ಪಾದಯಾತ್ರೆಯಲ್ಲಿ ರಾಮನಗರ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು ಗೈರು
ರಾಮನಗರ, ಜುಲೈ. 26: ರೈತರ ಸಂಪೂರ್ಣ ಸಾಲಮನ್ನಾಗೆ ಆಗ್ರಹಿಸಿ ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದ ಕೆಂಗಲ್ ಬಳಿಯಿಂದ ಬಿಜೆಪಿ ನೇತೃತ್ವದಲ್ಲಿ ಪ್ರಾರಂಭವಾದ ಪಾದಯಾತ್ರೆಯಲ್ಲಿ ಜಿಲ್ಲೆಯ ಪ್ರಮುಖ ಮುಖಂಡರು ಗೈರಾಗುವ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ.
ಪಾದಯಾತ್ರೆಯಲ್ಲಿ ಬಿಜೆಪಿ ಶಾಸಕರಾದ ಕುಮಾರ್ ಬಂಗಾರಪ್ಪ, ರೇಣುಕಾ ಚಾರ್ಯ, ಎಂಎಲ್ ಸಿ ಆ.ದೇವೇಗೌಡ, ತೇಜಸ್ವಿನಿ, ರೈತ ಸಂಘದ ರಾಜ್ಯಧ್ಯಕ್ಷ ಲಕ್ಷ್ಮಿ ನಾರಾಯಣಗೌಡ, ಚಿತ್ರ ನಟ ಶ್ರೀನಗರ ಕಿಟ್ಟಿ
ಸೇರಿದಂತೆ ನೂರಾರು ಉತ್ತರ ಕರ್ನಾಟಕದ ರೈತರು ಭಾಗಿಯಾಗಿದ್ದರು.
ಆದರೆ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಮಾಜಿ ಸಚಿವ ಯೋಗೇಶ್ವರ್, ನಂದಿನಿಗೌಡ , ಲೀಲಾವತಿ ಮತ್ತು ಹನುಮಂತರಾಜು ಪಾದಯಾತ್ರೆಯಲ್ಲಿ ಭಾಗವಹಿಸದೆ ಇರುವುದು ಅಚ್ಚರಿಗೆ ಕಾರಣವಾಗಿದೆ.

ಕಾಂಗ್ರೆಸ್ ತೊರೆದು ಕಮಲ ತಕ್ಕೆಗೆ ಜಾರಿದ ಸಿಪಿವೈ ಹಳೆ ಮೈಸೂರು ಭಾಗದ ನಾಯಕತ್ವ ವಹಿಸಿಕೊಂಡು ಕಮಲ ಅರಳಿಸುವುದಾಗಿ ತಿಳಿಸಿದರು. ಆದರೆ ಕಳೆದ ಚುನಾವಣೆಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ ಯೋಗೇಶ್ವರ್ ಕ್ಷೇತ್ರಕ್ಕೆ ಬಂದು ಮತದಾರರಿಗೆ ಕೃತಘ್ನತೆ ಸಲ್ಲಿಸಿದ್ದು ಬಿಟ್ಟರೆ ಜಿಲ್ಲೆಯ ಯಾವುದೇ ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ.
ಮಾಗಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹನುಮಂತರಾಜು ಸೋತ ಬಳಿಕ ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸುತ್ತಿಲ್ಲ. ಕನಕಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡ ನಂದಿನಿಗೌಡ ಅತ್ಮಾವಲೋಕನ ಸಭೆ ಮಾಡಿದ್ದು ಬಿಟ್ಟರೆ ಪಕ್ಷದ ಕಾರ್ಯಕ್ರಮಗಳಿಂದ ವಿಮುಖರಾಗಿದ್ದಾರೆ.
ರಾಮನಗರ ಕ್ಷೇತ್ರದಿಂದ ಸಿಎಂ ವಿರುದ್ಧ ಸ್ಪರ್ಧೆಗೆ ಪಕ್ಷದ ವರಿಷ್ಠರಿಂದ ಬಿ ಫಾರಂ ಪಡೆಯುವಲ್ಲಿ ಯಶಸ್ವಿಯಾದ ಲೀಲಾವತಿ ತಾಲೂಕು ಮುಖಂಡರ ವಿರೋಧ ನಡುವೆಯು ಚುನಾವಣೆಗೆ ಸ್ಪರ್ಧಿಸಿ ಸೋಲುಂಡ ನಂತರ ಪಕ್ಷದ ಕಾರ್ಯಕ್ರಮಗಳತ್ತ ಮುಖ ಮಾಡಿಲ್ಲ.

ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಯಕರು ಚುನಾವಣೆಯ ನಂತರ ಕಾರ್ಯಕರ್ತರಿಗೆ ಸಿಗುತ್ತಿಲ್ಲ. ಇನ್ನು ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಜನಪರ ಹೋರಾಟದಲ್ಲೂ ಭಾಗವಹಿಸದೆ ಜಿಲ್ಲೆಯ ಮುಖಂಡರು ತಮ್ಮ ಚಾಳಿ ಮುಂದುವರಿಸಿದ್ದಾರೆ.












Click it and Unblock the Notifications