ಬಮೂಲ್ ನೇಮಕಾತಿಯಲ್ಲಿ ಅಕ್ರಮ; ಸಿಐಡಿ ತನಿಖೆಗೆ ಡಿ. ಕೆ. ಸುರೇಶ್ ಆಗ್ರಹ
ರಾಮನಗರ, ಏಪ್ರಿಲ್ 24; ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್ ಬಮೂಲ್ ನೇಮಕಾತಿ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಆಗ್ರಹಿಸಿ ಕಳೆದ ತಿಂಗಳು ಪತ್ರ ಬರೆದಿರುವ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ, ಬೆಂಗಳೂರು ( ಬಮೂಲ್ ) ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿನ ಲಿಖಿತ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ಗೆ ಪತ್ರ ಬರೆದು ಬಮೂಲ್ನ ವಿವಿಧ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಸಿಐಡಿ ಅಥವಾ ಎಸ್ಐಟಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 297 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿರುವುದರಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಪುನಃ ಹೊಸದಾಗಿ ಲಿಖಿತ ಪರೀಕ್ಷೆಯನ್ನು ಪಾರದರ್ಶಕವಾಗಿ ಮಾಡಲು ಸಂಬಂಧಪಟ್ಟರವರಿಗೆ ಸೂಕ್ತ ಆದೇಶ ನೀಡುವಂತೆ ಸಂಸದರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಈ ಪತ್ರದ ಹಿನ್ನಲೆಯಲ್ಲಿ ಬಮೂಲ್ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿಯ ಲಿಖಿತ ಪರೀಕ್ಷೆಯಲ್ಲಿನ ಅಕ್ರಮಗಳ ಮತ್ತು ನ್ಯೂನತೆಗಳ ಕುರಿತಂತೆ ನಿಯಮಾನುಸಾರ ಪರಿಶೀಲಿಸಿ ತನಿಖೆ ನಡೆಸಲು ಇಲಾಖೆಯ ಅಧಿಕಾರಿಯನ್ನು ನೇಮಕ ಮಾಡುವಂತೆ ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಚಿವ ಎಸ್. ಟಿ. ಸೋಮಶೇಖರ್ ಸೂಚಿಸಿದ್ದಾರೆ.
ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್. ಸಿ. ರಾಧ ಬಮೂಲ್ ನೇಮಕಾತಿ ಅಕ್ರಮಗಳ ತನಿಖೆಗೆ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಪ್ರಸಾದ್ ರೆಡ್ಡಿಯನ್ನು ತನಿಖಾಧಿಕಾರಿಯನ್ನಾಗಿ ನೇಮಕಮಾಡಿದ್ದಾರೆ. ಅಗತ್ಯ ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ನೀಡುವಂತೆ ಆದೇಶ ಮಾಡಿದ್ದಾರೆ.

ಬಮೂಲ್ ವಿವಿಧ ವೃಂದದ ನೇಮಕಾತಿ
ಡಿ. ಕೆ. ಸುರೇಶ್ ಪತ್ರದಲ್ಲಿ 297 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು. ಸುಮಾರು 27259 ಅರ್ಜಿಗಳು ಸಲ್ಲಿಕೆಯಾಗಿರುತ್ತದೆ. ಬಮೂಲ್ ಆಡಳಿತ ಮಂಡಳಿಯ ನೇಮಕಾತಿ ಪ್ರಕ್ರಿಯೆಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಪರೀಕ್ಷಾ ಕಾರ್ಯವನ್ನು ನಡೆಸಲು ಅನುಮೋದನೆ ನೀಡಿದೆ. 12/12/2021ರಂದು ನಡೆಸಲಾಗಿರುವ ಲಿಖಿತ ಪರೀಕ್ಷಾ ವಿಧಾನಗಳಲ್ಲಿ ಹಲವಾರು ಅಕ್ರಮಗಳು, ನ್ಯೂನತೆಗಳು ನಡೆದಿದ್ದು, ಪ್ರಾರಂಭದಿಂದಲೂ ಪಾರದರ್ಶಕತೆಯಿಂದ ಕೂಡಿರುವುದಿಲ್ಲ. ಇದರಿಂದಾಗಿ ಅರ್ಹ ಹಾಗೂ ಸೂಕ್ತ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವುದರಲ್ಲಿ ಸಂಸ್ಥೆಯು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ದೋಷ ಪೂರಿತ ತೀರ್ಮಾನಗಳು
ಸಂಸ್ಥೆಯ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ನಿವೃತ್ತಿ ಅಂಚಿನಲ್ಲಿರುವ ಸಂದರ್ಭಗಳಲ್ಲಿ ಸಂಸ್ಥೆಯ ಮೇಲೆ ಆರ್ಥಿಕವಾಗಿ, ಗಂಭೀರವಾಗಿ ಹಾಗೂ ಸಂಸ್ಥೆಯ ನೀತಿ ನಿಯಮಗಳಿಗೆ ಗಂಭೀರ ಪರಿಣಾಮ ಬೀರುವಂತಹ ಪ್ರಮುಖವಾದ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂಬ ಆದೇಶವನ್ನು ಸಂಪೂರ್ಣವಾಗಿ ದಿಕ್ಕರಿಸಲಾಗಿದೆ. ಹಾಲಿ ಕಾರ್ಯ ನಿರ್ವಹಿಸಲಾಗುತ್ತಿರುವ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಇನ್ನೂ ಮೂರು ತಿಂಗಳ ಅವಧಿಯಲ್ಲಿ ನಿವೃತ್ತಿಯಾಗುತ್ತಿದ್ದು, ಇಂತಹ. ಪರಿಸ್ಥಿತಿಯಲ್ಲಿ ಸಂಸ್ಥೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಹಾಗೂ ನಿರ್ವಹಿಸುವುದು ಕಾನೂನು ಬಾಹಿರ ಹಾಗೂ ದೋಷ ಪೂರಿತವಾಗಿರುತ್ತದೆ ಎಂದು ಪತ್ರದಲ್ಲಿ ದೂರಿದ್ದಾರೆ.

ಪತ್ರಿಕೆ ಸೋರಿಕೆಯಾಗಿದೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಪ್ರಶ್ನೆಪತ್ರಿಕೆ ತಯಾರಿಕೆ, ಮೌಲ್ಯಮಾಪನ, ಫಲಿತಾಂಶ ಪ್ರಕಟಣೆಯ ಉಸ್ತುವಾರಿಯನ್ನು ವಹಿಸಿದ್ದು, ಇದಕ್ಕೆ ಸಂಬಂಧಿಸಿದ ಆಡಳಿತ ಮಂಡಳಿ ಸದ್ಯಸರು ಹಾಗು ಇತರೆ ಜನ ಪ್ರತಿನಿಧಿಗಳಿಂದ ವಿರೋಧವಿದ್ದರೂ ಸಹ ಬಾಹ್ಯ ಒತ್ತಡ ಹಾಗೂ ರಾಜಕೀಯ ಶಿಫಾರಸ್ಸಿನಿಂದ ಸದರಿ ಮೇಲ್ಕಂಡ ಸಂಸ್ಥೆಗೆ ವಹಿಸಲಾಗಿರುತ್ತದೆ. ಲಿಖಿತ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ನಿಗದಿತ ಸಮಯಕ್ಕಿಂತ ಅರ್ಧಗಂಟೆಗೆ ಮೊದಲೇ ಸೋರಿಕೆಯಾಗಿದ್ದು, ಅನರ್ಹ ಹಾಗೂ ಬಲಿಷ್ಠ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ತುಂಬಾ ನಷ್ಟವಾಗಿದೆ. ಈ ವಿಷಯವನ್ನು ಸ್ವತಃ ಬಮೂಲ್ನ ವ್ಯವಸ್ಥಾಪಕ ನಿರ್ದೇಶಕರೇ ತಮ್ಮ ಆಪ್ತರೊಂದಿಗೆ ಹಂಚಿಕೊಂಡಿರುತ್ತಾರೆ.
ಅಭ್ಯರ್ಥಿಗಳ ನೇಮಕಾತಿಗಾಗಿ 1:5ರ ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ದೂರವಾಣಿ ಮೂಲಕ ಆಮಿಷ ಒಡ್ಡಿ ಹಣಕ್ಕೆ ಬೇಡಿಕೆ ಮಾಡುತ್ತಿರುವುದಾಗಿ ತಿಳಿದು ಬಂದಿರುತ್ತದೆ. ಕೆಲವು ಅಭ್ಯರ್ಥಿಗಳಿಂದ ಈ ಮೊದಲೇ ಒಡಂಬಡಿಕೆ ಮಾಡಿಕೊಂಡು ಲಕ್ಷಗಳವರೆಗೆ ನಿಗದಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಒ.ಎಂ.ಆರ್ ಉತ್ತರ ಪ್ರತಿಯಲ್ಲಿ ಅಭ್ಯರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸದೆ ಖಾಲಿ ಬಿಟ್ಟಿರುವುದು ಹಾಗೂ ತದನಂತರ ಸದರಿ ಅಭ್ಯರ್ಥಿಗಳ ಒ.ಎಂ.ಆರ್ ಮಾರ್ಕ್ ಶೀಟ್ಗಳನ್ನು ಮೂರನೇ ವ್ಯಕ್ತಿಯಿಂದ ಸರಿಯಾದ
ಉತ್ತರಗಳನ್ನು ಭರ್ತಿಮಾಡಿಸಿರುವುದು ತಿಳಿದು ಬಂದಿರುತ್ತದೆ.

ಅಕ್ರಮದಲ್ಲಿ ಭಾಗಿಯಾಗಿದ್ದಾರೆ
ಲಿಖಿತ ಪರೀಕ್ಷೆಯ ಒ.ಎಂ.ಆರ್ ಮೂಲ ಪ್ರತಿ (ಕೆಎಸ್ಒಯು ಪ್ರತಿ, ಬಮೂಲ್ ಪ್ರತಿ) ಈ ಮೊದಲೇ ಒಡಂಬಡಿಕೆ ಮಾಡಿಕೊಂಡ ಒ.ಎಂ.ಆರ್ ಮಾರ್ಕ್ ಪ್ರತಿಯಲ್ಲಿ ತೆಗೆದುಕೊಂಡ ಅಂಕಗಳಿಗೂ ತಾಳೆ ಮಾಡಿದಾಗ ಭಾರಿ ಪ್ರಮಾಣದ ವ್ಯತ್ಯಾಸಗಳು ಕಂಡುಬಂದಿದ್ದು, ಪರೀಕ್ಷಾ ಅಕ್ರಮಗಳು ನಡೆದಿರುವುದು ಸ್ಪಷ್ಟವಾಗುತ್ತದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಬಮೂಲ್ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ಮತ್ತು ಇತರೆ ಮೂರನೇ ವ್ಯಕ್ತಿಗಳು ಸೇರಿ ಈ ಪರೀಕ್ಷೆ ಪ್ರಕ್ರಿಯೆಯಲ್ಲಿ ಅಕ್ರಮ ವ್ಯಸಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಸ್ವತಃ ಬಮೂಲ್ನ ವ್ಯವಸ್ಥಾಪಕ ನಿರ್ದೇಶಕರು ಪರೀಕ್ಷೆ ಪ್ರಕ್ರಿಯೆಗಳು ಪಾರದರ್ಶಕವಾಗಿರದೆ ಹಲವಾರು ಲೋಪ ದೋಷಗಳಿಂದ ಕೂಡಿದೆ ಎಂದು ಸ್ವತಃ ಅವರೇ ತಮ್ಮ ಆಪ್ತರೊಂದಿಗೆ ಹಂಚಿಕೊಂಡಿರುವ ವಿಷಯವು ಸಾಮಾಜಿಕ ಜಾಲತಾಣ ಸಂಭಾಷಣೆಯ ಮುದ್ರಿಕೆಯಲ್ಲಿ ಬಹಿರಂಗವಾಗಿದೆ.
ಬಮೂಲ್ನ ಹಾಲಿ ವ್ಯವಸ್ಥಾಪಕ ನಿರ್ದೇಶಕರು ಎಲ್ಲಾ ಅಕ್ರಮಗಳಲ್ಲಿ ನೇರ ಭಾಗಿಯಾಗಿರುವುದರಿಂದ ಇವರನ್ನು ತಕ್ಷಣ ಸದರಿ ಹುದ್ದೆಯಿಂದ ಅಮಾನತುಗೊಳಿಸಿ ಮಾತೃ ಇಲಾಖೆಗೆ ವರ್ಗಾಹಿಸಲು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಈ ಮೇಲ್ಕಂಡ ಎಲ್ಲಾ ವಿಷಯಗಳನ್ನು ತಾವು ಕೂಲಂಕುಶವಾಗಿ ಅವಲೋಕಿಸಿ ಬಮೂಲ್ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಸಿಐಡಿ ಅಥವಾ ಎಸ್ಐಟಿ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಹಾಗೂ ಸದರಿ ನೇಮಕಾತಿಯಲ್ಲಿ ಅಕ್ರಮವಾಗಿರುವುದರಿಂದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ, ಪುನಃ ಹೊಸದಾಗಿ ಲಿಖಿತ ಪರೀಕ್ಷೆಯನ್ನು ನಡೆಸಲು ಮನವಿ ಮಾಡಲಾಗಿದೆ.












Click it and Unblock the Notifications