ಹುತಾತ್ಮ ಭಗತ್ ಸಿಂಗ್ ಜನ್ಮದಿನ; ನವ ಸಮಾಜ ನಿರ್ಮಾಣಕ್ಕೆ ಯುವಜನರ ಸಂಕಲ್ಪ
ಹುಬ್ಬಳ್ಳಿ/ರಾಯಚೂರು, ಸೆ. 28 : ಮಹಾನ್ ಕ್ರಾಂತಿಕಾರಿ ಹುತಾತ್ಮ ಭಗತ್ ಸಿಂಗ್ ರವರ 115ನೇ ಜನ್ಮ ದಿನಾಚರಣೆ ಹಿನ್ನೆಲೆ ರಾಜ್ಯದ ಹಲವೆಡೆ ಯುವಜನರು ಜನ್ಮ ದಿನವನ್ನು ಆಚರಿಸಿ, ಭಗತ್ ಸಿಂಗ್ ಅವರ ಕನಸಿನ ಸಮಾಜ ನಿರ್ಮಾಣ ಮಾಡಲು ಸಂಕಲ್ಪ ತೊಟ್ಟಿದ್ದಾರೆ.
ಹುಬ್ಬಳ್ಳಿ ಮತ್ತು ರಾಯಚೂರಿನಲ್ಲಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂಥ್ ಆರ್ಗನೈಜೇಷನ್ (ಎಐಡಿವೈಒ) ಸಂಘಟನೆಯ ಯುವಜನರು ಹುತಾತ್ಮ ಭಗತ್ ಸಿಂಗ್ ಅವರ 115ನೇ ಜನ್ಮದಿನಾಚರಣೆಯನ್ನು ಆಚರಿಸಿದ್ದಾರೆ. ಈ ವೇಳೆ ಬಡತನ ನಿರ್ಮೂಲನೆ ಗೊಳಿಸದ ಸ್ವಾತಂತ್ರ್ಯ ಕೇವಲ ಹೆಸರಿಗಷ್ಟೇ ಸ್ವಾತಂತ್ರ್ಯ ಎಂದು ಭಗತ್ ಸಿಂಗ್ ಅವರು ಸ್ವಾತಂತ್ರ್ಯಪೂರ್ವದಲ್ಲಿ ಹೇಳಿದ್ದರು. ಅದು ಇಂದಿಗೂ ಪ್ರಸ್ತುತವಾಗಿದೆ ಎಂದು ಬೊಟ್ಟು ಮಾಡಿದ್ದಾರೆ.
ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು; ಮೋದಿ ಘೋಷಣೆ
ರಾಯಚೂರು ನಗರದ ಭಗತ್ ಸಿಂಗ್ ಸರ್ಕಲ್ ನಲ್ಲಿ ಹುತಾತ್ಮ ಭಗತ್ ಸಿಂಗ್ ಅವರ 115ನೇ ಜನ್ಮದಿನಾಚರಣೆ ಆಚರಿಸಿದ ಯುವಜನರು, "ಇಂದು ಭಗತ್ ಸಿಂಗ್ ರ ಜನ್ಮದಿನ ಅವರ ಹೋರಾಟ ತ್ಯಾಗ-ಬಲಿದಾನ ಅವರ ವಿಚಾರಗಳು ಇಂದಿಗೂ ಯುವಜನರಿಗೆ ಆದರ್ಶಪ್ರಾಯ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಳುವ ಸರ್ಕಾರಗಳು ಬಂಡವಾಳಶಾಯಿಯ ಸೇವೆ ಮಾಡುತ್ತಿವೆ
"ಇಂದು ಭಗತ್ ಸಿಂಗ್ ಅವರ ಹೋರಾಟ ತ್ಯಾಗ-ಬಲಿದಾನ ಅವರ ವಿಚಾರಗಳು ಇಂದಿಗೂ ಯುವಜನರಿಗೆ ಆದರ್ಶಪ್ರಾಯ. ಇಂದು ದೇಶಾದ್ಯಂತ ನಿರುದ್ಯೋಗ, ಬೆಲೆ ಏರಿಕೆ, ಕಿತ್ತು ತಿನ್ನುವ ಬಡತನ ಜನರನ್ನು ಬೆಂಬಿಡದೆ ಕಾಡುತ್ತಿದೆ. ಬಡತನ ನಿರ್ಮೂಲನೆ ಗೊಳಿಸದ ಸ್ವಾತಂತ್ರ್ಯ ಕೇವಲ ಹೆಸರಿಗಷ್ಟೇ ಸ್ವಾತಂತ್ರ್ಯ" ಎಂದು ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಹೇಳಿದ್ದಾರೆ.
"ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಆಳ್ವಿಕರು ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಆದರೆ ಅಮೃತ ಯಾರಿಗೆ..? ವಿಷ ಯಾರಿಗೆ..?. ದೇಶದ 95 ರಷ್ಟು ಜನತೆಗೆ ವಿಷ ಸೇವಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. 75 ವರ್ಷಗಳಿಂದ ಆಳುತ್ತಿರುವ ಎಲ್ಲಾ ಪಕ್ಷಗಳು ಬಂಡವಾಳಶಾಯಿಗಳ ಸೇವೆಯನ್ನು ಮಾಡುತ್ತಿವೆ" ಎಂದು ಆರೋಪಿಸಿದ್ದಾರೆ.
ಶೋಷಕ ಬಂಡವಾಳಶಾಹಿ ವ್ಯವಸ್ಥೆ ಕಿತ್ತು ಹಾಕಬೇಕು
"ಇನ್ನೊಂದೆಡೆ ಶಿಕ್ಷಣದ ವ್ಯಾಪಾರಿಕರಣ, ನಿರುದ್ಯೋಗ, ಬೆಲೆ ಏರಿಕೆಯ ಸಮಸ್ಯೆಗಳನ್ನು ದೇಶದ ಸಾಮಾನ್ಯ ಜನರ ಮೇಲೆ ಹೊರಿಸುತ್ತಿದ್ದಾರೆ. ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಇದೇ ಆರ್ಥಿಕ ನೀತಿಗಳನ್ನು ಮುಂದುವರಿಸುತ್ತಿದ್ದಾರೆ. ಇವುಗಳನ್ನು ಹಿಮ್ಮೆಟ್ಟಿಸಲು ಯುವಜನರು ಮುಂದೆ ಬರಬೇಕಾಗಿದೆ" ಎಂದಿದ್ದಾರೆ.
"ಭಗತ್ ಸಿಂಗ್ ಅವರ ಹೋರಾಟ, ವಿಚಾರಗಳು ಯುವಜನರಿಗೆ ಆದರ್ಶವಾಗಿವೆ. ಆ ನಿಟ್ಟಿನಲ್ಲಿ ಯುವಜನರು ಶೋಷಕ ಬಂಡವಾಳಶಾಹಿ ವ್ಯವಸ್ಥೆ ಕಿತ್ತು ಹಾಕಿ, ಶೋಷಣೆ ರಹಿತ ಸಮಾಜವಾದಿ ಸಮಾಜ ಸ್ಥಾಪನೆ ಮಾಡುವ ಸಂಕಲ್ಪ ತೊಡಬೇಕು" ಎಂದು ಕರೆ ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟದ ದಿಕ್ಕನ್ನು ಬದಲಿಸಿದ ಹುತಾತ್ಮ ಭಗತ್ ಸಿಂಗ್
ಹುಬ್ಬಳ್ಳಿಯ ಛಡ್ಡಾ ಐಟಿಐ ಕಾಲೇಜಿನಲ್ಲಿ ಎಐಡಿವೈಒ ಯುವಜನ ಸಂಘಟನೆಯಿಂದ ಭಗತ್ ಸಿಂಗ್ ಜನ್ಮದಿನ ಹಮ್ಮಿಕೊಳ್ಳಲಾಗಿತ್ತು.
"ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೇವಲ 23 ವಯಸ್ಸಿನಲ್ಲಿ ನಗುನಗುತ್ತಾ ಗಲ್ಲುಗಂಬವನ್ನು ಏರಿದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ ವಿಚಾರಗಳು, ಸಂಘರ್ಷಮಯ ಬದುಕು ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅತ್ಯಂತ ಪ್ರಸ್ತುತವಾಗಿವೆ. ಕೇವಲ ತನಗಾಗಿ ಬದುಕದೆ ಇಡೀ ಜೀವನವನ್ನೇ ದೇಶದ ವಿಮೋಚನೆಗೋಸ್ಕರ ಮೀಸಲಿಟ್ಟ ಭಗತ್ ಸಿಂಗ್ ಇಂದು ನಮಗೆ ಆದರ್ಶವಾಗಬೇಕಾಗಿದೆ" ಎಂದು ಎಐಡಿವೈಒ ಹುಬ್ಬಳ್ಳಿ ಜಿಲ್ಲಾಧ್ಯಕ್ಷರಾದ ಭವಾನಿ ಶಂಕರ್ ಹೇಳಿದ್ದಾರೆ.
"ಪ್ರಪಂಚದ ಇತಿಹಾಸದ, ವಿವಿಧ ದೇಶಗಳ ಸ್ವತಂತ್ರ ಸಂಗ್ರಾಮಗಳ ಸಮಗ್ರ ಅಧ್ಯಯನ ನಡೆಸಿದ್ದ ಭಗತ್ ಸಿಂಗ್ ಭಾರತ ಸ್ವಾತಂತ್ರ್ಯ ಸಂಗ್ರಾಮದ, ಸ್ವಾತಂತ್ರೋತ್ತರ ಭಾರತದ ಬಗ್ಗೆ ಸ್ಪಷ್ಟ ಪರಿಕಲ್ಪನೆಯನ್ನು ಹೊಂದಿದ್ದರು. ಕೇವಲ ಬ್ರಿಟಿಷರನ್ನು ಭಾರತದಿಂದ ಓಡಿಸುವುದಷ್ಟೇ ಅಲ್ಲದೆ ಮಾನವನಿಂದ ಮಾನವನ ಶೋಷಣೆಯನ್ನು ಕೊನೆಗಾಣಿಸುವ, ಅಸಮಾನತೆಯನ್ನು ತೊಡೆದು ಹಾಕುವ ಸಮಾಜವಾದಿ ಭಾರತ ನಿರ್ಮಾಣ ಭಗತ್ ಸಿಂಗ್ ಕನಸಾಗಿತ್ತು. ರಷ್ಯಾದ ಸಮಾಜವಾದಿ ಕ್ರಾಂತಿಯಿಂದ ಸ್ಪೂರ್ತಿಗೊಂಡಿದ್ದ ಭಗತ್ ಸಿಂಗ್ ಅವರು ಸ್ವತಂತ್ರ ಹೋರಾಟದ ದಿಕ್ಕನ್ನು ಬದಲಿಸಿ ಸಮರಶೀಲಗೊಳಿಸಿದರಷ್ಟೇ ಅಲ್ಲದೇ ದೇಶದ ಜನಸಾಮಾನ್ಯರು, ಕಾರ್ಮಿಕರು, ರೈತರು, ವಿದ್ಯಾರ್ಥಿ, ಯುವಜನರು ಸ್ವತಂತ್ರ ಹೋರಾಟದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಧುಮುಕುವಂತೆ ಪ್ರೇರೇಪಿಸಿದರು" ಎಂದು ತಿಳಿಸಿದ್ದಾರೆ.
ರೈತರು, ದುಡಿಯುವ ವರ್ಗದ ಮೇಲೆ ತೀವ್ರ ಶೋಷಣೆ
"ಇಂದು ಭಗತ್ ಸಿಂಗ್ ಅವರ ಆಶಯ ನುಚ್ಚುನೂರಾಗಿದೆ. ದೇಶದ ಬಂಡವಾಳಶಾಹಿಗಳು ದುಡಿಯುವ ಜನರನ್ನು, ರೈತರನ್ನು ತೀವ್ರವಾಗಿ ಶೋಷಿಸುತ್ತಿದ್ದಾರೆ. ಕಿತ್ತು ತಿನ್ನುವ ಬಡತನ, ನಿರುದ್ಯೋಗ, ಬೆಲೆ ಏರಿಕೆ, ಶಿಕ್ಷಣ-ಆರೋಗ್ಯ ಕ್ಷೇತ್ರಗಳ ಖಾಸಗಿಕರಣ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಮುಂತಾದ ಮೂಲಭೂತ ಸಮಸ್ಯೆಗಳು ದೇಶದ ಜನರನ್ನು ಭಾದಿಸುತ್ತಿವೆ. ಜನರನ್ನು ನೈಜ ಸಮಸ್ಯೆಗಳಿಂದ ವಿಮುಖರನ್ನಾಗಿಸಲು ಜಾತಿ, ಧರ್ಮ, ಭಾಷೆ, ಗಡಿ ಮುಂತಾದ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.
"ಯುವಜನರ
ನೈತಿಕತೆಯನ್ನು
ನಾಶ
ಮಾಡಲು
ಅಶ್ಲೀಲ
ಸಿನಿಮಾ,
ಸಾಹಿತ್ಯ,
ಮಾದಕ
ದ್ರವ್ಯ,
ಮದ್ಯಪಾನ,
ಜೂಜು
ಮುಂತಾದವುಗಳನ್ನು
ವ್ಯಾಪಾಕವಾಗಿ
ಹರಿಬಿಡಲಾಗುತ್ತಿದೆ.
ಇಂತಹ
ಸಂಕಷ್ಟಮಯ
ಪರಿಸ್ಥಿತಿಯಲ್ಲಿ
ಭಗತ್
ಸಿಂಗ್
ಅವರ
ವಿಚಾರಗಳು
ನಮಗೆ
ದಾರಿ
ದೀಪವಾಗಿವೆ.
ಅವರ
ವಿಚಾರಗಳನ್ನು
ಇನ್ನಷ್ಟು
ಮನನ
ಮಾಡಿಕೊಳ್ಳುತ್ತಾ
ಇಂದಿನ
ಸಮಸ್ಯೆಗಳ
ವಿರುದ್ಧ
ವೈಚಾರಿಕತೆಯೊಂದಿಗೆ,
ನೈತಿಕತೆಯೊಂದಿಗೆ
ಸಂಘಟಿತರಾಗಿ
ಧ್ವನಿ
ಎತ್ತಲು
ಸಂಕಲ್ಪ
ತೊಡೋಣ"
ಎಂದು
ಯುವನತೆಗೆ
ಕರೆ
ಭವಾನಿ
ಶಂಕರ್
ನೀಡಿದ್ದಾರೆ.