ರಾಯಚೂರು ಯುವಕನ ವಿಶೇಷ ಕೈಚಳಕ: ಸಾಬೂನಲ್ಲೇ ಅರಳಿದ ದೇವರ ಕೆತ್ತನೆಗಳು
ರಾಯಚೂರು, ಸೆಪ್ಟೆಂಬರ್ 10: ಸಾಧನೆ ಮಾಡಲು ಇಂತಹದ್ದೇ ಕ್ಷೇತ್ರ ಬೇಕು, ಇಂತಹದ್ದೇ ಹುದ್ದೆ ಬೇಕು, ಉನ್ನತ ಕೋರ್ಸ್ ಮಾಡಬೇಕು ಎಂಬ ಯಾವುದೇ ಹಂಗಿಲ್ಲ. ಇದೇ ರೀತಿ ಯುವಕನೊಬ್ಬ ಚಿತ್ರಕಲಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿದ್ದು ಅವರ ಕಲೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಡೆದೊರೆ ನಾಡಿನ ಗ್ರಾಮೀಣ ಪ್ರತಿಭೆ ವಿಜಯಕುಮಾರ ಬಡಿಗೇರ ಎಂಬುವರೇ ಕಲಾಕ್ಷೇತ್ರದ ಸಾಧಕರಾಗಿದ್ದಾರೆ. ಮೈ ತೊಳೆದುಕೊಳ್ಳುವ ಸೋಪ್ನಲ್ಲೇ ಶ್ರೀ ಕೃಷ್ಣ ದೇವರು ಸೇರಿದಂತೆ ಅನೇಕ ವಿಭಿನ್ನ ಬಗೆಯ ದೇವರುಗಳ ಅವತಾರ ಚಿತ್ರ ಕೆತ್ತಿದ್ದು, ಅವರ ಚಿತ್ರಕಲೆ ಕೆತ್ತನೆಗೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಿದೆ.

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮಾಕಾಪೂರದ ಕಲಾವಿದ ವಿಜಯಕುಮಾರ ಬಡಿಗೇರ ಅವರಿಗೆ ಈ ಕಲೆ ವಂಶಪರಂಪರೆಯಿಂದ ಬಂದಿದೆ. ಆದರೆ ಇವರೆಗೂ ಕೆತ್ತನೆ ಚಿತ್ರಕಲೆ ಪ್ರದರ್ಶಿಸಿಲ್ಲ. ಹೆಚ್ಚಿನ ಪ್ರಚಾರ ಪಡೆದಿಲ್ಲ. ಇತ್ತೀಚಿಗೆ ಯುವಕನ ಕಲೆಗೆ ಮಹತ್ವ ಬಂದಿದೆ. ಗುಂಡ್ ಪಿನ್ ಬಳಸಿ ಸೋಪಿನಲ್ಲಿ ದೇವರ ಚಿತ್ರ ಅರಳಿಸುವುದು ಇವರಿಗೆ ಹವ್ಯಾಸವಾಗಿದೆ. ಕಳೆದ ನಾಲ್ಕು ವರ್ಷದಿಂದ ಕಲಾ ಕ್ಷೇತ್ರದ ಯಶಸ್ಸಿನ ಪ್ರಯಣ ಮುಂದುವರೆದಿದೆ.
ಕಲಾವಿದನ ಕೈಗೆ ಚಾಕ್ ಪೀಸ್ ಕೊಟ್ಟರೆ ಸಾಕು ತನ್ನ ಕೈ ಚಳಕದಿಂದ ನಂದೀಶ್ವರ, ಗಣೇಶ ಸೇರಿದಂತೆ ವೈವಿಧ್ಯಮಯ ದೈವತ್ವದ ನೆಲೆಯಿರುವ ಚಿತ್ರ ಕೆತ್ತಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ. ದೇವರ ಚಿತ್ರವನ್ನು ಸೋಪಿನಲ್ಲಿ ಕೆತ್ತುವ ಮುಂಚೆ ಸ್ನಾನ ಮುಗಿಸಿ ಧ್ಯಾನಿಸಿ ಚಿತ್ರ ಅರಳಿಸುತ್ತಾರೆ.
ಚಿಕ್ಕ ವಯಸ್ಸಿನಲ್ಲಿಯೇ ವಾಸುದೇವನ ಪುತ್ರ ಶ್ರೀಕೃಷ್ಣ ಪರಮಾತ್ಮ , ಶ್ರೀರಾಮ ಚಂದ್ರನ ಭಕ್ತ ಆಂಜನೇಯ, ನಂದೀಶ್ವರ ಸೇರಿದಂತೆ ದೈವಾರಾಧನೆ ಬಿಂಬಿಸುವ 50ಕ್ಕೂ ಹೆಚ್ಚು ಚಿತ್ರ ಕೆತ್ತಿದ್ದಾರೆ.
ಜೊತೆಗೆ ಐತಿಹಾಸಿಕ ಪುರುಷ , ಮರಾಠ ಸಾಮ್ರಾಜ್ಯದ ಸ್ಥಾಪಕ ಶಿವಾಜಿ ಮಹಾರಾಜರ ಸಾಧನೆ ಬಿಂಬಿಸುವ ಚಿತ್ರ ರಚಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರ ವೀಕ್ಷಿಸಿದರೆ ಮನಸ್ಸಿನಲ್ಲಿ ಭಕ್ತಿ ಮೂಡಲಿದೆ. ಎಲ್ಲ ಚಿತ್ರಗಳನ್ನು 10 ರೂಪಾಯಿ ಬೆಲೆಬಾಳುವ ಸೋಪ್ನಲ್ಲಿ ಕೆತ್ತಿದ್ದಾರೆ. ಮೂರು ಗಂಟೆಯೊಳಗೆ ಒಂದು ಚಿತ್ರವನ್ನು ಇವರು ರಚಿಸುತ್ತಾರೆ. ದೇವರ ಚಿತ್ರಗಳನ್ನು ಸಾಬೂನ್ ಹಾಗೂ ಚಾಕ್ ಪೀಸ್ನಲ್ಲಿ ಸಿದ್ಧಪಡಿಸಿ ಭಕ್ತರಿಗೆ ಉಚಿತವಾಗಿ ನೀಡುತ್ತಿರುವುದು ವಿಶೇಷವಾಗಿದೆ.
'ಚಾಕ್ಪೀಸ್, ಸಾಬೂನಿನಲ್ಲಿ ವೈವಿಧ್ಯಮಯ ದೇವರ ಮೂರ್ತಿಗಳನ್ನು ಕೆತ್ತಿರುವೆ. ನನ್ನ ಕಲೆಗೆ ಬೆಂಬಲ ದೊರೆತಿದೆ. ದುಡ್ಡಿಗಾಗಿ ಕಲೆ ಮಾರಾಟ ಮಾಡಿಲ್ಲ. ಭಕ್ತರಿಗೆ ಉಚಿತವಾಗಿ ನೀಡುತ್ತಿರುವೆ' ಎಂದು ಕಲಾವಿದ ವಿಜಯಕುಮಾರ ಬಡಿಗೇರ ಮಾಕಾಪುರ ಹೇಳಿದ್ದಾರೆ.












Click it and Unblock the Notifications