ಚನ್ನಪಟ್ಟಣದ ಅಂಬೆಗಾಲು ಕೃಷ್ಣನ ದರ್ಶನಕ್ಕೆ ಅಡ್ಡಿಯಾದ ಕೊರೊನಾ ಮಹಾಮಾರಿ
ರಾಮನಗರ, ಆಗಸ್ಟ್ 11: ಕೊರೊನಾ ಮಹಾಮಾರಿಯು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಕರಿ ಛಾಯೆ ಮೂಡಿಸಿದ್ದು, ಜಗತ್ತಿನಲ್ಲೇ ಅಪರೂಪದ ಬಾಲಕೃಷ್ಣನ ವಿಗ್ರಹವಿರುವ ಚನ್ನಪಟ್ಟಣದ ಅಂಬೆಗಾಲು ಕೃಷ್ಣ ದೇವಾಲಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಭಕ್ತರಿಗೆ ನಿರಾಶೆಯಾಗಿದೆ.
Recommended Video
ರಾಮನಗರ ಜಿಲ್ಲೆಯ "ಎ' ಗ್ರೇಡ್ ದೇವಾಲಯಗಳ ಪ್ರಾರಂಭಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ತೊರದಿದ್ದರಿಂದ ಜಿಲ್ಲೆಯ ಸುಮಾರು ಏಳು ಪ್ರಸಿದ್ಧ ದೇವಾಲಯಗಳು ಬಾಗಿಲು ಬಂದ್ ಆಗಿವೆ. ಅಂತೆಯೇ ಕಣ್ವ ನದಿ ತಟದಲ್ಲಿರುವ ಕಣ್ವ ಮಹರ್ಷಿಗಳಿಂದ ಪ್ರತಿಷ್ಠಾಪಿತವಾಗಿ ಪೂಜಿಸಲ್ಪಟ್ಟ ದೇಶದಲ್ಲೇ ವಿಶೇಷ ಎನ್ನುವ ಅಂಬೆಗಾಲಲ್ಲಿ ಕುಳಿತಿರುವ ಶ್ರೀಕೃಷ್ಣ ದೇವಾಲಯವೂ ಬಂದ್ ಆಗಿದೆ.

ಅಂಬೆಗಾಲು ಶ್ರೀಕೃಷ್ಣ ದೇವಾಲಯದ ಬಾಗಿಲು ಬಂದ್
ಮಂಗಳವಾರದಂದು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕೃಷ್ಣ-ರಾಧೆ ವೇಷಾಧಾರಿಗಳನ್ನಾಗಿಸಿ ದೇವಾಲಯಕ್ಕೆ ಭೇಟಿ ಕೊಟ್ಟು ದರ್ಶನ ಪಡೆಯೋದು ಸರ್ವೆ ಸಾಮಾನ್ಯ. ಅಂಬೆಗಾಲು ಶ್ರೀಕೃಷ್ಣ ದೇವಾಲಯದ ಬಾಗಿಲು ಕೋವಿಡ್ ಹಿನ್ನೆಲೆಯಲ್ಲಿ ತೆರೆಯದಿರುವುದು ಭಕ್ತಾಧಿಗಳಿಗೆ ಬೇಸರ ಉಂಟು ಮಾಡಿದೆ. ಇಂದು ಬೆಳಿಗ್ಗಿನಿಂದ ದೇವರ ದರ್ಶನಕ್ಕೆ ಬರುತ್ತಿರುವ ಭಕ್ತರು ಬಾಗಿಲಲ್ಲೇ ಕೈ ಮುಗಿದು ಹೋಗಿತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ತೊಟ್ಟಿಲು ಹರಕೆ ಕಟ್ಟಿದರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆ
ಶ್ರಾವಣ ಮಾಸದಲ್ಲಿ ಬರುವ ಶ್ರೀಕೃಷ್ಣ ಜನ್ಮಾಷ್ಟಮಿಯಂದು ದೇವಾಲಯಕ್ಕೆ ಹೋಗಿ ಪೂಜಿ ಸಲ್ಲಿಸಿ ಹರಕೆ ಕಟ್ಟಿದರೆ, ಸಂಕಷ್ಟ ಪರಿಹಾರವಾಗಿತ್ತೆ ಹಾಗೂ ಮಕ್ಕಳಿಲ್ಲದವರು ಇಲ್ಲಿಗೆ ಭೇಟಿ ನೀಡಿ ತೊಟ್ಟಿಲು ಹರಕೆ ಕಟ್ಟಿದರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆ ಹೆಚ್ಚಾಗಿದೆ. ಅಲ್ಲದೆ ಇಲ್ಲಿಗೆ ಹರಕೆ ಫಲಿಸಿದ ಬಳಿಕ ದೇಶ ವಿದೇಶಗಳಿಂದ ಆಗಮಿಸುವ ಭಕ್ತರು ಹರಕೆ ತೀರಿಸುವುದು ಇಲ್ಲಿನ ವಾಡಿಕೆಯಾಗಿದೆ.

ಮಕ್ಕಳ ಭಾಗ್ಯ ಕರುಣಿಸೊ ದೈವ
ಚನ್ನಪಟ್ಟಣದ ದೊಡ್ಡಮಳೂರಿನ ಅಂಬೆಗಾಲು ಕೃಷ್ಣನಿಗೆ ಹರಕೆ ಹೊತ್ತರೆ ಸಾಕು ಮಕ್ಕಳ ಭಾಗ್ಯ ದೊರೆಯುತ್ತದೆ ಎಂಬ ಪ್ರತೀತಿ ಇದೆ. ಇನ್ನು ನವನೀತ ಕೃಷ್ಣ, ಸಂತಾನ ಕೃಷ್ಣ, ಅಂಬೆಗಾಲು ಕೃಷ್ಣ ಎಂದು ಭಕ್ತರಿಂದ ಕರೆಸಿಕೊಳ್ಳುವ ಈ ಕೃಷ್ಣನ ದೇವಾಲಯಕ್ಕೆ ಮದುವೆಯಾಗಿ 25 ವರ್ಷಗಳು ಕಳೆದರೂ ಮಕ್ಕಳಾಗದಿರುವಂತ ದಂಪತಿಗಳು ಬಂದು ಈ ದೇವರಿಗೆ ಹರಕೆ ಹೊತ್ತು ಸಂತಾನ ಭಾಗ್ಯ ಪಡೆದಿದ್ದಾರೆ.

ಕಾಣಿಕೆಯಾಗಿ ನೀಡಿರುವ ಸಾವಿರಾರು ತೊಟ್ಟಿಲುಗಳು
ಅಲ್ಲದೆ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡು ಮಕ್ಕಳ ಭಾಗ್ಯ ಇಲ್ಲವೇ ಇಲ್ಲ ಎಂಬಂತಹ ಮಂದಿಯೂ ಮಕ್ಕಳನ್ನು ಪಡೆದಿದ್ದು, ಇದು ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದೆ. ಹೀಗೆ ಸಂತಾನ ಭಾಗ್ಯವಿಲ್ಲದೆ ಇಲ್ಲಿಗೆ ಆಗಮಿಸಿ ಹರಕೆ ಹೊತ್ತು ಸಂತಾನ ಪಡೆದಿರುವ ಮಂದಿ ಸಾಕಷ್ಟಿದ್ದಾರೆ. ಮರ, ಬೆಳ್ಳಿಯ ಹಾಗೂ ಚಿನ್ನದ ಯಾವುದಾದರೂ ತಮ್ಮ ಶಕ್ತ್ಯಾನುಸಾರ ತೊಟ್ಟಿಲನ್ನು ಸಮರ್ಪಿಸುತ್ತೇವೆ ಎಂದು ಬೇಡಿಕೊಂಡರೆ ಸಾಕು, ಮಕ್ಕಳ ಭಾಗ್ಯ ಸಿಗುತ್ತದೆ. ಹೀಗೆ ಸಂತಾನ ಪಡೆದ ಮಂದಿ ಕಾಣಿಕೆಯಾಗಿ ನೀಡಿರುವ ಸಾವಿರಾರು ತೊಟ್ಟಿಲುಗಳೇ ಇದಕ್ಕೆ ಸಾಕ್ಷಿಯಾಗಿದೆ.











Click it and Unblock the Notifications