ರಾಯಚೂರು: ಅಜ್ಜಿಯ 100ನೇ ಹುಟ್ಟುಹಬ್ಬ ಆಚರಿಸಿದ ಕುಟುಂಬ ಸದಸ್ಯರು
ರಾಯಚೂರು, ಡಿಸೆಂಬರ್ 26: ಈ ಹಿರಿಯ ಜೀವಕ್ಕೆ ನೂರರ ಹರೆಯ. ಅಜ್ಜಿಯ ಜನ್ಮ ದಿನದ ನೆಪದಲ್ಲಿ ಅಲ್ಲಿ ಸಂಭ್ರಮವೇ ಮನೆ ಮಾಡಿತ್ತು. ಅಲ್ಲಿ ಸೇರಿದ್ದ ಕುಟುಂಬ ಸದಸ್ಯರೆಲ್ಲರೂ ಅಜ್ಜಿಯ ಹುಟ್ಟುಹಬ್ಬವನ್ನು ಮನೆ ಹಬ್ಬದಂತೆ ಆಚರಿಸಿ ಸಂಭ್ರಮಿಸಿದರು.
ಇತ್ತಿಚೇಗೆ ವೃದ್ಧ ತಂದೆ-ತಾಯಿಗಳನ್ನು ಆಶ್ರಮಗಳಿಗೆ ಸೇರಿಸುವ ಸಂಪ್ರದಾಯ ಹೆಚ್ಚಾಗುತ್ತಿದೆ. ಆದರೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಗ್ರಾಮದ ಶತಾಯುಷಿ ಶಾಂತಮ್ಮ ಹಿರೇಮಠ್ ಅವರೆಂದರೆ ಅವರ ಕುಟುಂಬಕ್ಕೆ ಎಲ್ಲಿಲ್ಲದ ಅಕ್ಕರೆ ಹಾಗಾಗಿಯೇ ಅವರ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರೆಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸಿದರು.
ಅಜ್ಜಿಯ ಹುಟ್ಟು ಹಬ್ಬಕ್ಕಾಗಿ ಬಂಧು-ಬಳಗ, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಗಿರಿ ಮೊಮ್ಮಕ್ಕಳು ಕೂಡ ಯರಡೋಣಿಯಲ್ಲಿ ಸೇರಿದ್ದರು. 100ರ ಹರೆಯದ ಶಾಂತಮ್ಮ ಹಿರೇಮಠ್, ಸಸಿಗೆ ನೀರು ಹಾಕಿ-ಕೇಕ್ ಕತ್ತರಿಸಿ ತನ್ನ ಐದನೇ ತಲೆಮಾರಿನ ಜೊತೆ ಜನ್ಮದಿನ ಆಚರಿಸಿಕೊಂಡರು.
ಶಾಂತಮ್ಮ ಹಿರೇಮಠ್ ಅವರ ಹುಟ್ಟಿದ ವರ್ಷ ಅಂದಾಜು 1917. ಏಳು ಮಕ್ಕಳ ಪೈಕಿ ಮೂವರು ಗಂಡು, ನಾಲ್ವರು ಹೆಣ್ಣು. 34 ಮೊಮ್ಮಕ್ಕಳು, 34 ಮರಿಮಕ್ಕಳು, ಇಬ್ಬರು ಗಿರಿ ಮೊಮ್ಮಕ್ಕಳು ಸೇರಿದಂತೆ ಒಟ್ಟು 77 ಜನರ ದೊಡ್ಡ ಕುಟುಂಬ.
ಮಕ್ಕಳು, ಮೊಮ್ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿರುವ ಶತಾಯುಷಿ ಶಾಂತಜ್ಜಿಯ ಪುತ್ರ ವೈದ್ಯವೃತ್ತಿಯಲ್ಲಿದ್ದಾರೆ. ಶಿಕ್ಷಣವೇ ಶಕ್ತಿ ಎಂಬುದನ್ನು ಬಹಳ ಹಿಂದೆಯೇ ಅರಿತಿದ್ದ ಶಾಂತಜ್ಜಿ ತನ್ನ ಎಲ್ಲಾ ಮಕ್ಕಳಿಗೂ ಶಿಕ್ಷಣ ಕೊಡಿಸಿದ್ದಾರೆ, ಮೊಮ್ಮಕ್ಕಳನ್ನೂ ಓದಿಸಲು ನೆರವು ನೀಡಿದ್ದಾಳೆ. ಇದಕ್ಕಾಗಿ ಇಂದು ಇಡೀ ಕುಟುಂಬವೇ ಅಜ್ಜಿಯನ್ನು ಸ್ಮರಿಸುತ್ತದೆ.
ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಶಾಂತಮ್ಮ, ಭೂತಾಯಿಯ ಜೊತೆಗಿನ ನಂಟಿನಲ್ಲೇ ಜೀವನ ಸಾಗಿಸಿದಾಕೆ. ಅಜ್ಜಿಯ ಆರೋಗ್ಯದ ಗುಟ್ಟಿನ ಬಗ್ಗೆ ಕೇಳಿದರೆ ಕಾಳುಗಳು, ತರಕಾರಿಯ ಸೇವನೆ ಜೊತೆಗೆ ಶ್ರಮದಾನವೇ ಆರೋಗ್ಯದ ಗುಟ್ಟು ಎನ್ನುತ್ತಾಳೆ.
ನೂರರ ಹೊಸ್ತಿಲ್ಲೂ ಆರೋಗ್ಯವಾಗಿರುವ ಶಾಂತಜ್ಜಿಗೆ ಮಕ್ಕಳು-ಮೊಮ್ಮಕ್ಕಳು, ಕುಟುಂಬಸ್ಥರು ಎಂದರೆ ಎಲ್ಲಿಲ್ಲದ ಪ್ರೀತಿ. ನೆನಪಿನ ಶಕ್ತಿ ಮಂಕಾಗಿ ವ್ಯಕ್ತಿಗಳನ್ನು ಗುರುತಿಸುವುದು ಸ್ವಲ್ಪ ಕಷ್ಟವಾದರೂ ಖಡಕ್ ಧ್ವನಿ, ಕಿವಿ, ಕಣ್ಣು ಈಗಲೂ ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿವೆ. ಅಜ್ಜಿಯ ನೂರನೇ ಹುಟ್ಟುಹಬ್ಬದಲ್ಲಿ 70ಕ್ಕೂ ಹೆಚ್ಚು ಕುಟುಂಬ ಸದಸ್ಯರು ಭಾಗಿಯಾಗಿ ಅಜ್ಜಿಯ ಆಶೀರ್ವಾದ ಪಡೆದರು.