ರಾಮನಗರದಲ್ಲಿ ಬಸ್ ತಂಗುದಾಣಕ್ಕೆ ಕಾರು ನುಗ್ಗಿ 6 ಮಂದಿ ದುರ್ಮರಣ
ರಾಮನಗರ, ಅಕ್ಟೋಬರ್ 20: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಲಕ್ಕೇನಹಳ್ಳಿ ಬಳಿಯ ಸಾವಕಾರ್ಪಾಳ್ಯದಲ್ಲಿ (ನೆಲಮಂಗಲ ಸಮೀಪ) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗುರುವಾರ ಸಂಜೆ ಈ ಘಟನೆ ನಡೆದಿದೆ.
ಗಾಯಾಳುಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ ಕೆಂಪರಾಜು (38), ಪತ್ನಿ ಮಮತ (30), ಪುತ್ರಿ ಸೌಮ್ಯ (10), ಪುತ್ರ ಸಂಜಯ್ (2) ತುರುವೇಕೆರೆಯ ಜಡೇಮಾಯಸಂದ್ರದ ಮುತ್ತುಕದಹಳ್ಳಿ ಗ್ರಾಮದವರಾಗಿದ್ದಾರೆ. ಇನ್ನು ಬೆಂಗಳೂರಿನ ನಾಗವಾರದ ನಿವಾಸಿಗಳಾದ ಸಾಜನ್ (24) ಮತ್ತು ನವೀದ್ (25) ಸಹ ಮೃತಪಟ್ಟಿದ್ದಾರೆ ಎಂದು ಕುದೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ಊಟಕ್ಕೆ ಕುಳಿತಿದ್ದವರ ಮೇಲೆ ಹರಿದ ಕಾರು
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಲಕ್ಕೇನಹಳ್ಳಿ ಬಳಿ ಸಾವಕಾರ್ಪಾಳ್ಯದ ತಂಗುದಾಣದಲ್ಲಿ ತುರುವೆಕೆರೆ ತಾಲೂಕಿನ ಜಡೇಮಾಯಸಂದ್ರದ ಮುತ್ತುಕದ ಹಳ್ಳಿ ಗ್ರಾಮದ ಒಂದೇ ಕುಟುಂಬದವರು ಊಟಕ್ಕೆ ಕುಳಿತಿದ್ದರು. ಈ ಸಂದರ್ಭ ಬೆಂಗಳೂರಿನ ಕಡೆಯಿಂದ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಊಟಕ್ಕೆ ಕುಳಿತಿದ್ದವರ ಮೇಲೆ ಹರಿದಿದ್ದು ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ.
ನಜ್ಜು ಗುಜ್ಜಾದ ಕಾರು
ಆರಂಭದಲ್ಲಿ ಬೈಕ್ ಸವಾರರು ಅನಂತರ ತಂಗುದಾಣಕ್ಕೂ ಡಿಕ್ಕಿ ಹೊಡೆದು ನಂತರ ಕಾರು ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದು ನಾಲ್ವರಿಗೆ ಗಾಯಗಳಾಗಿವೆ. ಕಾರು ಗುದ್ದಿದ ರಭಸಕ್ಕೆ ಅರ್ಧಕ್ಕೆ ಮುರಿದ ತಂಗುದಾಣ, ಚೆಲ್ಲಾಡಿದ ರಕ್ತ, ನಜ್ಜುಗುಜ್ಜಾದ ಕಾರು ಅಪಘಾತ ಭೀಕರತೆಯನ್ನು ಸಾರಿ ಹೇಳುತ್ತಿದೆ.
ಕುಣಿಗಲ್ ನತ್ತ ತೆರಳುತ್ತಿದ್ದ ಕಾರು
ಸ್ಕಾರ್ಪಿಯೋ (KA 01 AF8248) ಕಾರು ಬೆಂಗಳೂರಿನ ಸುಂಕದ ಕಟ್ಟೆಯಿಂದ ಕುಣಿಗಲ್ನ ಬಿದನಗೆರೆಗೆ ತೆರಳುತ್ತಿತ್ತು ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣವಾಗಿದೆ.
ಟ್ರಾಫಿಕ್ ಜಾಂ
ಅಪಘಾತ ನಡೆದ ಹಿನ್ನಲೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಉಂಟಾಗಿತ್ತು. ಕುದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಘಟನೆ ಕುರಿತು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.