ರಾಯಚೂರು; ಮೂಲ ಸೌಕರ್ಯದ ವಿಚಾರದಲ್ಲಿ ಶಾಸಕರ ಜಟಾಪಟಿ
ರಾಯಚೂರು, ಮೇ. 11: ರಾಯಚೂರಿನಲ್ಲಿ ಇಬ್ಬರು ಜನಪ್ರತಿನಿಧಿಗಳ ನಡುವಿನ ಜಟಾಪಟಿ ಜೋರಾಗಿದೆ. ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್ ವಿರುದ್ಧ ಶಾಸಕ ಎಸ್. ಆರ್. ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
"ನಾನು ಯಾವುದೇ ಪಕ್ಷದ ವಿರುದ್ಧವಾಗಲಿ, ಪರವಾಗಿ ಮಾತನಾಡಲು ಇಲ್ಲಿ ಬಂದಿಲ್ಲ. ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್ ಕುರಿತು ಮಾತನಾಡಲು ಬಂದಿದ್ದೇನೆ" ಎಂದು ಎಸ್. ಆರ್. ರೆಡ್ಡಿ ವಾಗ್ದಾಳಿ ಆರಂಭಿಸಿದರು.
"ಇತ್ತೀಚಿಗೆ ನಾರಾಯಣಪೇಟೆ ಕ್ಷೇತ್ರಕ್ಕೆ ಬಂದ ಶಾಸಕ ಡಾ. ಶಿವರಾಜ್ ಪಾಟೀಲ ರಾಯಚೂರು ಕ್ಷೇತ್ರದಲ್ಲಿ ವಿಮಾನನಿಲ್ದಾಣ ಮಾಡಿದ್ದೇವೆ, ಸಾವಿರ ಎಕರೆ ಸ್ಥಳದಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮಾಡಿದ್ದೇವೆ. ನಗರವಾಸಿಗಳಿಗೆ ಪ್ರತಿನಿತ್ಯ ಕುಡಿಯಲು ನೀರು ಕೊಡುತ್ತೇವೆ ಎಂದು ದೊಡ್ಡದಾಗಿ ಭಾಷಣದಲ್ಲಿ ಹೇಳಿದ್ದಾರೆ" ಎಂದರು.
"ಶಾಸಕರೇ ನಿಮ್ಮ ವಿಮಾನ ನಿಲ್ದಾಣ ಎಲ್ಲಿದೆ? ಎಂದು ತೋರಿಸಿ. ನಾನು ನಮ್ಮ ಕ್ಷೇತ್ರದ ಜನರಿಗೆ ಉತ್ತರಿಸಬೇಕು. ಯಾವಾಗ ಭೂಮಿ ಪೂಜೆ ಮಾಡಿದ್ದೀರಿ?. ಯಾವ ಗುತ್ತಿಗೆದಾರ ನಿರ್ಮಿಸಿದ್ದಾರೆ?. ಮೊದಲನೇ ವಿಮಾನ ಯಾವಾಗ ಬರಲಿದೆ?" ಎಂದು ಸವಾಲು ಎಸೆದರು.
"1000 ಎಕರೆ ಸ್ಥಳದಲ್ಲಿ ಟೆಕ್ಸ್ಟೈಲ್ ಪಾರ್ಕ್ ನಿರ್ಮಿಸಿಲಾಗಿದೆ ಎಂದು ಹೇಳಿದ್ದೀರಿ. ನನ್ನ ಕ್ಷೇತ್ರದ ಜನರು ಒಂದು ಕೆಲಸ ಕೊಡಿಸಿ ಎಂದು ಕೇಳುತ್ತಿದ್ದಾರೆ. ಒಮ್ಮೆ ತೋರಿಸಿ ಅದರ ಫೋಟೋಗಳನ್ನು, ನಮ್ಮ ಕ್ಷೇತ್ರದ ಜನರಿಗೆ ತೋರಿಸುತ್ತೇನೆ ಎಂದು ನಾನು ಮಾತುಕೊಟ್ಟಿದ್ದೇನೆ" ಎಂದರು.
"ರಾಯಚೂರು ನಗರದ ಸಾರ್ವಜನಿಕರಿಗೆ ಪ್ರತಿನಿತ್ಯ ಕುಡಿಯಲು ನೀರು ಕೊಡುತ್ತೇನೆ ಎಂದು ಹೇಳಿದ್ದೀರಿ. ಸ್ವತಃ ರಾಯಚೂರಿನಲ್ಲಿ ನನ್ನ ಮನೆಗೆ ಇದುವರೆಗೂ ಪೈಪ್ಲೈನ್ ಹಾಕಿಲ್ಲ. ಯಾವ ಮನೆಗೆ ನೀರು ಬರುತ್ತದೆ?" ಎಂದು ಸ್ಪಷ್ಟಪಡಿಸಿ ಎಂದು ಸವಾಲು ಎಸೆದರು.
Recommended Video
"ನಾರಾಯಣಪೇಟೆ ಕ್ಷೇತ್ರಕ್ಕೆ ಬಂದ ತಕ್ಷಣ ನೀವು ಬರೀ ಸುಳ್ಳು ಹೇಳಿದ್ದೀರಿ. ರಾಯಚೂರು ನೋಡಿದರೆ ಕಸದ ತೊಟ್ಟಿಯಂತಾಗಿದೆ. ಎಲ್ಲಾ ಮಾಧ್ಯಮದವರು ನನ್ನ ಕ್ಷೇತ್ರಕ್ಕೆ ಬನ್ನಿ ರಾಯಚೂರು ಕ್ಷೇತ್ರ ಮತ್ತು ನಾರಾಯಣಪೇಟ ಕ್ಷೇತ್ರದಲ್ಲಿ ಯಾವುದು ಅಭಿವೃದ್ಧಿಯಾಗಿದೆ? ಎಂದು ನೋಡಿ" ಎಂದು ಆಹ್ವಾನ ನೀಡಿದರು.