Breaking: ರಾಯಚೂರು: ನಿರ್ಜನ ಪ್ರದೇಶದಲ್ಲಿ ಪಿಡಿಒ ಬರ್ಬರ ಹತ್ಯೆ
ರಾಯಚೂರು ಅಕ್ಟೋಬರ್ 6: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹೊರ ವಲಯದ ಹೆದ್ದಾರಿ ಬಳಿ ಕೋಠಾ ಗ್ರಾಮ ಪಂಚಾಯಿತಿಯ ಪಿಡಿಒ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಕೋಠಾ ಗ್ರಾಮ ಪಂಚಾಯಿತಿ ಪಿಡಿಒ ಗಜದಂಡಯ್ಯ ಸ್ವಾಮಿ ಎನ್ನುವವರ ಶವ ಪತ್ತೆಯಾಗಿದ್ದು, ಭಾರೀ ಅನುಮಾನಕ್ಕೆಡೆ ಮಾಡಿದೆ. ಲಿಂಗಸುಗೂರು ತಾಲ್ಲೂಕು ಯಲಗಲದಿನ್ನಿ ಗ್ರಾಮದ ಹೊರವಲಯದಲ್ಲಿ ಗಜದಂಡಸ್ವಾಮಿ ತ್ರಿಪುರಾಂತಯ್ಯ (49) ಶವ ಪತ್ತೆಯಾಗಿದೆ. ತಲೆಗೆ ಬಲವಾಗಿ ಕಲ್ಲು ಅಥವಾ ಮಾರಕಾಸ್ತ್ರದಿಂದ ಹೊಡೆತ ಬಿದ್ದಿದೆ. ಇವರು ಲಿಂಗಸುಗೂರು ತಾಲ್ಲೂಕು ಕೋಠ ಗ್ರಾಮದವರಾಗಿದ್ದು, ಅದೇ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಯಿಂದ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಬಡ್ತಿ ಪಡೆದು ಕಾರ್ಯನಿರ್ವಹಿಸುತ್ತಿದ್ದರು.
ದಾರಿ ಮಧ್ಯದಲ್ಲಿ ಬೈಕ್ ನಿಲ್ಲಿಸಿ ಅದರ ಮೇಲೆ ಹೆಲ್ಮೆಟ್ ಇಟ್ಟು ಚಪ್ಪಲಿ ಬಿಡಲಾಗಿದ್ದು, ಪಿಡಿಒ ಶವ ದೂರದಲ್ಲಿ ಪತ್ತೆಯಾಗಿದೆ. ವಿಚಾರ ಅಥವಾ ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿರಬಹುದೆಂಬ ಅನುಮಾನ ತೀವ್ರವಾಗಿದ್ದು, ಈ ಘಟನೆಗೆ ಸಂಬಂಧಿಸಿ ಲಿಂಗಸೂಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.

ಮೂರು ದಿನಗಳಲ್ಲಿ 2ನೇ ಕೊಲೆ
ಕಲಬುರಗಿ ಕಳೆದ ಮೂರು ದಿನಗಳಲ್ಲಿ 2ನೇ ಕೊಲೆ ನಡೆದಿದೆ. ಎರಡು ದಿನಗಳ ಹಿಂದೆಯಷ್ಟೇ 23 ವರ್ಷದ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕನಾಗಿ ದುಡಿಯುತ್ತಿದ್ದ ಯುವಕನೊಬ್ಬನ ಕೊಲೆಯಾಗಿತ್ತು. ಇದೀಗ ಮತ್ತೊಂದು ಕೊಲೆ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬುಧವಾರ ತಡರಾತ್ರಿ ಉದನೂರ ರಸ್ತೆಯ ಬಸಂತ ನಗರದಲ್ಲಿ ಈ ಘಟನೆ ನಡೆದಿದೆ. ಸಂತೋಷ ಕಾಲೋನಿ ನಿವಾಸಿ ಲಕ್ಷ್ಮಿಪುತ್ರ (35) ಕೊಲೆಯಾದ ವ್ಯಕ್ತಿ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಯುವಕನನ್ನು ಕೊಲೆಗೈದಿದ್ದಾರೆಂಬ ಶಂಕೆ ವ್ಯಕ್ತವಾಗುತ್ತಿದೆ. ಘಟನಾ ಸ್ಥಳಕ್ಕೆ ಅಶೋಕ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications