ರಾಯಚೂರು: ಮಳೆಗಾಲದಲ್ಲಿ ಜಾನುವಾರುಗಳನ್ನು ಕಾಡುವ ಕಾಲುಬಾಯಿ ರೋಗ
ರಾಯಚೂರು ಜು.12: ನೀಲಿ ರೋಗವೆಂದೇ ಕರೆಯುವ ಕಾಲುಬಾಯಿ ರೋಗಕ್ಕೆ ಮದ್ದು ನೀಡುವುದಕ್ಕೆ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಸಿದ್ಧತೆ ಮಾಡಿಕೊಂಡಿದೆ.
ಗೊರಸು ಹೊಂದಿದ ಕಾಲುಗಳಿರುವ ದನಕರುಗಳು, ಆಡು, ಕುರಿ, ಹಂದಿಗಳಲ್ಲಿ ಕಾಲುಬಾಯಿ ರೋಗ ಮಳೆಗಾಲದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ತೇವಾಂಶ ಇರುವ ಜಾಗಗಳಲ್ಲಿ ನಿರಂತರವಾಗಿ ಜಾನುವಾರುಗಳು ನಿಂತುಕೊಳ್ಳುವುದರಿಂದ ಸಾಮಾನ್ಯವಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ಕಾಲಿನ ಗೊರಸುಗಳಲ್ಲಿ ಕೆಸರು ಮೆತ್ತಿಕೊಳ್ಳುವುದರಿಂದ ಅದು ರೋಗಕ್ಕೆ ಕಾರಣವಾಗುತ್ತದೆ.
ಮುಂಗಾರು ಮಳೆ; ಕಾಫಿ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು
ಕಾಲುಬಾಯಿ ರೋಗದಿಂದ ಜಾನುವಾರುಗಳ ಕೆಚ್ಚಲಿನಲ್ಲಿ ಮತ್ತು ನಾಲಿಗೆ ಮೇಲೆ ಬೊಬ್ಬೆಗಳು ಕಾಣಿಸಿಕೊಳ್ಳುತ್ತವೆ. ಹಾಲು ಕೊಡುವ ಪ್ರಮಾಣವು ಕಡಿಮೆಯಾಗುತ್ತದೆ. ಬಾಯಿಂದ ಜೊಲ್ಲು ಸೋರುವುದು ಮತ್ತು ಕುಂಟುತ್ತವೆ ಎನ್ನುವುದು ಪಶುವೈದ್ಯರ ವಿವರಣೆ. ಈ ರೋಗವು ಒಂದು ಪ್ರಾಣಿದಿಂದ ಇನ್ನೊಂದು ಪ್ರಾಣಿಗೂ ಹರಡಿಕೊಳ್ಳುತ್ತದೆ. ಮಿಶ್ರತಳಿಗಳನ್ನು ಒಂದೇ ಕಡೆಗಳಲ್ಲಿ ಹಾಕುವುದರಿಂದ ರೋಗವು ಬೇಗನೆ ಪಸರಿಸಿಕೊಳ್ಳುತ್ತದೆ.
ರೋಗಗಳು ಕಂಡು ಬರುವ ಜಾನುವಾರುಗಳನ್ನು ಆದಷ್ಟು ಬೇಗನೆ ಪ್ರತ್ಯೇಕಿಸಬೇಕು. ಕೊಟ್ಟಿಗೆಯನ್ನು ಶುಚಿತ್ವಗೊಳಿಸಬೇಕು. ಕನಿಷ್ಠ 21 ದಿನಗಳವರೆಗೂ ರೋಗಪೀಡಿತ ಜಾನುವಾರು, ಇತರೆ ಜಾನುವಾರುಗಳಿಂದ ದೂರ ಇಡಬೇಕು. ಪಶುವೈದ್ಯರ ಸಲಹೆಯಂತೆ ಔಷಧಿಗಳನ್ನು ನೀಡಬೇಕಾಗುತ್ತದೆ. ಕಾಲುಬಾಯಿ ರೋಗದಿಂದ ಜಾನುವಾರುಗಳನ್ನು ಪಾರು ಮಾಡುವುದಕ್ಕೆ ಪ್ರತಿವರ್ಷ ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಎರಡು ಬಾರಿ ಲಸಿಕೆಗಳನ್ನು ನೀಡುತ್ತಾ ಬರುತ್ತಿದೆ. ಈ ವರ್ಷವೂ ಮಳೆಗಾಲ ಆರಂಭ ಪೂರ್ವದಲ್ಲೇ ಲಸಿಕೆ ನೀಡುವ ಕಾರ್ಯರಂಭ ಮಾಡಿದೆ.
ಸೆಲ್ಫಿ ವಿತ್ ಸನ್ ಫ್ಲವರ್': ಗುಂಡ್ಲುಪೇಟೆಯಲ್ಲಿ ಸೂರ್ಯಕಾಂತಿ ಜಮೀನಿಗೆ ಪ್ರವಾಸಿಗರ ಲಗ್ಗೆ
ಮುಂಜಾಗ್ರತಾ ಕ್ರಮವಾಗಿ ಒಂದು ಲಕ್ಷ ಲಸಿಕೆ
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಗಂಟಲು ಬೇನೆ ಬಾರದಿರಲಿ ಎಂದು ಮುಂಜಾಗ್ರತ ಕ್ರಮವಾಗಿ 40 ಸಾವಿರ ಡೋಸ್ ಲಸಿಕೆ ಹಾಕಲಾಗಿದೆ. ಕುರಿಗಳಿಗೆ ಕರುಳು ಬೇನೆ, ಜಂತು ಬರ ಬಾರದೆನ್ನುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಒಂದು ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. ಇನ್ನು ಹತ್ತು ಸಾವಿರ ಡೋಸ್ ಕುರಿಗಳ ಲಸಿಕೆ ಮತ್ತು 10 ಸಾವಿರ ಡೋಸ್ ಜಾನುವಾರುಗಳ ಲಸಿಕೆ ಸಂಗ್ರಹ ಇರುವುದಾಗಿ ತಾಲ್ಲೂಕು ಪಶು ಆಸ್ಪತ್ರೆಯ ಸಹಾಯಕ ನಿರ್ದೆಶಕ ಶರಣೇಗೌಡ ತಿಳಿಸಿದರು.
ಜಾನುವಾರುಗಳಿಗೆ ವಿಮಾ ಸೌಲಭ್ಯ ಯೋಜನೆ ಲಭ್ಯವಿದೆ. ಅತಿ ಹೆಚ್ಚು ಮಳೆಯಾದ ಸಮಯದಲ್ಲಿ ನೀಲಿ ರೋಗ ಬರುವ ಸಾಧ್ಯತೆ ಇರುತ್ತದೆ. ಅಂತಹ ಸಮಯದಲ್ಲಿ ಅಗತ್ಯಗನುಗುಣವಾಗಿ ಔಷಧಿ ವಿತರಿಸಲಾಗುವುದು ಎಂದರು.
ಪಶು ಇಲಾಖೆಯಿಂದ ಅಗತ್ಯ ಲಸಿಕಾ ಕ್ರಮ
ಸಿರವಾರ ತಾಲ್ಲೂಕಿನಲ್ಲಿ ಮಳೆಗಾಲ ಬಂತೆಂದರೆ ಪಶು, ಕುರಿ, ಮೇಕೆಗಳಿಗೆ ವಿವಿಧ ರೋಗಗಳು ಆವರಿಸಿಬಿಡುತ್ತವೆ. ಅದಕ್ಕೆ ತಕ್ಕಂತೆ ಪಶು ಇಲಾಖೆಯಿಂದ ಅಗತ್ಯ ಲಸಿಕಾ ಕ್ರಮ ಕೈಗೊಂಡಿದ್ದು, ತಾಲ್ಲೂಕಿನ ಬರುವ ಪ್ರತಿ ಗ್ರಾಮದ ದನಕರುಗಳಿಗೆ ಬರುವ ಗಂಟಲು ಬೇನೆ, ಕುರಿ ಮೇಕೆಗಳಿಗೆ ಬರುವ ಕರಳು ಬೇನೆಗಳನ್ನು ನಿಯಂತ್ರಿಸಲು ಹಲವು ಲಸಿಕೆಗಳನ್ನು ಮನೆ ಮನೆಗೆ ತೆರಳಿ ಹಾಕಲಾಗಿದೆ. ಇನ್ನು ಹೆಚ್ಚಿನ ಲಸಿಕಾ ದಾಸ್ತಾನು ಪಶು ಇಲಾಖೆ ಮಾಡಿಕೊಳ್ಳಲಾಗಿದ್ದು ಮುಂದೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುರಿಗಳಲ್ಲಿ ಕಾಲು ನೋವು ಸೋಂಕು
ದೇವದುರ್ಗ ತಾಲ್ಲೂಕಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಜಾನುವಾರುಗಳಿಗೆ ಮಳೆಯಿಂದಾಗಿ ಕಾಲು ಮತ್ತು ಬಾಯಿ ನೋವಿನ ರೋಗಗಳು ಹೆಚ್ಚಾಗಿ ಕಂಡು ಬರುತ್ತವೆ. ಆಡು ಮತ್ತು ಕುರಿಗಳಲ್ಲಿ ಕಾಲು ನೋವು ಸೋಂಕು ತೀವ್ರವಾಗಿ ಕಂಡು ಬರುತ್ತದೆ. ಜಾನುವಾರುಗಳಿಗೆ ಲಸಿಕೆಯ ಅಗತ್ಯವಿದೆ. ವಿತರಣೆ ಮಾಡಲು ಸಿಬ್ಬಂದಿ ಕೊರತೆ ಇದೆ. ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಇದೆ. ಜತೆಗೆ ಸರ್ಕಾರದಿಂದ ಉಚಿತ ಲಸಿಕೆ ವಿತರಣೆಯಾಗದಿದ್ದು ಆದಷ್ಟು ಶೀಘ್ರ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿ ಮುಂಜಾಗ್ರತೆ ಕ್ರಮವಾಗಿ ಪಂಚಾಯಿತಿಗಳಲ್ಲಿ ಡಂಗುರುಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಉಚಿತ ಲಸಿಕೆ ವಿತರಣೆ
ಜಾನುವಾರುಗಳ ರಕ್ಷಣೆ ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಗಮನಹರಿಸಲು ಮುಂದಾಗಬೇಕು ಎಂಬುದು ಗ್ರಾಮಸ್ಥರಾದ ಯೋಗೀಶ್ ಮತ್ತು ಪ್ರವೀಣ್ ಅವರ ಮನವಿ ಮಾಡಿದ್ದಾರೆ. ಸರ್ಕಾರದಿಂದ ಕಾಲುಬಾಯಿ ರೋಗದ ಉಚಿತ ಲಸಿಕೆ ವಿತರಣೆ ಬಗ್ಗೆ ಮಾರ್ಗಸೂಚಿ ಬಂದಿಲ್ಲ. ಲಸಿಕೆಯೂ ಪೂರೈಕೆಯಾಗಿಲ್ಲ. ಆದರೂ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಪರ್ಯಾಯ ಲಸಿಕೆ ನೀಡಲು ವೈದ್ಯರಿಗೆ ಸೂಚನೆ ನೀಡಲಾಗಿದೆ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.