ಕಣ್ಮನ ಸೆಳೆಯುತ್ತಿರುವ ಐತಿಹಾಸಿಕ ಕರಡಕಲ್ಲ ಕೆರೆ: ಫೆ.6ರಂದು ಲೋಕಾರ್ಪಣೆ
ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಐತಿಹಾಸಿಕ ಕರಡಕಲ್ಲ ಕೆರೆ ಅಭಿವೃದ್ಧಿ ಮತ್ತು ಸಾರ್ವಜನಿಕ ಉದ್ಯಾನ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಫೆಬ್ರುವರಿ 6ರಂದು ಲೋಕಾರ್ಪಣೆಗೊಳ್ಳಲಿದೆ.
ರಾಯಚೂರು ಫೆಬ್ರವರಿ 4: ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಐತಿಹಾಸಿಕ ಕರಡಕಲ್ಲ ಕೆರೆ ಅಭಿವೃದ್ಧಿ ಮತ್ತು ಸಾರ್ವಜನಿಕ ಉದ್ಯಾನ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಫೆಬ್ರುವರಿ 6ರಂದು ಲೋಕಾರ್ಪಣೆಗೊಳ್ಳಲಿದೆ. ಈ ಕೆರೆ ಕರಡಕಲ್ಲ, ಲಿಂಗಸುಗೂರು ಹಾಗೂ ಹುಲಿಗುಡ್ಡ ವಾರ್ಡ್ಗಳಿಗೆ ಹೊಂದಿಕೊಂಡಿದೆ.
ಕರಡಿಕಲ್ 800 ಸಂಸ್ಥಾನದ ಮೂರನೇ ಬಿಲ್ಲಮ ಮಹಾರಾಜ ಈ ಕೆರೆ ನಿರ್ಮಿಸಿದ್ದಾರೆ ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಬ್ರಿಟಿಷರ ಆಳ್ವಿಕೆ ಯಲ್ಲಿ ಇದು ದಂಡು ಪ್ರದೇಶವಾಗಿತ್ತು. ಆ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿಗಳು ಕೆರೆ ದಡದಲ್ಲಿಯೇ ವಸತಿ ಗೃಹ, ಕ್ಲಬ್ ಸೇರಿ ಆಡಳಿತಾತ್ಮಕ ಕಚೇರಿ ನಿರ್ಮಿಸಿಕೊಂಡಿದ್ದರು. ಇದು ಕೆರೆಯ ಐತಿಹ್ಯಕ್ಕೆ ಮೈಲುಗಲ್ಲಾಗಿದೆ.
ಕೆರೆಗೆ ಕಲುಷಿತ ನೀರು ಸೇರುವುದನ್ನು ತಡೆದು ಅಭಿವೃದ್ಧಿಗೊಳಿಸುವಂತೆ ಸಂಘಟನೆಗಳು ಹೋರಾಟ ನಡೆಸುತ್ತ ಬಂದಿದ್ದವು. ಬಳಿಕ ಕಲುಷಿತ ನೀರು ಹರಿಯಲು ಪ್ರತ್ಯೇಕ ಚರಂಡಿ ನಿರ್ಮಾಣ ಮಾಡಲಾಯಿತು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹6.43 ಕೋಟಿ ಅನುದಾನದಲ್ಲಿ ಕೆರೆಗೆ ಹೈಟೆಕ್ ಸ್ಪರ್ಶ ನೀಡಲಾಯಿತು. ಈಗ ಕೆರೆ ನಾಗರಿಕರ ಗಮನಸೆಳೆಯುತ್ತಿದೆ.

ಕೆರೆಯ ಪೂರ್ವ ಭಾಗದ ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಉದ್ಯಾನ ನಿರ್ಮಾಣ ಮಾಡಲಾಗಿದೆ. ಮ್ಯಾಕ್ಸಿಕ್ಯಾನ್ ಲಾನ್ ಅಳವಡಿಸಿ ಹಸಿರುಮಯಗೊಳಿಸಲಾಗಿದೆ. ಕೆರೆ ದಡದಗುಂಟ ತಡೆಗೋಡೆ ನಿರ್ಮಿಸಲಾಗಿದೆ. ಚೈನ್ಲಿಂಕಕ್ ಫೆನ್ಸಿಂಗ್ ಅಳವಡಿಕೆ ಮಾಡಲಾಗಿದೆ. 1.2 ಕಿ.ಮೀ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗಿದೆ. 50 ಸೋಲಾರ್ ದೀಪಗಳು ಹಾಗೂ ನಾಲ್ಕು ಕಡೆ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ.
ಉದ್ಯಾನದಲ್ಲಿ ಬಯಲು ರಂಗಮಂದಿರ, ಐದು ವಿಶ್ರಾಂತಿ ಶೆಡ್, 50 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಲತಾಗೃಹ, ಬೋಟಿಂಗ್ ಪ್ಲಾಟ್ಫಾ,ರಂ ನಿರ್ಮಾಣದ ಜೊತೆಗೆ ಉದ್ಯಾನದ ಸೌಂದರ್ಯ ಹೆಚ್ಚಿಸಲು 1150ಕ್ಕೂ ಹೆಚ್ಚು ವೈವಿಧ್ಯಮಯ ಸಸಿಗಳನ್ನು ನಾಟಿ ಮಾಡಲಾಗಿದೆ. ಉದ್ಯಾನದ ಮುಖ್ಯದ್ವಾರಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ.
ಉದ್ಯಾನದಲ್ಲಿನ ಆಸನಗಳು ಮತ್ತು ಕೆಲವೆಡೆ ಗೋಡೆಗಳ ಮೇಲೆ ಸೌಹಾರ್ದ, ಭಾತೃತ್ವ, ಮಾನವೀಯ ಮೌಲ್ಯ ಹೆಚ್ಚಿಸುವ ಬರಹಗಳನ್ನು ಬರೆಯಲಾಗಿದೆ.

'ಹೈಟೆಕ್ ಮಾದರಿಯಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿರುವ ಸಾರ್ವಜನಿಕ ಉದ್ಯಾನಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಪರಿಸರ ಪ್ರೇಮಿಗಳು ಮನಸೋತು ಹೋಗಿದ್ದೇವೆ. ವೀಕ್ಷಣೆಗೆ ತೆರಳಿದಾಗ ಮಲೆನಾಡ ಸೌಂದರ್ಯ ಕಣ್ತುಂಬಿಕೊಂಡ ಖುಷಿ ತಂದುಕೊಡುತ್ತದೆ' ಎಂದು ಸ್ಥಳೀಯ ನಾಗರಿಕರು ಖುಷಿ ಹಂಚಿಕೊಂಡಿದ್ದಾರೆ.
ಜನರ ಆಶೀರ್ವಾದಿಂದ ಆಯ್ಕೆಗೊಂಡ ದಿನದಿಂದ ಕ್ಷೇತ್ರದಲ್ಲಿ ಮಾಡಿರುವ ಹಲವು ಅಭಿವೃದ್ಧಿ ಕೆಲಸಗಳಲ್ಲಿ ಸಾರ್ವಜನಿಕ ಉದ್ಯಾನ ನಿರ್ಮಾಣ ಹೆಚ್ಚು ತೃಪ್ತಿ ತಂದಿದೆ ಎಂದು ಶಾಸಕ ಡಿ.ಎಸ್ ಹೂಲಗೇರಿ ಸಂತಸ ಹಂಚಿಕೊಂಡಿದ್ದಾರೆ.











Click it and Unblock the Notifications