ತೆಲಂಗಾಣದೊಂದಿಗೆ ವಿಲೀನವಾಗಲು ರಾಯಚೂರು ಜನ ಬಯಸುತ್ತಿದ್ದಾರೆ: ಕಿಡಿ ಹೊತ್ತಿಸಿದ ಕೆಸಿಆರ್ ಹೇಳಿಕೆ
ರಾಯಚೂರು ಆಸ್ಟ್ 18: ಟಿಆರ್ಎಸ್ ಸರಕಾರದ ಯೋಜನೆಗಳಿಂದ ಆಕರ್ಷಿತರಾಗಿರುವ ಕರ್ನಾಟಕದ ರಾಯಚೂರು ಜಿಲ್ಲೆಯ ಜನರು ಅಲ್ಲಿನ ಪ್ರದೇಶವನ್ನು ತೆಲಂಗಾಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿಕೆ ನೀಡಿರುವುದಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಬುಧವಾರ ವಿಕಾರಬಾದ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕದೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಗಡಿ ಪ್ರದೇಶವಾದ ತಾಂಡೂರಿಗೆ ರಾಯಚೂರಿನ ಜನರು ಹತ್ತಿರದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಯಚೂರಿನ ಕೆಲವು ಗಡಿ ಭಾಗದ ಜನರು ತಮ್ಮನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇಲ್ಲವಾದಲ್ಲಿ ನಮ್ಮ ರಾಜ್ಯದಲ್ಲಿ ಜಾರಿಗೆ ತಂದಿರುವ ರೀತಿಯ ಯೋಜನೆಗಳನ್ನು ಕರ್ನಾಟಕದಲ್ಲೂ ಜಾರಿ ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.
ತೆಲಂಗಾಣ ಸಚಿವ ಕೆಟಿಆರ್ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ನಾಲ್ವರು ಪೌರಕಾರ್ಮಿಕರ ವಜಾ!
ತೆಲಂಗಾಣದಲ್ಲಿ ಬಿಜೆಪಿ ಪಕ್ಷವನ್ನು ಹಣಿಯಲು ಅಲ್ಲಿನ ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿಯು ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ನೀಡಿದ್ದ ಹೇಳಿಕೆಯನ್ನು ಮತ್ತೆ ಮತ್ತೆ ಪ್ರಸ್ತಾಪಿಸಿ ಕರ್ನಾಟಕ ಸರಕಾರಕ್ಕೆ ಮುಜುಗರವನ್ನುಂಟು ಮಾಡುತ್ತಿದೆ.
ಚಂದ್ರಶೇಖರ್ ರಾವ್ ಹೇಳಿಕೆಗೆ ಕಾರಣ?
ಕೆಲವು ದಿನಗಳ ಹಿಂದೆ ತೆಲಂಗಾಣದಲ್ಲಿ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಟಿಆರ್ಎಸ್ ಸರಕಾರದ ವೈಫಲ್ಯಗಳನ್ನು ಜನರ ಮುಂದಿಡಲು ಪಾದಯಾತ್ರೆ ನಡೆಸಿತ್ತು. ಪಾದಯಾತ್ರೆ ಸಾಗಿದಲ್ಲೆಲ್ಲಾ ರಾಜಕೀಯವಾಗಿ ಅಲ್ಲಿನ ಟಿಆರ್ಎಸ್ ಸರಕಾರದ ವೈಫಲ್ಯವನ್ನು ಜನರ ಮುಂದಿಡುವ ಕಾರ್ಯವನ್ನು ಮಾಡುತ್ತಿದೆ. ಬಿಜೆಪಿಯ ಪಾದಯಾತ್ರೆ ರಾಯಚೂರು ನಿವಾಸಿಯಾಗಿರುವ ಎಸ್. ಆರ್. ರೆಡ್ಡಿ ಶಾಸಕರಾಗಿರುವ ನಾರಾಯಣಪೇಟೆಗೆ ಆಗಮಿಸಿತ್ತು. ಅಲ್ಲಿ ಬಿಜೆಪಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಕೂಡ ಪಾಲ್ಗೊಂಡಿದ್ದರು.
ತೆಲಂಗಾಣ ಸರಕಾರ ವಿರುದ್ಧ ಪಾಟೀಲ್ ಟೀಕೆ
ಸಮಾವೇಶದಲ್ಲಿ ಮಾತನಾಡಿದ್ದ ಪಾಟೀಲ್ " ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಧಿಕಾರದಲ್ಲಿರುವುದರಿಂದಲೇ ರಾಯಚೂರು ಅಭಿವೃದ್ಧಿಯಾಗಿದೆ. ಆದರೆ, ನಾರಾಯಣಪೇಟೆ ಶಾಸಕ ಎಸ್. ಆರ್. ರೆಡ್ಡಿ ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ತೆಲಂಗಾಣದಲ್ಲಿ ನಡೆಯುವ ಚುನಾವಣೆ ವೇಳೆ ನಾರಾಯಣಪೇಟೆಯ ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಾಗಿ ಹೇಳಿದ್ದರು. ಈ ಹೇಳಿಕೆ ಟಿಆರ್ಎಸ್ ಪಾರ್ಟಿಯನ್ನು ಕೆರಳಿಸಿತ್ತು.
ಅದಕ್ಕಾಗಿ ಶಿವರಾಜ್ ಪಾಟೀಲ್ರ ಹಳೇ ವಿಡಿಯೋವನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾ ಕರ್ನಾಟಕ ಸರಕಾರದ ಕಾಲೆಳೆಯುವ ಪ್ರಯತ್ನ ಮಾಡುತ್ತಿದೆ. ಕೆಸಿಆರ್ ಪುತ್ರ ಕೆಟಿ ರಾಮರಾವ್ ಕೂಡ ಟ್ವೀಟ್ ಮಾಡಿ" ರಾಯಚೂರು ಬಿಜೆಪಿ ಶಾಸಕ ಡಾ. ಶಿವರಾಜ ಪಾಟೀಲ ರಾಯಚೂರನ್ನು ತೆಲಂಗಾಣದ ಜೊತೆ ವಿಲೀನ ಮಾಡಬೇಕೆಂದು ಬಯಸಿದ್ದಾರೆ"ಎಂದು ಪೋಸ್ಟ್ ಮಾಡಿದ್ದರು.
ಅಷ್ಟಕ್ಕೂ ಶಿವರಾಜ್ ಪಾಟೀಲ್ ಹೇಳಿದ್ದೇನು?
" ರಾಜ್ಯದಲ್ಲಿ ಉತ್ತರ ಕರ್ನಾಟಕವೆಂದರೆ ಹುಬ್ಬಳ್ಳಿ-ಧಾರವಾಡ , ಕಲ್ಯಾಣ ಕರ್ನಾಟಕವೆಂದರೆ ಕಲಬುರಗಿ, ಬೀದರ್ ಜಿಲ್ಲೆಗಳಾಗಿವೆ. ಆದರೆ ರಾಯಚೂರಿಗೆ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅರಚಿಕೊಂಡರೂ ನಮ್ಮ ಧ್ವನಿ ಸರಕಾರಕ್ಕೆ ಕೇಳಿಸುತ್ತಿಲ್ಲ. ನಮ್ಮ ಮೇಲೆ ಕಣ್ಣು ತೆಗೆಯಿರಿ, ಸತ್ತ ಹೆಣಗಳಾಗಿರುವ ನಮಗೆ ಜೀವತುಂಬುವ ಕೆಲಸ ಮಾಡಿ, ಇಲ್ಲವೇ ತೆಲಂಗಾಣಕ್ಕೆ ಸೇರಿಸಿಬಿಡಿ " ಎಂದು ಶಿವರಾಜ್ ಪಾಟೀಲ್ ಆಕ್ರೋಶದಿಂದ ಹೇಳಿದ್ದರು.
ಕಲ್ಯಾಣ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಏಕೆ?
ರಾಯಚೂರಿನ ಜನರು ನಮ್ಮ ಕಲ್ಯಾಣ ಯೋಜನೆಗಳನ್ನು ಕಂಡು ತೆಲಂಗಾಣದೊಂದಿಗೆ ವಿಲೀನಗೊಳ್ಳಲು ಬಯಸುತ್ತಿದ್ದಾರೆ ಎಂದು ಸಿಎಂ ಕೆಸಿಆರ್ ಹೇಳಿಕೆ ನೀಡಿ 24 ಗಂಟೆಗಳು ಕಳೆದರೂ ರಾಜ್ಯ ಸರಕಾರದ ಯಾರೊಬ್ಬರಿಂದಲೂ ಒಂದೇ ಒಂದು ಹೇಳಿಕೆ ಬರದಿರುವುದು ನನಗೆ ನಿರಾಶೆ ತಂದಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಎಂದರೆ ಈ ಮಲತಾಯಿ ಧೋರಣೆ ಏಕೆ? ಒಂದು ವೇಳೆ ಬೆಳಗಾವಿ ಗಡಿ ಸಮಸ್ಯೆಯಾಗಿದ್ದರೆ ಇಡೀ ಸಚಿವ ಸಂಪುಟವೇ ರಕ್ಷಣೆಗೆ ಬಂದು ನಿಲ್ಲುತ್ತಿತ್ತು. ಆದರೆ, ನಮ್ಮ ವಿಚಾರದಲ್ಲಿ ಏಕೆ ಹಾಗಾಗಲ್ಲ? ಬಿಜೆಪಿ ಸರಕಾರ ನಮ್ಮನ್ನು ಕರ್ನಾಟಕದ ಭಾಗವೆಂದು ಪರಿಗಣಿಸುತ್ತದೋ ಅಥವಾ ಇಲ್ಲವೋ? ತೆಲಂಗಾಣದೊಂದಿಗೆ ರಾಯಚೂರನ್ನು ವಿಲೀನ ಮಾಡಲು ಸೂಚಿಸಿದ ನಿಮ್ಮ ಶಾಸಕರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸರಣಿ ಟ್ವೀಟ್ಗಳ ಮೂಲಕ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.