ಪಾಳು ಬಿದ್ದ ಶುದ್ಧ ಕುಡಿಯುವ ನೀರಿನ ಘಟಕ: ₹10 ಲಕ್ಷದ ಯೋಜನೆ ಮಣ್ಣುಪಾಲು
ರಾಯಚೂರು, ಜೂನ್ 6: ದೇವದುರ್ಗ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಧಾಪಿಸಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಬಹುತೇಕ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ದೇವದುರ್ಗ ತಾಲೂಕಿನ ಚಿಕ್ಕಬುದೂರು ಗ್ರಾಮದಲ್ಲಿ ಅಳವಡಿಸಿದ ಶುದ್ಧ ಕುಡಿಯುವ ನೀರಿನ ಘಟಕವೇ ಇದಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಅಗಸಿ ಕಟ್ಟೆಯ ಹತ್ತಿರ 5 ವರ್ಷಗಳ ಹಿಂದೆ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿವ ನೀರಿನ ಘಟಕವು ನಿರ್ವಹಣೆ ಕೊರತೆಯಿಂದ ಹಾಳು ಬಿದ್ದಿದೆ. ಇದರಿಂದ ಗ್ರಾಮಸ್ಥರು ಅಶುದ್ಧ ನೀರು ಕುಡಿಯಬೇಕಾದ ಪರಿಸ್ಧಿತಿ ನಿರ್ಮಾಣವಾಗಿದೆ.

ಪ್ಲೋರೈಡ್ ಮತ್ತು ಕಬ್ಬಿಣದ ಅಂಶ ನೀರಿನ ಸೇವನೆಯಿಂದ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದನ್ನು ಮನಗಂಡ ಸರ್ಕಾರ ಶುದ್ದ ಕುಡಿಯುವ ನೀರಿನ ಘಟಕ ಸ್ಧಾಪಿಸಿದೆ. ನೀರಿನ ಘಟಕಕ್ಕೆ ಹಣ ನಿಗದಿಗೊಳಿಸಿ ₹ 5ಕ್ಕೆ 20 ಲೀಟರ್ ನೀರು ಪೂರೈಕೆ ಮಾಡಬೇಕಿತ್ತು. ಆದರೆ, ನಿರ್ವಹಣೆ ಕೊರತೆಯಿಂದ ದುಸ್ಧಿತಿಗೆ ತಲುಪಿದೆ.
ಸಮಸ್ಯೆ ಬಗ್ಗೆ ಹಲವು ಸಲ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕೇಳಿದರೆ ನಿರ್ವಹಣೆ ನಮಗೆ ಇಲ್ಲ ಎನ್ನುತ್ತಾರೆ, ಇತ್ತ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಏಜೆನ್ಸಿ ಅವರು ನಿರ್ವಹಣೆ ಮಾಡುತ್ತಾರೆ ಎಂದು ಜಾರಿ ಕೊಳ್ಳುತ್ತಾರೆ ಎಂದು ಸ್ಧಳೀಯರು ದೂರಿದ್ದಾರೆ.
ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 400 ಕ್ಕೂ ಅಧಿಕ ಮನೆಗಳಿವೆ. ಎಲ್ಲ ವರ್ಗದ ಜನರು ವಾಸವಾಗಿದ್ದಾರೆ. ಘಟಕವು ಪಾಳು ಬಿದ್ದಿರುವುದರಿಂದ ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ ಗ್ರಾಮದ ಮಹಿಳೆಯರು. ಗ್ರಾಮದಲ್ಲಿ 1 ವರ್ಷದ ಹಿಂದೆ ಜಲಜೀವನ ಯೋಜನ ಅಡಿ ಮನೆಮನೆಗಳಿಗೆ ನಲ್ಲಿ ಅಳವಡಿಸಲಾಗಿದೆ. ಆದರೆ ಒಂದುವರೆ ವರ್ಷ ಕಳೆದರೂ ನಲ್ಲಿಗಳಲ್ಲಿ ಒಂದು ಹನಿ ನೀರು ಹರಿದಿಲ್ಲ. ಹಲವು ಕಡೆ ನಲ್ಲಿಗಳನ್ನು ಕಿತ್ತೆಸೆಯಲಾಗಿದೆ.

ವರ್ಷದ ಹಿಂದೆ ಯಾಟಗಲ ಗ್ರಾಮದಿಂದ ಕೃಷ್ಣಾ ನದಿಯ ನೀರು ಕುಡಿಯಲು ಸರಬರಾಜು ಆಗುತ್ತಿತ್ತು ಕಳೆದ 8 ತಿಂಗಳ ಹಿಂದೆ ಈ ನೀರು ಸಹ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಪಕ್ಕದ ಗ್ರಾಮವಾದ ಜೇರಬಂಡಿ ಗ್ರಾಮದಿಂದ ಬೋರ್ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಶೇಕಡ 70% ರಷ್ಟು ಜನರಿಗೆ ಈ ನೀರು ತಲುಪುವ ಮುಂಚೆ ಖಾಲಿಯಾಗುತ್ತದೆ ಎಂದು ಗ್ರಾಮದ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕೆನ್ನುವುದು ಗ್ರಾಮಸ್ಧರ ಒತ್ತಾಯವಾಗಿದೆ.
ಸುಮಾರು 40 ವರ್ಷದಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಶುದ್ಧ ಕುಡಿಯುವ ನೀರು ಘಟಕ ದುರಸ್ತಿಗೊಳಿಸುವಂತೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಮಹ ದೇವಪ್ಪಗೌಡ ಪಾಟೀಲ್ ಚಿಕ್ಕಬುದೂರು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಪ್ರತಿ ವರ್ಷ ಕುಡಿಯುವ ನೀರಿಗಾಗಿ ಲಕ್ಷಾಂತರ ರೂ ವೆಚ್ಚ ಮಾಡಿದ್ದಾರೆ. ಕುಡಿಯುವ ನೀರು ಎಲ್ಲಿ ಒದಗಿಸಿದ್ದಾರೆ ಎಂದು ತೋರಿಸಲಿ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಕಿಡಿಕಾರಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರತಿಕ್ರಿಸಿರುವ ದೇವದುರ್ಗ ಇಓ ತಾಲ್ಲೂಕು ಪಂಚಾಯಿತಿ ಪಂಪಾಪತಿ ಹಿರೇಮಠ, ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಗೊಳಿಸಲು ಪಿಡಿಒ ತಿಳಿಸುವೆ. ಯಾಟಗಲ ಗ್ರಾಮದಿಂದ ಕೃಷ್ಣ ನದಿಯ ನೀರು ಸಂಪರ್ಕ ಕಲ್ಪಿಸುವ ಪೈಪ್ ಲೈನ್ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ ಮಾಹಿತಿ ಪಡೆದು ಕ್ರಮಕ್ಕೆ ಸೂಚಿಸಿವೆ ಎಂದಿದ್ದಾರೆ.











Click it and Unblock the Notifications