ಕೋವಿಡ್ ರೋಗಿಗಳಿಗೆ ಸಂಜೀವಿನಿಯಾದ ಬಿಡದಿಯ ಬೆನ್ಟ್ಲೇ ಇಂಡಿಯಾ ಆಕ್ಸಿಜನ್ ಘಟಕ
ರಾಮನಗರ, ಏಪ್ರಿಲ್ 29: ರಾಮನಗರ ಜಿಲ್ಲೆಯ ಕೊರೊನಾ ಸೋಂಕಿತರಿಗೆ ಸಂಜೀವಿನಿಯಾಗಿರುವ ಬೆನ್ಟ್ಲೇ ಇಂಡಿಯಾ ಕಂಪನಿ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದೆ. ರಾಮನಗರ ಜಿಲ್ಲೆಯ ಏಕೈಕ ಆಮ್ಲಜನಕ ತಯಾರಿಕಾ ಘಟಕವಾಗಿದ್ದು, ದಿನವೊಂದಕ್ಕೆ ಸುಮಾರು 400 ಆಕ್ಸಿಜನ್ ಸಿಲಿಂಡರ್ ತಯಾರಿಸುವ ಮೂಲಕ ಜಿಲ್ಲೆಯ ಕೊವಿಡ್ ರೋಗಿಗಳ ಆಕ್ಸಿಜನ್ ಕೊರತೆ ನೀಗಿಸುವಲ್ಲಿ ಶ್ರಮಿಸುತ್ತಿದೆ.
ಕಳೆದ 5 ವರ್ಷದಿಂದ ಬಿಡದಿ ಕೈಗಾರಿಕಾ ವಲಯದಲ್ಲಿರುವ ಕಾರ್ಯನಿರ್ವಹಿಸುತ್ತಿರುವ ಬೆನ್ಟ್ಲೇ ಇಂಡಿಯಾ ಆಕ್ಸಿಜನ್ ತಯಾರಿಕಾ ಘಟಕ, ತನ್ನಲ್ಲಿ ಉತ್ಪಾದನೆಯಾದ ಶೇ.80 ರಷ್ಟು ಕೈಗಾರಿಕೆಗಳ ಉಪಯೋಗಕ್ಕೆ ಮತ್ತು ಶೇ.20 ರಷ್ಟು ಆಕ್ಸಿಜನ್ ಆಸ್ಪತ್ರೆಗಳ ಉಪಯೋಗಕ್ಕೆ ಸರಬರಾಜು ಹಾಗೂ ದಿನಕ್ಕೆ 200 ಸಿಲಿಂಡರ್ ಉತ್ಪಾದನೆ ಮಾಡುತ್ತಿತ್ತು.

ಕೋವಿಡ್ ಹಿನ್ನೆಲೆಯಲ್ಲಿ 24 ಗಂಟೆ ಕಾರ್ಯನಿರ್ವಹಣೆ
ಕೊರೊನಾ ಎರಡನೇ ಆಲೆಯ ಆರ್ಭಟದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಿರುವ ಕೊರೊನಾ ರೋಗಿಗಳ ಹಿತದೃಷ್ಟಿಯಿಂದ ಬೆನ್ಟ್ಲೇ ಇಂಡಿಯಾ ಘಟಕ ದಿನದ 24 ಗಂಟೆ ಹಗಲು-ರಾತ್ರಿ ಎನ್ನದೆ ಸುಮಾರು ಒಂದು ತಿಂಗಳಿನಿಂದ ದಿನವೊಂದಕ್ಕೆ 450ಕ್ಕೂ ಹೆಚ್ಚು ಸಿಲಿಂಡರ್ ಗಳಿಗೆ ರಿಫೀಲ್ ಮಾಡುವ ಕೆಲಸ ಭರದಿಂದ ಸಾಗಿದೆ. ಒಂದು ಲೈನ್ ಸಿಲಿಂಡರ್ ತುಂಬಲು 45 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ. ಅಲ್ಲದೆ ದಿನನಿತ್ಯ ನಿಗದಿತ ಸಮಯದಲ್ಲಿಯೇ ವಿದ್ಯುತ್ ಪೂರೈಕೆಯಾದರೆ 450 ಸಿಲಿಂಡರ್ ಗಳಿಗೆ ರಿಫೀಲ್ ಮಾಡಬಹುದು ಎಂದು ಕಂಪನಿ ವ್ಯವಸ್ಥಾಪಕ ಹರಿಯಂತ್ ರಾಂಕ ತಿಳಿಸಿದರು.

ನಾಲ್ಕು ತಾಲ್ಲೂಕುಗಳಿಗೆ ಪೂರೈಕೆ
ಅಲ್ಲದೇ ಬಿಡದಿ ಘಟಕದಿಂದ ಉತ್ಪಾದನೆಯಾದ ಸಂಪೂರ್ಣ ಆಕ್ಸಿಜನ್ ಸಿಲಿಂಡರ್ ಗಳನ್ನು ಕೊವಿಡ್ ರೋಗಿಗಳಿಗೆ ಸರಬರಾಜು ಮಾಡುತ್ತಿದ್ದು, ಕೈಗಾರಿಕೆ ಉಪಯೋಗಕ್ಕೆ ನೀಡುತ್ತಿದ್ದ ಸಿಲಿಂಡರ್ ಗಳನ್ನು ನಿಲ್ಲಿಸಿದ್ದೇವೆ. ಇಲ್ಲಿಂದ ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕಿನ ಆಸ್ಪತ್ರೆ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯಾಪ್ತಿಯ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದ್ದೇವೆ ಎಂದು ಕಂಪನಿ ವ್ಯವಸ್ಥಾಪಕ ಹರಿಯಂತ್ ರಾಂಕ ಹೇಳಿದರು.

ಏಕೈಕ ಆಕ್ಸಿಜನ್ ಘಟಕ್ಕೆ ರಕ್ಷಣೆ ನೀಡಿದ ಜಿಲ್ಲಾಡಳಿತ
ಕೊರೊನಾ ಎರಡನೇ ಆಲೆಯಲ್ಲಿ ರೋಗಿಗಳಿಗೆ ಸಂಜೀವಿನಿಯಾಗಿರಿವ ರಾಮನಗರ ಜಿಲ್ಲೆಯ ಏಕೈಕ ಆಮ್ಲಜನಕ ಘಟಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ಹಾಗೂ ಜಿಲ್ಲಾ ಪಂಚಾಯತಿ ಸಿಇಒ ಇಕ್ರಂ, ಜಿಲ್ಲೆಯ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ದಿನದ 24 ಗಂಟೆ ಉತ್ಪಾನೆ ಮಾಡುವಂತೆ ಕಂಪನಿಯವರನ್ನು ಪ್ರೋತ್ಸಾಹಿಸಿದ್ದಾರೆ.

ದಿನದ 24 ಗಂಟೆ ವಿದ್ಯುತ್ ಪೂರೈಕೆ
ಅಲ್ಲದೇ ಆಮ್ಲಜನಕ ಉತ್ಪಾದನೆಗೆ ಅನುಕೂಲವಾಗುವಂತೆ ದಿನದ 24 ಗಂಟೆ ವಿದ್ಯುತ್ ಪೂರೈಕೆ ಕ್ರಮಕೈಗೊಂಡಿದ್ದು, ವಿದ್ಯುತ್ ವ್ಯತ್ಯಯವಾಗದಂತೆ ಕಾರ್ಖಾನೆಗೆ ಖಾಸಗಿ ಜನರೇಟರ್ ನೀಡುವ ಜೊತೆಗೆ ಕಂಪನಿಯ ವಿದ್ಯುತ್ ವ್ಯತ್ಯಯ ತಪ್ಪಿಸಲು ವಿದ್ಯುತ್ ಇಲಾಖೆಯ ಪರಿಣಿತ ತಂಡವನ್ನು ಸ್ಥಳದಲ್ಲಿ ನಿಯೋಜನೆ ಮಾಡಿದ್ದಾರೆ ಹಾಗೂ ಕಂಪನಿಯ ರಕ್ಷಣೆಗಾಗಿ ಪೋಲಿಸ್ ಕಾವಲನ್ನು ನಿಯೋಜನೆ ಮಾಡಿದ್ದಾರೆ. ಕೊವಿಡ್-19 2ನೇ ಅಲೆಯು ಅತೀ ಹೆಚ್ಚು ಕಠಿಣ ಪರಿಸ್ಥಿತಿ ಎದುರಿಸಲು ಆಕ್ಸಿಜನ್ ಘಟಕ್ಕೆ ಅವಶ್ಯಕತೆ ಇರುವ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದರು.

24 ಗಂಟೆಯೂ ಆಕ್ಸಿಜನ್ ಸಿಗುತ್ತಿದೆ
ಇನ್ನೂ ಈ ಬಗ್ಗೆ ಮಾತನಾಡಿದ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಹರ್ಷದ್ ಆಲೀಖಾನ್, ಕೊವಿಡ್-19 ನಿಂದಾಗಿ ರೋಗಿಗಳಿಗೆ ಆಕ್ಸಿಜನ್ ಬೇಕಾಗಿದೆ, ಬಿಡದಿಯಲ್ಲಿ ಆಕ್ಸಿಜನ್ ಪ್ಲಾಂಟ್ ಇರುವುದರಿಂದ ಅನುಕೂಲವಾಗುತ್ತಿದ್ದು, 24 ಗಂಟೆಯೂ ಆಕ್ಸಿಜನ್ ಸಿಗುತ್ತಿದೆ. ಸರ್ಕಾರ ಸಹಕರಿಸಿ ಸೌಲಭ್ಯ ನೀಡಬೇಕು ಹಾಗೂ ಇನ್ನೂ ಒಂದೆರಡು ಆಕ್ಸಿಜನ್ ಘಟಕ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ. ಕೊರೊನಾ ಕಾಯಿಲೆಗೆ ಅಗತ್ಯವಿರುವ ಆಕ್ಸಿಜನ್ ದೊರೆಯುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
Recommended Video

ಇದೀಗ ಆಕ್ಸಿಜನ್ ಸಿಗುತ್ತಿಲ್ಲ
ಮಣಿಪಾಲ್ ಆಸ್ಪತ್ರೆಯ ಸಿಬ್ಬಂದಿ ಜೀವನ್ ಮಾತನಾಡಿ, ಮೊದಲು ಆಕ್ಸಿಜನ್ ಕೊರತೆ ಇರಲಿಲ್ಲ, ಆದರೆ ಇದೀಗ ಆಕ್ಸಿಜನ್ ಸಿಗುತ್ತಿಲ್ಲ. ಆದರೆ ಸ್ಟಾಕ್ ಸಿಗುವ ಕಡೆ ಹೋಗಿ ರೋಗಿಯ ಜೀವ ಉಳಿಸಬೇಕೆಂದು ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಿದ್ದೇವೆ. ಪ್ರತಿ ರೋಗಿಗಗಳಿಗೂ ಆಕ್ಸಿಜನ್ ಕೊರತೆ ಇರುವುದರಿಂದ ನಾವು ಆಕ್ಸಿಜನ್ ಶೇಖರಣೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.












Click it and Unblock the Notifications