ಮೆಣಸಿನಕಾಯಿ ಬೆಳೆಗೆ ಆವರಿಸಿದ ಹೊಸ ರೋಗ: ಸಂಕಷ್ಟದಲ್ಲಿ ರೈತ ವರ್ಗ
ರಾಯಚೂರು ಜನವರಿ 17: ಮೆಣಸಿನ ಬೆಳೆ ಪ್ರಾಕೃತಿಕ ವಿಕೋಪ ಹಾಗೂ ವಿವಿಧ ರೋಗಕ್ಕೆ ತುತ್ತಾಗಿದ್ದು, ಮೆಣಸಿನಕಾಯಿ ಬೆಳೆ ರೈತ ಸಮುದಾಯವನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಸಮೀಪದ ನಾಗರಾಳ, ಭೋಗಾಪುರ, ಬಯ್ಯಾಪುರ, ರಾಂಪುರ, ನರಕಲದಿನ್ನಿ, ನಾಗಲಾಪುರ, ಚಿತ್ತಾಪುರ, ಆನೆಹೊಸೂರು, ಬೆಂಡೋಣಿ, ನಂದಿಹಾಳ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ.
ಮೆಣಸಿನಕಾಯಿ ಬೆಳೆಗೆ ಹೊಸ ರೋಗ ಆವರಿಸಿಕೊಂಡಿದ್ದು, ಈ ರೋಗದಿಂದ ಗಿಡಗಳು ಜಮೀನಿನಲ್ಲಿಯೇ ನೆಲಸಮವಾಗುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ರೋಗವನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ.

ಗಿಡಗಳನ್ನು ಬೆಳೆಯಲು ಬಿಡದ ಮುಟ್ಟು ರೋಗ
ಈ ವರ್ಷ ತುಂತುರು ಮಳೆ, ಮೈನಡುಗಿಸುವ ಚಳಿ, ಮ್ಯಾಂಡಸ್ ಚಂಡಮಾರುತದ ಶೀತ ವಾತಾವರಣ ಕಾರಣದಿಂದ ಹಾಕಿದ್ದ ಮೆಣಸಿನ ಗಿಡದಲ್ಲಿ ಬ್ಲಾಕ್ ಟ್ರೀಪ್ಸ್ ವೈರಸ್ ಕಾಣಿಸಿಕೊಂಡಿದ್ದರಿಂದ ಮುಟ್ಟು ರೋಗ ಹುಟ್ಟಿಕೊಂಡಿತು. ಈ ರೋಗ ಗಿಡದ ಎಲೆ ಬೆಳೆಯಲು ಬಿಡದೆ ಬಾಡಿಸುತ್ತದೆ. ಎಲೆ ಚಿಗರದೆ, ಮಗ್ಗು, ಹೂ ಬಿಡುತ್ತಿಲ್ಲ. ಕಾಪು ಕಟ್ಟುತ್ತಿಲ್ಲ. ಗಿಡಗಳು ಹಾಳಾಗುತ್ತಿವೆ.

ವಿವಿಧ ಔಷಧಿಗಳ ಮೊರೆ ಹೋದ ರೈತರು
ರೈತರು ರೋಗ ಹತೋಟಿಗೆ ತರಲು ದುಬಾರಿ ಬೆಲೆಯ ಔಷಧಗಳಾದ ಗ್ರಾಸಿಯಾ, ಎಕ್ಸ್ ಬೋನಸ್, ಇಂಡೊಪಿಲ್, ಡಿಸೈಡ್, ಜಂಪು, ಪೊಲೀಸ್, ಪ್ರಕಾಶಿಸು ಸೇರಿದಂತೆ ಇನ್ನಿತರ ಔಷಧಿಗಳ ಮಾರು ಹೋಗಿದ್ದಾರೆ. ರೋಗ ನಿಯಂತ್ರಣಕ್ಕೆ ತರಲು ಹೊಲದಲ್ಲಿ ಹಳದಿ ಪಟ್ಟಿ, ನೀಲಿ ಪಟ್ಟಿಗಳನ್ನು ಕಟ್ಟಿದ್ದಾರೆ. ಲೈಟ್ ಟ್ರಿಪ್ಸ್ ಹಾಕಿದ್ದಾರೆ. ಮೆಣಸಿನಕಾಯಿ, ಹಣ್ಣುಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳ ಇದೆ. ಉತ್ತಮ ಬೆಲೆಯೂ ಇರುವದರಿಂದ ರೈತರು ಒಂದು ಎಕರೆ ಹೊಲಕ್ಕೆ ರೂ. 1.5 ಲಕ್ಷಗಳ ವರಿಗೆ ಖರ್ಚು ಮಾಡಿದ್ದಾರೆ.

ಕುಸಿದ ಮೆಣಸಿನಕಾಯಿ ಇಳುವರಿ
ಲಿಂಗಸೂಗೂರು ತಾಲೂಕು ವ್ಯಾಪ್ತಿಯಲ್ಲಿ 1,500 ಹೆಕ್ಟೇರ್ನಲ್ಲಿ ಮೆಣಸಿನಕಾಯಿ ನಾಟಿ ಮಾಡಿದ್ದಾರೆ. ಮೋಡ ಕವಿದ ವಾತಾವರಣದಿಂದ ಕೀಟಬಾಧೆ ಹೆಚ್ಚಾಯಿತು. ಇದು ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಎರಡು-ಮೂರು ವರ್ಷಗಳಿಂದ ಒಣ ಮೆಣಸಿನಕಾಯಿಗೆ ಉತ್ತಮ ಬೆಲೆ ಸಿಗುತ್ತಿದೆ. ಇದರಿಂದ ರೈತರು ಇದೇ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. ಬೆಳೆ ಬೆಳೆಯಲು ಬಹಳಷ್ಟು ಹಣ ಖರ್ಚು ಮಾಡಬೇಕಿದ್ದರೂ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ಮಾಡಿದ ವೆಚ್ಚ ಸರಿದೂಗಿ, ಲಾಭ ದೊರೆಯುತ್ತಿದೆ.

ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಂಕಷ್ಟ
ಈ ಪ್ರದೇಶದಲ್ಲಿ ಬ್ಯಾಡಗಿ ಕಡ್ಡಿ, ಬ್ಯಾಡಗಿ ಡಬ್ಬಿ, ಕೆಡಿಎಲ್, ದೇವನೂರ ಕಡ್ಡಿ, ದೇವನೂರ ಡಬ್ಬಿ, ಗುಂಟೂರ ಸೇರಿ ವಿವಿಧ ತಳಿಯ ಮೆಣಸಿನಕಾಯಿ ಬೆಳೆಯಲು ರೈತರು ಆದ್ಯತೆ ನೀಡುತ್ತಿದ್ದಾರೆ. ಬ್ಯಾಡಗಿ, ಹುಬ್ಬಳ್ಳಿ, ಗದಗ, ಬೆಂಗಳೂರು ಹೀಗೆ ಹಲವು ಮಾರುಕಟ್ಟೆಗಳಿಗೆ ಮೆಣಸಿನಕಾಯಿ ಬೇಡಿಕೆ ಇರುವ ಕಾರಣಕ್ಕೆ ಸದ್ಯಕ್ಕೆ ಪ್ರತಿ ಟನ್ ಮೆಣಸಿನಕಾಯಿಗೆ ರೂಪಾಯಿ 50 ಸಾವಿರ ಬೆಲೆ ಸಿಗುತ್ತಿದೆ. ಒಣ ಮೆಣಸಿನಕಾಯಿ ಬೆಳೆಗೆ ಹೆಚ್ಚು ಲಾಭ ಸಿಗುತ್ತದೆ ಎಂದು ಈ ಬೆಳೆ ಬೆಳೆಯುತ್ತಿದ್ದೇವೆ ಎಂದು ಹನಮನಗುಡ್ಡದ ರೈತ ಸಂಗನಗೌಡ ಹೇಳಿದರು.












Click it and Unblock the Notifications