕೀಯ ಭವಿಷ್ಯದ ಚಿಂತೆ ಎದುರಾಗಲಿದೆ. ಅಲ್ಲದೇ ಬಿಜೆಪಿಯಿಂದ ಟಿಕೆಟ್ ಸಿಗುವ ಕುರಿತು ಇನ್ನೂ ಯಾವುದೇ ಭರವಸೆ ಸಿಕ್ಕಿಲ್ಲ. ಮೈಸೂರು ಚಲೋ ಪಾದಯಾತ್ರೆಯಿಂದಲೂ ಅವರು ದೂರ ಉಳಿದಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಮಾಹಿತಿಗಳ ಪ್ರಕಾರ ಸಿ. ಪಿ. ಯೋಗೇಶ್ವರ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದು ಎರಡು ದಿನಗಳ ಹಿಂದೆ ಆಪ್ತರ ಸಭೆ ನಡೆಸಿದ್ದಾರೆ. ಆಗಸ್ಟ್ 11ರಂದು ಚನ್ನಪಟ್ಟಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಅವರು ತಮ್ಮ ತೀರ್ಮಾನವನ್ನು ಪ್ರಕಟಿಸಲಿದ್ದಾರೆ. ಇದಕ್ಕೂ ಮೊದಲು ದೆಹಲಿಯ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.
ಚನ್ನಪಟ್ಟಣದ ಬಿಜೆಪಿ ಟಿಕೆಟ್ ಖಚಿತವಾದರೆ ತಮ್ಮ ನಡೆಯನ್ನು ಸಿ. ಪಿ. ಯೋಗೇಶ್ವರ ಹಿಂದೆ ಇಡಬಹುದು ಎಂಬುದು ಲೆಕ್ಕಾಚಾರವಾಗಿದೆ. ಚನ್ನಪಟ್ಟಣದ ಉಪ ಚುನಾವಣೆ ಬಿಜೆಪಿ-ಜೆಡಿಎಸ್, ಕಾಂಗ್ರೆಸ್ ಪಕ್ಷಕ್ಕೆ ಬಹಳ ಮುಖ್ಯವಾಗಿದೆ. ಚುನಾವಣೆಯಲ್ಲಿ ದೊಡ್ಡ ದೊಡ್ಡ ನಾಯಕರ ಪ್ರತಿಷ್ಠೆ ಅಡಗಿದೆ. ಆದ್ದರಿಂದ ಪಕ್ಷಗಳು ಸಹ ಎಚ್ಚರಿಕೆ ಹೆಜ್ಜೆ ಇಡಬೇಕಿದೆ.
ಚನ್ನಪಟ್ಟಣಕ್ಕೆ ಮೈತ್ರಿ ಅಭ್ಯರ್ಥಿ ಅಂತಿಮವಾಗಿಲ್ಲ. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿಯೂ ಅಂತಿಮವಾಗಿಲ್ಲ. ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಸಹ ಹಬ್ಬಿವೆ.












Click it and Unblock the Notifications