Bengaluru-Mysuru Expressway: ಕಣಮಿಣಕಿ ಟೋಲ್ ಸಿಬ್ಬಂದಿಯಿಂದ ಕಾರು ಚಾಲಕನ ಮೇಲೆ ಹಲ್ಲೆ, ಗೂಂಡಾ ವರ್ತನೆ
ರಾಮನಗರ, ಮಾರ್ಚ್, 30: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಆದಾಗಿನಿಂದ ಟೋಲ್ ವಿಚಾರವಾಗಿ ವಾಹನ ಸವಾರರು, ಟೋಲ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇವೆ. ಮತ್ತೆ ನಿನ್ನೆ (ಮಾರ್ಚ್ 29) ತಡರಾತ್ರಿ ಕಣಮಿಣಕಿ ಟೋಲ್ನ ಪಾಸ್ಟ್ಯಾಗ್ ಸ್ಕ್ಯಾನರ್ ಹಾಳಾಗಿದ್ದು, ಇದರಿಂದ ಬೇಸತ್ತ ಕಾರಿನ ಚಾಲಕರೊಬ್ಬರು ಬೇರೆ ದಾರಿಯಿಲ್ಲದೆ ಅಲ್ಲಿಂದ ತೆರಳಲು ಮುಂದಾಗಿದ್ದಾರೆ. ಆಗ ಟೋಲ್ ಸಿಬ್ಬಂದಿ ತಮ್ಮದೇ ತಪ್ಪಿದ್ದರೂ ಕೂಡ ಕಾರಿನ ಚಾಲಕನಿಗೆ ಥಳಿಸಿರುವ ಘಟನೆ ನಡೆದಿದೆ.
ಟೋಲ್ ಸಿಬ್ಬಂದಿಯಿಂದ ಗೂಂಡಾ ವರ್ತನೆ
ಇತ್ತೀಚೆಗಷ್ಟೇ ಟೋಲ್ನಲ್ಲಿ ಸ್ಕ್ಯಾನರ್ ವರ್ಕ್ ಆಗದೇ ವಾಹನ ಸವಾರರು ಪರದಾಡುವಂತೆ ಆಗಿತ್ತು. ಅಲ್ಲದೆ ಕೆಲವು ವಾಹಗಳು ಕೂಡ ಡ್ಯಾಮೇಜ್ ಆಗಿದ್ದವು. ಇದರಿಂದ ರೊಚ್ಚಿಗೆದ್ದಿದ್ದ ವಾಹನ ಸವಾರರು ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಕಣಮಿಣಕಿ ಬಳಿ ಕಾರಿನ ಚಾಲಕ ಹಾಗೂ ಟೋಲ್ ಪ್ಲಾಜಾ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕಾರಿನ ಚಾಲಕನಿಗೆ ಟೋಲ್ ಸಿಬ್ಬಂದಿ ಥಳಿಸಿ ಗೂಂಡಾ ವರ್ತನೆ ಮೆರೆದಿದ್ದಾರೆ.

ಬೆಂಗಳೂರಿನ ತಣಿಸಂದ್ರ ನಿವಾಸಿ ವಿಶ್ವನಾಥ್ ಎಂಬುವವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ವಿಶ್ವನಾಥ್ ಕಾರಿನಲ್ಲಿ ಬಂದ ವೇಳೆ ಟೋಲ್ ಪ್ಲಾಜಾದಲ್ಲಿ ಅಲ್ಲಿನ ಫಾಸ್ಟ್ ಟ್ಯಾಗ್ ರೀಡ್ ಆಗಿರಲಿಲ್ಲ. ಆಗ ವಾಹನ ಚಾಲಕ ಹಾಗೂ ಟೋಲ್ ಪ್ಲಾಜಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಾರು ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದೆ.
ವಿಶ್ವನಾಥ್ ಬೆಂಗಳೂರಿನಿಂದ ಮೈಸೂರಿನ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಸದ್ಯ ಈ ಸಂಬಂಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ರೈತ ಸಂಘ ಆಕ್ರೋಶ
ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಕಾಮಗಾರಿ ಪೂರ್ಣಗೊಳ್ಳುವವರೆಗೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮೈಸೂರಿನಲ್ಲಿ ಇತ್ತೀಚೆಗಷ್ಟೇ ಒತ್ತಾಯಿಸಿತ್ತು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮಳೆ ಸುರಿದಾಗಿನಿಂದ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇನಲ್ಲಿ ಸಂಚಾರ ಮಾಡಲು ಸಾಧ್ಯವಾಗದಂತಾಗಿದೆ. ಈ ಹೆದ್ದಾರಿಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಪರಿಣಾಮ ಅಪಘಾತ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಮತ್ತೊಂದೆಡೆ ಹೆದ್ದಾರಿಯುದ್ದಕ್ಕೂ ಯಾವುದೇ ಪೆಟ್ರೋಲ್ ಬಂಕ್ ಸೇರಿದಂತೆ ಒಂದು ಶೌಚಾಲಯದ ವ್ಯವಸ್ಥೆಯೂ ಇಲ್ಲದಾಂಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಜೊತೆಗೆ ದುಪ್ಪಟ್ಟು ಟೋಲ್ ವಸೂಲಿ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ. ಆದ್ದರಿಂದ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಸಂಚಾರವನ್ನು ಸ್ಥಗಿತಗೊಳಿಸಬೇಕು. ಒಂದು ವೇಳೆ ನಮ್ಮ ಮನವಿಯನ್ನು ಪುರಸ್ಕರಿಸದಿದ್ದರೆ 101 ವಾಹನಗಳ ಜೊತೆ ಚಳವಳಿ ನಡೆಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಆದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಇಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ಹಾಗೆಯೇ ಮಾರ್ಚ್ 19ರಂದು ಕಣಮಿಣಕಿ ಟೋಲ್ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬಸ್ ಗುದ್ದಿದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ.
ಇನ್ನು ಬೈಕ್ನಲ್ಲಿದ್ದ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಟೋಲ್ ಕಟ್ಟುವುದನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ ಎನ್ನುವ ಮಾಹಿತಿ ತಿಳಿದುಬಂದಿತ್ತು. ಈ ಘಟನೆ ರಾಜರಾಜೇಶ್ವರಿ ಆಸ್ಪತ್ರೆ ಬಳಿ ನಡೆದಿದೆ ಎನ್ನಲಾಗಿದೆ.
ಮತ್ತೊಂದೆಡೆ ಬೆಂಗಳೂರು-ಮೈಸೂರು ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ ನಡೆಯುತ್ತಲೇ ಇವೆ. ಹೆದ್ದಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಹಲವು ಸಂಘಟನೆಗಳು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶವನ್ನು ಹೊರಹಾಕುತ್ತಲೇ ಇವೆ.












Click it and Unblock the Notifications