ಬಿಟ್ ಕಾಯಿನ್ ಹಗರಣ: ಸಿಎಂ ಬದಲಾವಣೆ ವಿಚಾರವಾಗಿ ಅಶ್ವಥ್ ನಾರಾಯಣ ಮಹತ್ವದ ಹೇಳಿಕೆ
ರಾಮನಗರ, ನವೆಂಬರ್ 11: ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ವದಂತಿಗಳ ವಿಚಾರವಾಗಿ ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.
ಮಾಗಡಿಯ ಕೆಂಪಸಾಗರ ಗ್ರಾಮದಲ್ಲಿ ಶ್ರೀವಿಶ್ವೇಶ್ವರ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ವಿಚಾರದಲ್ಲಿ ಸಿಎಂ ಬದಲಾವಣೆ ಬೆಳವಣಿಗೆ ಇಲ್ಲ, ಯಾವುದು ಸತ್ಯ ಅಲ್ಲ ಎಂದು ಅಲ್ಲಗಳೆದರು.
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಬೇರೆ ಕಾರಣಗಳಿವೆ. ಕೆಲ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಲು ಭೇಟಿ ಮಾಡುತ್ತಿದ್ದಾರೆ. ಪ್ರತಿಪಕ್ಷದವರ ಎಲ್ಲಾ ಟೀಕೆಗಳಿಗೆ ಸಮರ್ಪಕವಾಗಿ ಉತ್ತರಿಸುತ್ತೇವೆ," ಎಂದು ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದರು.

"ಮುಖ್ಯಮಂತ್ರಿಗಳಿಗೆ ಕನ್ನಡಿ ಹಿಡಿಯುವಂತಹ ಕೆಲಸ ಮಾಡುತ್ತೇವೆ. ಅವರ ಘನಸಾಧನೆಗಳನ್ನು ಬಹಳಷ್ಟು ಪರಿಣಾಮಕಾರಿಯಾಗಿ ತಿಳಿಸುವ ಕೆಲಸ ಮಾಡುತ್ತೇವೆ. ಇಲ್ಲಿ ಮುಚ್ಚುಮರೆ ಮಾಡುವುದು ಯಾವುದು ಇಲ್ಲ. ಎಲ್ಲಾ ರೀತಿಯ ತನಿಖೆಗೆ ನಾವು ಸಿದ್ಧರಿದ್ದು, ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ವಹಿಸಲಾಗಿದೆ. ಮುಂದೆಯೂ ಸಹ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ," ಎಂದು ಸಚಿವ ಡಾ. ಅಶ್ವಥ್ ನಾರಾಯಣ ತಿಳಿಸಿದರು.
ಪ್ರತಿಪಕ್ಷದವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ
"ಬಿಟ್ ಕಾಯಿನ್ ವಿಚಾರವಾಗಿ ತನಿಖೆ ಮಾಡಿಸಲು ನಮ್ಮ ಸರಕಾರ ಸಿದ್ಧವಿದೆ. ಈಗಾಗಲೇ ಸೆಂಟ್ರಲ್ ಏಜೆನ್ಸಿಗಳ ಮೂಲಕ ತನಿಖೆ ಮಾಡಿಸಲು ಸಿಎಂ ಸಿದ್ಧರಿದ್ದಾರೆ," ಎಂದು ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದರು.

"ಪ್ರತಿಪಕ್ಷದವರು ಏನಾದರೂ ಸಾಕ್ಷಿ ಇದ್ದರೆ ಮಂಡಿಸಲಿ, ಏನಾದರೂ ಪುರಾವೆ ಇದ್ದರೆ ಹಂಚಿಕೊಳ್ಳಲಿ. ಸರ್ಕಾರಕ್ಕೂ ದಾಖಲೆಗಳನ್ನು ಕೊಡಲಿ," ಅಂತಾ ವಿರೋಧ ಪಕ್ಷದವರಿಗೆ ಸವಾಲೆಸೆದರು.
"ಬಿಟ್ ಕಾಯಿನ್ ಹಗರಣದ ವಿಚಾರಣೆ ನಡೆಯಬೇಕಾದರೆ ಏನು ಹೇಳಲು ಸಾಧ್ಯ? ಅವರೂ ಅಧಿಕಾರದಲ್ಲಿ ಇದ್ದರು. ಆಗ ಪ್ರಕರಣಗಳ ತನಿಖೆ ನಡೆಯಬೇಕಾದರೆ ಯಾವ್ಯಾವ ಮಾಹಿತಿ ಹೇಳಿದ್ದಾರೆ ಅಂತಾ ಹೇಳಲಿ," ಎಂದು ವಿರೋಧ ಪಕ್ಷದವರಿಗೆ ಸವಾಲು ಹಾಕಿದರು.
"ಅರ್ಕಾವತಿ ನದಿ ವಿಚಾರದಲ್ಲಿ ಕೆಂಪಣ್ಣ ಆಯೋಗದ ತನಿಖೆ ಬಗ್ಗೆ ಏನಾದರೂ ಹೇಳಿದರಾ? ಪಬ್ಲಿಕ್ ಪ್ರಾಸಿಕ್ಯೂಟರ್ ಅಪಾಯಿಂಟ್ಟ್ಮೆಂಟ್ನಲ್ಲಿ ಉಲ್ಲಂಘನೆಯಾಗಿತ್ತು. ಅದರಲ್ಲಿ ಏನಾದರೂ ಹೇಳಿದರಾ? ನಮ್ಮ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮೇಲೆ ಹಲವು ಆರೋಪಗಳಿವೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲೆ ಹಲವಾರು ಆಪಾದನೆ ಇದ್ದಾವೆ. ಹಿಟ್ ಅಂಡ್ ರನ್ ರೀತಿ ಬೇಡ, ಪುರಾವೆ ಇದ್ದರೆ ಮಂಡಸಲಿ," ಎಂದು ವಿರೋಧ ಪಕ್ಷದ ನಾಯಕರಿಗೆ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಟಾಂಗ್ ನೀಡಿದರು.
ಮನೆಮನೆಗೂ ನದಿ ಮೂಲದ ನೀರು
ರಾಮನಗರ ಜಿಲ್ಲೆಯಲ್ಲಿರುವ ಎಲ್ಲ 2 ಲಕ್ಷ ಮನೆಗಳಿಗೂ ಸದ್ಯದಲ್ಲೇ ಉತ್ತಮ ಗುಣಮಟ್ಟದ ನದಿ ಮೂಲದ ನೀರನ್ನು ಒದಗಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.
ಸದ್ಯಕ್ಕೆ ರಾಜ್ಯದಲ್ಲಿ ಗದಗ ಜಿಲ್ಲೆಯಲ್ಲಿ ಮಾತ್ರ ಎಲ್ಲ ಮನೆಗಳಿಗೂ ನದಿ ನೀರನ್ನು ಪೂರೈಸಲಾಗುತ್ತಿದೆ. ಈಗ ರಾಮನಗರ ಜಿಲ್ಲೆಯಲ್ಲೂ ಇದೇ ಮಾದರಿಯ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು, ಎಂದರು.
ಶ್ರೀ ವಿಶ್ವೇಶ್ವರಸ್ವಾಮಿ ದೇವಸ್ಥಾನವು ಮಾಗಡಿ ಕೆಂಪೇಗೌಡರು ಕಟ್ಟಿಸಿದಂತಹ ಚಾರಿತ್ರಿಕ ದೇವಸ್ಥಾನವಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಜಿಲ್ಲೆಯಲ್ಲಿ 2,500 ಕೆರೆಗಳಿದ್ದು, ಅವುಗಳ ಒತ್ತುವರಿಯನ್ನು ತೆರವುಗೊಳಿಸಿ ನೀರು ತುಂಬಿಸಲಾಗುವುದು. ಜೊತೆಗೆ ಜಿಲ್ಲೆಯ ಜನರಿಗೆ ಲಾಭ ತರುವಂತಹ ಸತ್ತೇಗಾಲ, ಎತ್ತಿನಹೊಳೆ ಮತ್ತು ಶ್ರೀರಂಗ ನೀರಾವರಿ ಯೋಜನೆಗಳನ್ನು ಕೂಡ ತ್ವರಿತವಾಗಿ ಮುಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕೆಂಪೇಗೌಡರ ಪ್ರತಿಮೆ ಸ್ಥಾಪನೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2022ರ ಮಾರ್ಚ್ ಹೊತ್ತಿಗೆ ಮಾಗಡಿ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುವುದು. ಇದಕ್ಕಾಗಿ 23 ಎಕರೆ ಪ್ರದೇಶವನ್ನು ಗುರುತಿಸಿದ್ದು ಇಲ್ಲಿ ಉದ್ಯಾನ, ಕೆರೆ ಮತ್ತಿತರ ಆಕರ್ಷಣೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.












Click it and Unblock the Notifications