ಅಮಾನತಿನ ಖಿನ್ನತೆಯಲ್ಲಿ ಆತ್ಮಹತ್ಯೆಗೆ ಶರಣಾದ ಪಿಡಿಒ ರವಿಕುಮಾರ್
ರಾಮನಗರ, ಏಪ್ರಿಲ್ 30: ಕೆಎಎಸ್ ಪಾಸ್ ಮಾಡಿ ಅಧಿಕಾರಿಯಾಗಿ ನೊಂದ ಜನರ ಸಮಸ್ಯೆಗಳನ್ನು ಪರಿಹಾರ ಮಾಡಬೇಕಾದ ವ್ಯಕ್ತಿ, ಹಣದ ವ್ಯಾಮೋಹಕ್ಕೆ ಸಿಲುಕಿ ಅಡ್ಡದಾರಿಯಲ್ಲಿ ಹಣ ಗಳಿಸಲು ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಅಮಾನತ್ತು ಶಿಕ್ಷೆಗೆ ಒಳಗಾಗಿ ಖಿನ್ನತೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮ ನಿವೇಶನಗಳ ಇ-ಖಾತೆ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಬೈರಮಂಗಲ ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ್ ನೇಣಿಗೆ ಶರಣಾಗಿದ್ದಾನೆ.
ಕನಕಪುರ ತಾಲ್ಲೂಕಿನ ಕೊಳ್ಳಿಗನಹಳ್ಳಿಯ ಮಡದಿ ಮನೆಯಲ್ಲಿ ರವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಆತನ ಸಂಬಂಧಿಕರು, ಕೆಲಸ ಕಳೆದುಕೊಂಡ ನಂತರ ಖಿನ್ನತೆಯಿಂದ ಬಳಲುತ್ತಿದ್ದ ರವಿಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೂಲತಃ ಕನಕಪುರ ತಾಲ್ಲೂಕಿನ ಜಂಪಾಲೇಗೌಡನದೊಡ್ಡಿ ಗ್ರಾಮದವರಾಗಿದ್ದು, ಹಾರೋಹಳ್ಳಿ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೃತ ರವಿ ಈಗಾಗಲೇ ಕೆಎಎಸ್ ಪರೀಕ್ಷೆ ಪಾಸ್ ಮಾಡಿದ್ದು, ಇ-ಖಾತೆ ಹಗರಣದಲ್ಲಿ ಸಿಲುಕಿ ಸಸ್ಪೆಂಡ್ ಆಗದಿದ್ದರೆ ಮಾರ್ಚ್ ತಿಂಗಳಲ್ಲಿ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಾಗಿತ್ತು ಎನ್ನಲಾಗಿದೆ.
ಕಳೆದ ವರ್ಷ (2021) ರಲ್ಲಿ ನಡೆದಿದ್ದ ಇ-ಖಾತೆ ಹಗರಣದಲ್ಲಿ ರವಿ ಭಾಗಿಯಾಗಿದ್ದ ಆರೋಪದಲ್ಲಿ ಬೆಂಗಳೂರು ಸೈಬರ್ ಪೊಲೀಸರು ಕೆಲವು ತಿಂಗಳ ಹಿಂದೆ ಬೈರಮಂಗಲ ಗ್ರಾ.ಪಂ ಕಚೇರಿ ಮೇಲೂ ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದರು. ಬೆಂಗಳೂರು ಸೈಬರ್ ಪೋಲಿಸರ ದಾಳಿ ಸಮಯದಲ್ಲಿ ರವಿಕುಮಾರ್ ನಾಪತ್ತೆ ಆಗಿದ್ದರು. ಅಕ್ರಮ ಇ-ಖಾತೆ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ರವಿಕಮಾರ್ ಅವರನ್ನು ಜಿ.ಪಂ ಸಿಇಒ ಇಕ್ರಂ ಈಚೆಗೆ ಸೇವೆಯಿಂದ ಅಮಾನತು ಮಾಡಿದ್ದರು.
ಏಪ್ರಿಲ್ ತಿಂಗಳಲ್ಲಿ ಬೆಳಕಿಗೆ ಬಂದಿದ್ದ ಅಕ್ರಮ ಇ-ಖಾತೆ ಪ್ರಕರಣ
2021ರ ಸೆ.17 ರಿಂದ 21ರ ನಡುವಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಇಒ ಅವರ ಇ-ಸ್ವತ್ತು ಲಾಗಿನ್ ಐಡಿಯನ್ನು ಹ್ಯಾಕ್ ಮಾಡಿ 36 ಕಂದಾಯ ಸೈಟುಗಳಿಗೆ ಇ-ಖಾತಾ ವಿತರಿಸಲಾಗಿತ್ತು. ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಿಇಒ, ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ತನಿಖೆ ಕೈಗೊಂಡ ಸೈಬರ್ ಪೊಲೀಸರು, ರಾಮನಗರ ಜಿಲ್ಲೆ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಭರತ್ನನ್ನು ಬಂಧಿಸಿದ್ದರು . ಬಂಧಿತ ಭರತ್ ತನಿಖೆಯಿಂದ ಬಿಡದಿ ಹೋಬಳಿ ಬೈರಮಂಗಲ ಗ್ರಾಮ ಪಂಚಾಯಿತಿಯಲ್ಲಿ ಕುಳಿತು ರವಿಕುಮಾರ್ ಲಾಗಿನ್ ಆಗಿ ಅಕ್ರಮವಾಗಿ ಇ-ಖಾತಾ ಮಾಡಿರುವುದು ಬೆಳಕಿಗೆ ಬಂದಿದೆ.
ಪೊಲೀಸರ ದಾಳಿಗೆ ಹೆದರಿದ ಕಿಂಗ್ ಪಿನ್ ರವಿಕುಮಾರ್, ಕೆಲಸಕ್ಕೆ ರಜೆ ಸಲ್ಲಿಸಿ ತಲೆಮರೆಸಿಕೊಂಡಿದ್ದ ರವಿಕುಮಾರ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಮನಗರ ಜಿಲ್ಲಾ ಪಂಚಾಯತಿ ಸಿಇಒ ಇಕ್ರಮ್, ಪಿಡಿಒ ರವಿಕುಮಾರ್ನನ್ನು ಅಮಾನತುಗೊಳಿಸಿ ಆದೇಶ ಮಾಡಿದ್ದರು.
ಅಲ್ಲದೇ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುರುಪ್ರಸಾದ್, ಲಾಗಿನ್ ದುರುಪಯೋಗ ಆಗಿರುವುದು ಸಹ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿತ್ತು. ಬೆಂಗಳೂರು ದಕ್ಷಿಣ ತಾಲೂಕಿನ ತರಳು, ಸೋಮನಹಳ್ಳಿ, ಕುಂಬಳಗೋಡು ಗ್ರಾಮ ಪಂಚಾಯಿತಿ ಸೇರಿದಂತೆ ಹಲವೆಡೆ ಸಹ ಇ-ಸ್ವತ್ತು ತಂತ್ರಾಂಶ ದುರುಪಯೋಗ ಪಡಿಸಿಕೊಂಡಿರುವ ಕುರಿತು ವಿವಿಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿವೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications