ನಿಗೂಢವಾಗಿ ಮೃತಪಟ್ಟಿದ್ದ ಮಾಗಡಿ ಯೋಧನಿಗೆ ಸರ್ಕಾರಿ ಗೌರವವಿಲ್ಲದೆ ಅಂತ್ಯಕ್ರಿಯೆ
ರಾಮನಗರ, ಜನವರಿ 17: ಜಮ್ಮುವಿನ ಉದ್ಧಂಪುರ ಕ್ಯಾಂಪ್ ಬಳಿ ನಿಗೂಢವಾಗಿ ಮೃತಪಟ್ಟಿದ್ದ ಮಾಗಡಿಯ ಯೋಧ, 29 ವರ್ಷದ ವೆಂಕಟ ನರಸಿಂಹಮೂರ್ತಿ ಅವರ ಮೃತದೇಹವನ್ನು ಇಂದು ಹುಟ್ಟೂರು ಮಾಗಡಿಯಲ್ಲಿ ಯಾವುದೇ ಸರ್ಕಾರಿ ಗೌರವವಿಲ್ಲದೆ ಅಂತ್ಯ ಸಂಸ್ಕಾರ ಮಾಡಲಾಯಿತು.
ಮೂರು ದಿನಗಳಿಂದ ಮೃತ ದೇಹಕ್ಕಾಗಿ ಕಾಯುತ್ತಿದ್ದ ಸಂಬಂಧಿಕರಿಗೆ, ನಿನ್ನೆ ಗುರುವಾರ ರಾತ್ರಿ ಯೋಧನ ಹುಟ್ಟೂರು ಮಾಗಡಿಯ ಹೊಂಬಾಳಮ್ಮ ಪೇಟೆಯಲ್ಲಿ ಮೃತದೇಹವನ್ನು ಸೇನಾ ಸಿಬ್ಬಂದಿ ಹಸ್ತಾಂತರಿಸಿದರು.
ಹೊಂಬಾಳಮ್ಮನ ಪೇಟೆಯ ತೋಟದಲ್ಲಿ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ಆತ್ಮಹತ್ಯೆಯ ಕಾರಣ ಸರ್ಕಾರಿ ಗೌರವವಿಲ್ಲ
ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನತೆ ಯೋಧನ ಅಂತಿಮ ದರ್ಶನ ಪಡೆದರು. ಮೃತ ಸೈನಿಕ ವೆಂಕಟ್ ನರಸಿಂಹಮೂರ್ತಿ ಅವರ ಕುಟುಂಬಸ್ಥರು ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಿದರು.
ಯೋಧ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಗೌರವ ನೀಡಿಲ್ಲ ಎಂದು ರಾಮನಗರ ಜಿಲ್ಲಾಧಿಕಾರಿ ಅರ್ಚನಾ ತಿಳಿಸಿದ್ದಾರೆ.

ಸೇನೆಯಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ
ಮೃತ ಯೋಧ ವೆಂಕಟ್ ಸುಮಾರು ಎಂಟು ವರ್ಷಗಳಿಂದ ಸಿ.ಎಲ್.ಎಸ್.ಎಫ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ನಿಗೂಢವಾಗಿ ವೆಂಕಟ್ ಸಾವನ್ನಪ್ಪಿರುವುದಕ್ಕೆ ಸರಿಯಾದ ಕಾರಣವೇ ತಿಳಿಯುತ್ತಿಲ್ಲ, ಸೇನೆಯೂ ಯಾವುದೇ ಮಾಹಿತಿ ನೀಡಿಲ್ಲ. ಯೋಧನ ಸಾವಿನ ರಹಸ್ಯ ಆದಷ್ಟು ಬೇಗ ಹೊರಬರಲಿ ಎಂಬುದು ಸ್ಥಳೀಯರ ಒತ್ತಾಯ.

ಮಾತಿನ ಚಕಮಕಿಯಿಂದ ಆತ್ಮಹತ್ಯೆ?
ವೆಂಕಟ್ ನರಸಿಂಹಮೂರ್ತಿ ಜಮ್ಮುವಿನಲ್ಲಿ ಕರ್ತವ್ಯ ನಿರ್ವಹಣೆಯಲ್ಲಿದ್ದ ಸಮಯದಲ್ಲಿ ತನ್ನ ಇಬ್ಬರು ಸಹೋದ್ಯೋಗಿಗಳಾದ ಮುಹಮ್ಮದ್ ತಸ್ಲೀಮ್ ಮತ್ತು ಸಂಜಯ್ ಠಾಕ್ರೆ ಎಂಬುವರೊಂದಿಗೆ ಮಾತಿನ ಚಕಮಕಿ ನಡೆದಿದೆ.
ಅದು ವಿಕೋಪಕ್ಕೆ ತಿರುಗಿ ತನ್ನ ಸರ್ವೀಸ್ ರಿವಾಲ್ವರ್ ನಿಂದ ಇಬ್ಬರಿಗೂ ಗುಂಡಿಕ್ಕಿ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸಾವಿನ ಬಗ್ಗೆ ಉನ್ನತ ತನಿಖೆಗೆ ಪೋಷಕರ ಆಗ್ರಹ
ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ನಡೆಯುವ ಎರಡು ದಿನಗಳ ಮೊದಲು ತಂದೆಗೆ ಕರೆ ಮಾಡಿದ್ದ ಯೋಧ, "ನನಗೆ ಇಲ್ಲಿ ತುಂಬಾ ಒತ್ತಡವಿದೆ" ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ. ನಂತರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನಮ್ಮ ಮಗ ಸಹೋದ್ಯೋಗಿಗಳ ಕಿರುಕುಳದಿಂದ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ಮೃತನ ತಂದೆ ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.












Click it and Unblock the Notifications