ರಾಯಚೂರು ಜಿಲ್ಲೆಯಲ್ಲಿ ಶಾಲಾ ಮಕ್ಕಳ ಕಲಿಕೆಗೆ ಡಿಜಿಟಲ್ ಸ್ಪರ್ಶ
ರಾಯಚೂರು, ಅಕ್ಟೋಬರ್, 04: ಮಾಹಿತಿ ತಂತ್ರಜ್ಞಾನದ ಮೂಲಕ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳ ಕಲಿಕೆಗಾಗಿ ಹಾಗೂ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 'ಗ್ರಾಮ ಡಿಜಿ ವಿಕಸನ' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಸರ್ಕಾರ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಲ್ಲಿ ಜಾರಿಗೆ ತಂದಿರುವ 'ಗ್ರಾಮ ಡಿಜಿ ವಿಕಸನ' ಕಾರ್ಯಕ್ರಮಕ್ಕೆ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಸಂಸ್ಥೆ ಸಹಯೋಗದಲ್ಲಿ ತಾಲೂಕಿನಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಈ ಸಂಸ್ಥೆಗಳು ಸಿಎಸ್ಆರ್ ಅನುದಾನದಡಿ ತಾಲೂಕಿನ 29 ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳಲ್ಲಿ ಎರಡು ಸ್ಮಾರ್ಟ್ಫೋನ್ ಹಾಗೂ ಒಂದು ಎಲ್ಇಡಿ ಟಿವಿ ನೀಡಿವೆ. ಸ್ಥಳೀಯ ಗ್ರಾಮ ಪಂಚಾಯಿತಿಗಳು ಇಂಟರ್ನೆಟ್ ಹಾಗೂ ಮೋಡೋಮ್ ವ್ಯವಸ್ಥೆಯನ್ನು ಕಲ್ಪಿಸಿದೆ. ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಡಿಜಿಟಲ್ ಸಾಧನಗಳಲ್ಲಿ 8, 9 ಮತ್ತು 10ನೇ ತರಗತಿ ಪಠ್ಯದ ಜೊತೆಗೆ ಐಸಿಟಿ ವಿಷಯವನ್ನು ಅಳವಡಿಸಿರುವುದರಿಂದ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಸಾಲ ಮಾಡಿ ಮಕ್ಕಳಿಗೆ ಬಿಸಿಯೂಟ ಬಡಿಸುತ್ತಿರುವ ರಾಯಚೂರು ಶಿಕ್ಷಕರು
ಈ ಡಿಜಿಟಲ್ ಸಾಧನಗಳಿಂದ ಶಾಲಾ ಮಕ್ಕಳು ಕಲಿಕಾ ಚೇತರಿಕೆ ಕಾರ್ಯಕ್ರಮದ ವಿಷಯವನ್ನು ಹಾಗೂ ಈ ಹಿಂದಿನ ಚಂದನ ವಾಹಿನಿಯ ಸಂವಾದ ತರಗತಿಗಳನ್ನು ಗ್ರಂಥಾಲಯದ ಮೊಬೈಲ್, ಟಿವಿಯಲ್ಲಿ ವೀಕ್ಷಣೆ ಮಾಡಿ ನೋಟ್ ಮಾಡಿಕೊಳ್ಳುತ್ತಿದ್ದಾರೆ. ಶಾಲಾ ಮಕ್ಕಳು ಮಾತ್ರವಲ್ಲದೆ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಯುವ ಜನರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರಗಳಿಗೆ ತೆರಳದೆ ಆ ಭಾಗದ ಗ್ರಂಥಾಲಯಗಳಿಗೆ ಬರುತ್ತಿದ್ದಾರೆ ಎಂದು ಗ್ರಂಥಾಲಯದ ಮೇಲ್ವಿಚಾರಕರೊಬ್ಬರು ತಿಳಿಸಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ‘ಗ್ರಾಮ ಡಿಜಿ ವಿಕಸನ’
ತಾಲೂಕಿನ ಎಲ್ಲ ಗ್ರಂಥಾಲಯಗಳಿಗೆ ಒಟ್ಟು 29 ಟಿ.ವಿ ಹಾಗೂ 58 ಸ್ಮಾರ್ಟ್ ಫೋನ್ಗಳನ್ನು ವಿತರಿಸಲಾಗಿದೆ. ಗ್ರಂಥಾಲಯಗಳತ್ತ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಮುಖ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಜಿ ವಿಕಸನ ಕಾರ್ಯಕ್ರಮದ ನಿರ್ವಹಣೆಯನ್ನು ಗ್ರಂಥಾಲಯದ ಮೇಲ್ವಿಚಾರಕರು ನೋಡಿಕೊಳ್ಳುತ್ತಿದ್ದಾರೆ. ರಾಯಚೂರು ತಾಲೂಕಿನ 29 ಗ್ರಂಥಾಲಯಗಳಲ್ಲಿ ಕಾರ್ಯಕ್ರಮ ಅನುಷ್ಠಾನವನ್ನು ಈ ಹಿಂದೆ ಜನರು ಪತ್ರಿಕೆ ಓದಲು ಮತ್ತು ಪುಸ್ತಕ ಎರವಲು ಪಡೆಯಲು ಮಾತ್ರ ಭೇಟಿ ನೀಡುತ್ತಿದ್ದರು. ಆದರೆ ಇದೀಗ ಡಿ.ಜಿ ವಿಕಸನ ಕಾರ್ಯಕ್ರಮ ಆರಂಭದ ನಂತರ ಹೆಚ್ಚಿನ ಶಾಲಾ ಮಕ್ಕಳು ಇಲ್ಲಿಗೆ ಭೇಟಿ ನೀಡಿ ಶಿಕ್ಷಣಕ್ಕೆ ಬೇಕಾದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ರಾಯಚೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್ ತಿಳಿಸಿದ್ದಾರೆ.
ಅಭಿವೃದ್ಧಿಯ ಪಥದಲ್ಲಿ ಕೆರೆ
ಇನ್ನು ಜಿಲ್ಲೆಯ ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕರಡಕಲ್ಲ, ಲಿಂಗಸುಗೂರು, ಹುಲಿಗುಡ್ಡ ವಾರ್ಡ್ಗಳ ಭಾಗದಲ್ಲಿರುವ ಐತಿಹಾಸಿಕ ಕರಡಕಲ್ಲ ಕೆರೆಯ ಅಭಿವೃದ್ಧಿ ಕಾರ್ಯವು ಭರದಿಂದ ಸಾಗಿದೆ. ಈ ಅಭಿವೃದ್ಧಿ ಕಾರ್ಯಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕರಡಿಕಲ್ ಸಂಸ್ಥಾನದ 800ರ ಮೂರನೇ ಬಿಲ್ಲವ ಮಹಾರಾಜ ಕೆರೆ ನಿರ್ಮಿಸಿದ್ದಾರೆ ಎಂಬುದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ನಂತರದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ಈ ಕೆರೆಯ ಸ್ಥಳವನ್ನೇ ಕಂಟೈನ್ಮೆಂಟ್ ಪ್ರದೇಶವಾಗಿ ಬಳಸಲಾಗಿತ್ತು. ಅಧಿಕಾರಿಗಳ ವಾಸ್ತವ್ಯಕ್ಕೆ, ಡಿವೈಎಸ್ಪಿ ಬಂಗಲೆ, ವಾಯು ವಿಹಾರಕ್ಕೆಂದು ಕೆರೆ ದಂಡೆಯ ಮೇಲೆ ಕ್ಲಬ್ ನಿರ್ಮಿಸಿದ್ದು, ಇವು ಕೆರೆಯ ಮಹತ್ವಕ್ಕೆ ಮೈಲುಗಲ್ಲುಗಳಾಗಿವೆ.
ಕೆಲ ದಶಕಗಳಿಂದ ಕೆರೆ ಅಭಿವೃದ್ಧಿ ಮತ್ತು ಕೆರೆಯಲ್ಲಿ ಸಂಗ್ರಹಗೊಳ್ಳುವ ಕಲುಷಿತ ನೀರನ್ನು ಸ್ಥಗಿತಗೊಳಿಸುವಂತೆ ಅಲ್ಲಿನ ಸ್ಥಳೀಯರು ಹೋರಾಟ ನಡೆಸಿಕೊಂಡು ಬಂದಿದ್ದರು. ಕಲುಷಿತ ನೀರು ಕೆರೆಗೆ ಸೇರದಂತೆ ಚರಂಡಿ ನಿರ್ಮಾಣ ಸೇರಿದಂತೆ ಕರೆಯ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 6.43 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಕೆರೆಯ ಪೂರ್ವ ಭಾಗದಲ್ಲಿ ಉದ್ಯಾನ ನಿರ್ಮಾಣ, ಕೆರೆ ತಡೆಗೋಡೆ, ಗ್ರಿಲ್ ಅಳವಡಿಕೆ, 960 ಮೀಟರ್ ಉದ್ದದ ಪಾದಚಾರಿ ಮಾರ್ಗ, ಲೈಟಿಂಗ್, ಸೌಂದರ್ಯ ಹೆಚ್ಚಿಸುವ ಗಿಡಗಳ ನಾಟಿ, ಉದ್ಯಾನದಲ್ಲಿ ಬಯಲು ರಂಗಮಂದಿರ, ವಿಶ್ರಾಂತಿ ಶೆಡ್ಗಳು, ಆಸನಗಳ ಅಳವಡಿಕೆ ಸೇರಿದಂತೆ ಬೋಟಿಂಗ್ ವ್ಯವಸ್ಥೆಯ ಕಾಮಗಾರಿ ಭರದಿಂದ ಸಾಗಿದೆ.
ಹೈಟೆಕ್ ಸ್ಪರ್ಶ ನೀಡುವ ಕಾರ್ಯ ಪ್ರಗತಿ
ಕಾರಂಜಿ ಅಳವಡಿಕೆ, ಶೌಚಾಲಯ, ಶುದ್ಧ ಕುಡಿಯುವ ನೀರು, ಮಕ್ಕಳಿಗಾಗಿ ಆಟಿಗೆ ಸಾಮಗ್ರಿ ಸೇರಿದಂತೆ ಹೈಟೆಕ್ ಸ್ಪರ್ಶ ನೀಡುವ ಕಾರ್ಯ ನಡೆಯುತ್ತಿದೆ. ಬೋಟಿಂಗ್ ವ್ಯವಸ್ಥೆಗೆ ಪ್ಲಾಟ್ಪಾರ್ಮ್ ಕಾಮಗಾರಿ ಪ್ರಚಲಿತದಲ್ಲಿದೆ. ಉದ್ಯಾನದಲ್ಲಿ ಲಾನ್ ಜೋಡಣೆ, ಸೌಂದರ್ಯ ಹೆಚ್ಚಿಸುವ ವೈವಿಧ್ಯಮಯ ಸಸಿಗಳ ನಾಟಿ ಮಾಡಲಾಗಿದ್ದು, ಇದು ಶೀಘ್ರದಲ್ಲಿ ನಾಗರಿಕರ ಬಳಕೆಗೆ ಬರಲಿದೆ ಎನ್ನುವ ಆಶಯ ನಾಗರಿಕದ್ದಾಗಿದೆ. 'ಐತಿಹಾಸಿಕ ಕೆರೆ ಸೌಂದರ್ಯ, ಸಾರ್ವಜನಿಕರಿಗೆ ಉಪಯುಕ್ತ ಆಗುವ ರೀತಿಯಲ್ಲಿ ಅಭಿವೃದ್ಧಿಗೆ ಮುಂದಾಗಿದ್ದು ಗಮನಾರ್ಹವಾಗಿದೆ. ಕೆರೆ ಒತ್ತುವರಿ ಆಗಿರುವ ಬಗ್ಗೆ ದೂರುಗಳಿದ್ದು, ರಕ್ಷಣೆಗೆ ಕಂದಾಯ ಇಲಾಖೆ ಮುಂದಾಗಬೇಕು. ಅದೇ ರೀತಿಯಲ್ಲಿ ವಾರ್ಡ್ ಬಡಾವಣೆಗಳಿಗೆ ಅಗತ್ಯ ಸೌಲಭ್ಯಗಳ ಚಿಂತನೆಗೆ ಜನಪ್ರತಿನಿಧಿಗಳು ಮುಂದಾಗಬೇಕು' ಎಂದು ಸಮಾಜ ಸೇವಕ ಅಕ್ರಂಪಾಷ ಮನವಿ ಮಾಡಿದ್ದಾರೆ.
ಕೆರೆ ಬಳಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳು
'ಕರಡಕಲ್ಲ ಕೆರೆ ಅಭಿವೃದ್ಧಿ ಜೊತೆಗೆ ಬೋಟಿಂಗ್, ವಾಯು ವಿಹಾರದ ಪಾದಚಾರಿ ಮಾರ್ಗ, ವಿಶ್ರಾಂತಿಗಾಗಿ ಆಸನಗಳು, ಉದ್ಯಾನ, ಬಯಲು ರಂಗಮಂಟಪ ಸೇರಿದಂತೆ ಇತರೆ ಸೌಲಭ್ಯಕ್ಕೆ ಅನುದಾನ ನೀಡಿದ್ದಾರೆ. ಶಾಸಕ ಡಿ.ಎಸ್ ಹೂಲಗೇರಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 6.43 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ' ಎಂದು ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಶಿವಕುಮಾರ್ ತಿಳಿಸಿದ್ದಾರೆ.
"ಜನರಲ್ಲಿ ಅಚ್ಚಳಿಯದೆ ಉಳಿಯುವ ಕೆಲಸ ಮಾಡುವ ಕನಸು ಕಂಡಿದ್ದೆ. ಕರಡಕಲ್ಲ ಕೆರೆ ಅಭಿವೃದ್ಧಿ, ಕ್ರೀಡಾಂಗಣ, ಗ್ರಂಥಾಲಯ ಡಿಜಿಟಲೀಕರಣ, ಬಸವೇಶ್ವರ ಪುತ್ಥಳಿ ನಿರ್ಮಾಣ ತೃಪ್ತಿ ತಂದಿದೆ," ಎಂದು ಲಿಂಗಸುಗೂರು ಶಾಸಕ ಡಿ.ಎಸ್ ಹೂಲಗೇರಿ ಹೇಳಿದರು.