ಕಪಾಲ ಬೆಟ್ಟದ ಜಮೀನನ್ನು ಭೂ ರಹಿತ ರೈತರಿಗೆ ಹಂಚಿ ಎಂದ ಬಿಜೆಪಿ ನಿಯೋಗ
ರಾಮನಗರ, ಜನವರಿ 02: ಕನಕಪುರ ತಾಲ್ಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಜಗತ್ತಿನ ಎತ್ತರದ ಏಸು ಕ್ರೈಸ್ತನ ಪ್ರತಿಮೆ ನಿರ್ಮಾಣಕ್ಕೆ ನೀಡಿರುವ ಸರ್ಕಾರಿ ಗೋಮಾಳದ ಜಮೀನನ್ನು ವಾಪಸ್ ಪಡೆದು ಈಗಾಗಲೇ ಕೃಷಿ ನಡೆಸಲು ಅರ್ಜಿ ಸಲ್ಲಿಸಿರುವ ಭೂಮಿ ರಹಿತ ರೈತರಿಗೆ ಹಂಚಲು ರಾಮನಗರ ಜಿಲ್ಲಾ ಬಿಜೆಪಿ ನಿಯೋಗ.ಒತ್ತಾಯಿಸಿದೆ.
ವಿವಾದಿತ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಜಿಲ್ಲಾ ಬಿಜೆಪಿ ನಿಯೋಗ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿವಾದಿತ ಸ್ಥಳದಲ್ಲಿಯೇ ಜೈ ಮುನೇಶ್ವರ ಎಂದು ಘೋಷಣೆಗಳನ್ನ ಕೂಗಿ ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಬಿಡವುದಿಲ್ಲವೆಂದು ಎಚ್ಚರಿಕೆ ನೀಡಿದರು.

ಇನ್ನೂ ಕಂದಾಯ ಸಚಿವರು, ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದಾರೆ, ನಾವು ಕೂಡ ಸರ್ಕಾರಕ್ಕೆ ವರದಿ ನೀಡುತ್ತೇವೆ. ಈ ಜಾಗಕ್ಕೆ ಅಕ್ರಮವಾಗಿ ಕಲ್ಲುಗಳನ್ನು ತಂದು ಡಂಪ್ ಮಾಡಿದ್ದಾರೆ. ಜೊತೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯ ಮಾಡಿದರು.
ಮುಂದಿನ ದಿನಗಳಲ್ಲಿ ಇಲ್ಲಿಗೆ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಹಾಗೂ ಕಂದಾಯ ಸಚಿವರಾದ ಆರ್.ಅಶೋಕ್ರವರು ಭೇಟಿ ನೀಡಲಿದ್ದಾರೆಂದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್ ತಿಳಿಸಿದರು.

ರಸ್ತೆ ಅಗೆದು ವಾಹನಗಳು ಬೆಟ್ಟದ ಮೇಲೆ ತೆರಳದಂತೆ ಮಾಡಿದ ಕಿಡಿಗೇಡಿಗಳು :
ಕಳೆದ ೧೫ ದಿನಗಳಿಂದ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ವಾಹನಗಳು ಹೋಗಲು ಯಾವುದೇ ತೊಂದರೆ ಇರಲಿಲ್ಲ, ಆದರೆ ಕಳೆದ ದಿನ ರಾತ್ರಿ ಬೆಟ್ಟದ ರಸ್ತೆಯಲ್ಲಿ ಮೂರು ಕಡೆಗಳಲ್ಲಿ ಜೆಸಿಬಿ ಮೂಲಕ ರಸ್ತೆಯನ್ನು ಬಗೆಸಿರುವುದು ಕಂಡು ಬಂದಿದೆ.
ಬೆಟ್ಟದ ಮೇಲೆ ಯಾವುದೇ ವಾಹನಗಳು ಹೋಗಬಾರದೆಂದು ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಬೆಟ್ಟದ ಮೇಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಸಿ ಕ್ಯಾಮರಾಗಳನ್ನು ಇಂದು ಅಳವಡಿಕೆ ಮಾಡಿದ್ದಾರೆ.












Click it and Unblock the Notifications