ಉತ್ತಮ ಮಾವು ಫಸಲು ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ: ಹತೋಟಿಗೆ ಬಾರದ ರೋಗಬಾಧೆ
ರಾಯಚೂರು, ಮಾರ್ಚ್ 2: ರಾಯಚೂರು ತಾಲೂಕಿನಲ್ಲಿ ಬೆಳೆದ ಮಾವಿನ ಗಿಡಕ್ಕೆ ಇತ್ತೀಚೆಗೆ ಬೂದು, ಜಿಗಿ ರೋಗ ಬಾಧೆ ಕಂಡು ಬಂದಿದೆ. ಇದರಿಂದ ಮಾವು ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ರೋಗಬಾಧೆ ಹತೋಟಿಗೆ ಬಾರದ ಕಾರಣ ಹಣ್ಣುಗಳ ರಾಜ ಮಾವಿನ ಇಳುವರಿ ಕುಂಠಿತಗೊಳ್ಳುವ ಲಕ್ಷಣ ಗೋಚರಿಸುತ್ತಿವೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಸುಮಾರು 1,402ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಕಳೆದ ವರ್ಷದ ಡಿಸೆಂಬರ್ ಕೊನೆಯ ವಾರದಲ್ಲಿ ಹೂ ಬಿಡುವ ಸಮಯವಾಗಿತ್ತು. ಈಗ ಕೀಟಬಾಧೆ , ಬೂದು , ಜಿಗಿ ರೋಗದಿಂದ ಈ ವರ್ಷ ಸರಿಯಾಗಿ ಹೂ ಮತ್ತು ಕಾಯಿ ಬಿಡದಿರುವುದು ರೈತರ ಅನುಮಾನಕ್ಕೆ ಕಾರಣವಾಗಿದೆ. ಇದರಿಂದ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ ರೈತರ ಗೋಳು ಹೇಳ ತೀರದಾಗಿದೆ.

ಜಿಲ್ಲೆಯ ರೈತರು ತೋಟಗಾರಿಕೆ ಬೆಳೆಗಳ ಮೇಲೆ ಅವಲಂಬಿತರಾಗಿದ್ದು ಇತ್ತೀಚಿನ ದಿನಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಫಲವತ್ತಾದ ಭೂಮಿ ಭೂಸ್ವಾಧೀನಕ್ಕೆ ಒಳಪಡುತ್ತಿದೆ. ಹೂವಿನ ಜೊತೆ ಚಿಗುರು ಬಂದಿರುವುದರಿಂದ ಮರದ ಸಾರವನ್ನು ಚಿಗುರೇ ಹೆಚ್ಚಾಗಿ ಬಳಸಿಕೊಳ್ಳುವುದರಿಂದ ಹೂವಿಗೆ ಕಾಯಿ ಹಿಡಿಯುವಷ್ಟು ಶಕ್ತಿ ಕಡಿಮೆಯಾಗಿ ಹೂ ಉದುರುತ್ತಿದೆ. ಜೊತೆಗೆ ಚಿಗುರಿನಲ್ಲಿ ಜಿಗಿ ಹುಳ ಕಾಟವು ಹೆಚ್ಚಾಗಿ ಫಸಲು ಕಡಿಮೆಯಾಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷ ಮಾವಿನ ಫಸಲು ಇಲ್ಲದೆ ನಷ್ಟ ಅನುಭವಿಸಿದ್ದ ರೈತರು ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಆರಂಭದಲ್ಲಿ ಎಲ್ಲ ಮರಗಳಲ್ಲಿ ಹೂ ಬಿಡಲು ಆರಂಭಗೊಂಡಾಗ ಉತ್ತಮ ಫಸಲು ಬರುತ್ತದೆ ಎಂದು ರೈತರು ನಿರೀಕ್ಷಿಸಿದ್ದರು. ಆದರೆ ಹೂವಿನ ಜೊತೆಗೆ ಚಿಗುರು ಬರುತ್ತಿರುವುದರಿಂದ ಫಸಲು ನಷ್ಟ ಆತಂಕ ರೈತರನ್ನು ಕಾಡುತ್ತಿದೆ.
ರಾಯಚೂರು ತಾಲೂಕಿನ ಚಂದ್ರಬಡಾ ಹೋಬಳಿ ಮತ್ತು ಗಿಲ್ಲೇಸೂಗೂರು ಹೋಬಳಿ ಸೇರಿ ತುಂಗೆ ದಂಡೆಯ ಗ್ರಾಮಗಳಲ್ಲಿ ಮಾವಿನ ತಳಿಗಳಾದ ಬಾದಾಮಿ ಮತ್ತು ಬೆನೀಷಾ ಮರಗಳಲ್ಲಿ ಹೆಚ್ಚಾಗಿ ಹೂವಿನ ಜೊತೆ ಚಿಗುರು ಕಾಣಿಸಿಕೊಳ್ಳುತ್ತದೆ. ಮಾವಿನ ಚಿಗುರು ಒಡೆಯುತ್ತಿರುವುದರಿಂದ ಜಿಗಿಹುಳು ಸೇರಿ ನಾನಾ ಜಾತಿಯ ಕೀಟಗಳು ಮರಗಳಲ್ಲಿ ಸೇರಿಕೊಂಡು ಚಿಗುರು ತಿನ್ನಲು ಆರಂಭಿಸುತ್ತಿವೆ. ಇದು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂಟು ರೋಗವು ಸಹ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಶೇಕಡಾ 50 ರಷ್ಟು ಹೂವು ಕಾಣಿಸಿಕೊಂಡಿದ್ದು ಹಂತ ಹಂತವಾಗಿ ಮರಗಳಲ್ಲಿ ಹೂವು ಬಿಡುತ್ತಿದೆ ಎಂದು ರೈತರು ಹೇಳಿದ್ದಾರೆ.

ಕಳೆದ ವರ್ಷ ನಮಗೆ ಮಾವಿನ ಬೆಳೆಯ ಇಳುವರಿ ಇಲ್ಲದೆ ನಷ್ಟ ಉಂಟಾಗಿತ್ತು. ಈ ವರ್ಷ ಜಿಗಿ ಹುಳು ಹಾಗೂ ಬೂದು ರೋಗದಿಂದ ಮತ್ತೆ ನಷ್ಟ ಅನುಭವಿಸಬೇಕಾಗಿದೆ. ಆದ್ದರಿಂದ ಸರಕಾರ ನಮಗೆ ಪರಿಹಾರ ನೀಡಬೇಕು ಎಂದು ಅಪ್ಪನದೊಡ್ಡಿ ಗ್ರಾಮದ ರೈತ ಮಹೇಶ್ ಕುಮಾರ್ ಮನವಿ ಮಾಡಿದ್ದಾರೆ.
ಕಳೆದ ವರ್ಷಕ್ಕಿಂತ ಈ ವರ್ಷ ಮಾವಿನ ಬೆಳೆಯ ಇಳುವರಿ ಕಡಿಮೆ ಆಗಿದೆ. ಮಾವಿನ ಬೆಳೆಗೆ ಇತ್ತೀಚೆಗೆ ರಸ ಹೀರುವ ಜಿಗಿ ಹುಳು ಕಾಟ ಹೆಚ್ಚಾಗಿದ್ದರಿಂದ ರೈತರಿಗೆ ನಷ್ಟ ಎದುರಾಗಿದೆ. ಜಿಗಿ ಹುಳು ತಡೆಯಲು ಸೆಲೋಟ್ರಿನ್ ಔಷಧಿ ಸಿಂಪಡಣೆ ಮಾಡಬೇಕು ಎಂದು ಕೃಷಿ ವಿಶ್ವ ವಿದ್ಯಾಲಯದ ಕೀಟನಾಶಕ ವಿಭಾಗದ ಪ್ರಾಧ್ಯಪಕರು ಡಾ.ಎ.ಜಿ.ಶ್ರೀನಿವಾಸ್ ರೈತರಿಗೆ ತಿಳಿಸಿದ್ದಾರೆ.












Click it and Unblock the Notifications