ರಾಮನಗರ; ಹೈನುಗಾರಿಕೆಗೆ ಮಾರಕವಾದ ಕಾಲುಬಾಯಿ ಜ್ವರ
ರಾಮನಗರ, ಜೂನ್ 24; ಕೊರೊನಾ ಆರ್ಭಟಕ್ಕೆ ನಲುಗಿಹೋಗಿದ್ದ ಅನ್ನದಾತ ಇದೀಗ ಚೇತರಿಸಿಕೊಳ್ಳುವ ಮುನ್ನವೇ ಜೀವನಾಧಾರವಾಗಿದ್ದ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಇದರಿಂದ ರೈತನ ಬದುಕು ದುಸ್ತರವಾಗುತ್ತಿದೆ.
ಕೋವಿಡ್ ಭೀತಿಯಿಂದ ಎಲ್ಲಾ ಉದ್ಯಮಗಳು ಬಂದ್ ಆಗಿದ್ದರೂ ರೈತನ ಬದುಕಿಗೆ ಆಸರೆಯಾಗಿದ್ದು ಹೈನುಗಾರಿಕೆ. ಪಟ್ಟಣದಲ್ಲಿ ಕೆಲಸ ಕಳೆದುಕೊಂಡು ವಾಪಸ್ ಊರಿಗೆ ಬಂದ ಮಂದಿ ಕೂಡ ಹಸು ಸಾಕಣೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದರು.
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಬಾನಂದೂರು ಗ್ರಾಮದಲ್ಲಿ ಕಳೆದ ಮೂರು ದಿನಗಳಲ್ಲಿ 5 ಹಸುಗಳು ಕಾಲುಬಾಯಿ ಜ್ವರದಿಂದ ಮೃತಪಟ್ಟಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ತಕ್ಷಣವೇ ಸರ್ಕಾರ ಸಾಮೂಹಿಕವಾಗಿ ಎಲ್ಲಾ ಹಸುಗಳಿಗೆ ಲಸಿಕೆ ಹಾಕಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಬಾನಂದೂರು ಗ್ರಾಮದ ರೈತ ಬಸವರಾಜ್ ಹೈನುಗಾರಿಕೆಯನ್ನೇ ನಂಬಿ 30 ಹಸುಗಳನ್ನು ಸಾಕಿದ್ದಾರೆ. ಕಳೆದ ಮೂರು ದಿನಗಳ ಕಾಲುಬಾಯಿ ಜ್ವರ ಕಾಣಿಸಿಕೊಂಡ ಪರಿಣಾಮ 5 ಹಸುಗಳು ಸಾವನಪ್ಪಿವೆ. ಇದರಿಂದಾಗಿ ಸುಮಾರು 2.5ಲಕ್ಷ ರೂ. ನಷ್ಟವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಹಸುಗಳು ಸಾವನ್ನಪ್ಪಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಹಾಲು ಉತ್ಪಾದಕರ ಸಂಘ; ಗ್ರಾಮದಲ್ಲಿ ಹಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡು ಕೆಲ ಹಸುಗಳು ಮೃತಪಟ್ಟ ಹಿನ್ನಲೆಯಲ್ಲಿ ಹಾಲು ಉತ್ಪಾದಕರ ಸಂಘ ಬಾನಂದೂರು ಗ್ರಾಮದ ಎಲ್ಲಾ ರಸುಗಳಿಗೆ ಲಸಿಕೆ ಹಾಕಿಸುವ ಮೂಲಕ ಹಸುಗಳನ್ನು ರಕ್ಷಣೆ ಮಾಡಲು ಮುಂದಾಗಿದೆ. "ಸರ್ಕಾರ ಜಿಲ್ಲೆಯ ಎಲ್ಲಾ ಹಸುಗಳಿಗೆ ಲಸಿಕೆ ಹಾಕಲು ಅಭಿಯಾನ ನಡೆಸಿದರೆ ಹಸುಗಳನ್ನು ರಕ್ಷಣೆ ಮಾಡಬಹುದು" ಎನ್ನುತ್ತಾರೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಗಂಗಾಧರ್.

"ಕಾಲುಬಾಯಿ ಜ್ವರ ಕೆಲ ಗ್ರಾಮಗಳಿಲ್ಲಿ ಕಾಣಿಸಿಕೊಂಡಿದೆ ಹಾಗಾಗಿ ಬಾನಂದೂರು ಗ್ರಾಮದ ಸುತ್ತಲಿನ ಐದು ಗ್ರಾಮಗಳಲ್ಲಿ ಲಸಿಕೆ ಶಿಬಿರ ಹಮ್ಮಿಕೊಂಡಿದ್ದೇವೆ. ರೋಗ ಬೇರಡೆ ಹರಡದಂತೆ ಜಿಲ್ಲೆಯಾದ್ಯಂತ ಲಸಿಕೆ ನೀಡಿದರೆ ಹಸುಗಳನ್ನು ಕಾಲುಬಾಯಿ ಜ್ವರದಿಂದ ರಕ್ಷಣೆ ಮಾಡಬಹುದು" ಎಂದು ಪಶುವೈಧ್ಯಾಧಿಕಾರಿ ಪ್ರವೀಣ್ ಹೇಳಿದರು.
ಕೋವಿಡ್ನಿಂದ ಮನುಷ್ಯರು ಮೃತಪಟ್ಟಂತೆ ಕಾಲುಬಾಯಿ ರೋಗದಿಂದ ಹಸುಗಳು ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಡೇರಿ ವ್ಯಾಪ್ತಿಯ ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ 12 ತಾಲೂಕುಗಳಲ್ಲಿ ಸುಮಾರು 5 ಲಕ್ಷ ಹಸುಗಳಿದ್ದು, ಶೇ 20ರಷ್ಟು ಹಸುಗಳಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿದೆ.
ಸರ್ಕಾರ 15 ವರ್ಷದಿಂದ ಪ್ರತಿ 6 ತಿಂಗಳಿಗೊಮ್ಮೆ ಹಸುಗಳಿಗೆ ಲಸಿಕೆ ನೀಡುತ್ತಿತ್ತು. ಇದರ ಖರ್ಚುವೆಚ್ಚವನ್ನು ಕೆಎಂಎಫ್ ಭರಿಸುತ್ತಿತ್ತು. ಆದರೆ ಈ ಭಾರಿ ಲಸಿಕೆ ನೀಡದೆ ಇರುವುದರಿಂದ ರೋಗ ಹೆಚ್ಚಾಗಿ ರೈತರು ಹಸುಗಳನ್ನು ಕಳೆದುಕೊಳ್ಳುವಂತಾಗಿದೆ.
"ಎಂಪಿಸಿಸಿ ವತಿಯಿಂದ ನೇರವಾಗಿ ಲಸಿಕೆ ಖರೀದಿಸಲು ಸರಕಾರ ಅವಕಾಶ ನೀಡಿಲ್ಲ. ಸರಕಾರ ಖರೀದಿಗೆ ಅವಕಾಶ ಕಲ್ಪಿಸಿದರೆ ರಾಸುಗಳನ್ನು ಕಾಲುಬಾಯಿ ಜ್ವರದಿಂದ ಮುಕ್ತಗೊಳಿಸಲಾಗುವುದು" ಎಂದು ಬೆಂಗಳೂರು ಡೈರಿ ಅಧ್ಯಕ್ಷ ನರಸಿಂಹಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications