ದೇವದುರ್ಗ; ಸತ್ತ ವ್ಯಕ್ತಿಯ ಹೆಸರಿನಲ್ಲಿಯೂ ನರೇಗಾ ಕಾಮಗಾರಿ
ದೇವದುರ್ಗ, ಅಕ್ಟೋಬರ್, 31: ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಮತ್ತು 13ನೇ ಹಣಕಾಸು ನಿಧಿಯಲ್ಲಿ ದುರ್ಬಳಕೆ ಮಾಡಿರುವ ಸತ್ಯ ಇದೀಗ ಬಯಲಿಗೆ ಬಿದ್ದಿದೆ.
2015ರಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಒಟ್ಟಾಗಿ ಉದ್ಯೋಗ ಖಾತರಿ ಯೋಜನೆ ಮತ್ತು 13ನೇ ಹಣಕಾಸು ನಿಧಿಯಲ್ಲಿ 4.23 ಕೋಟಿ ರೂಪಾಯಿ ಹಣ ದುರ್ಬಳಕೆ ಮಾಡಿರುವುದನ್ನು ಬಯಲಿಗೆಳೆದು ವರದಿಯನ್ನು ಸಲ್ಲಿಸಲಾಗಿದೆ. ಅಲ್ಲದೇ ಮೃತರ ಹೆಸರಿನಲ್ಲಿಯೂ ಕಾಮಗಾರಿಗಳನ್ನು ನಡೆಸಿದ್ದಾರೆ ಎನ್ನುವ ಸತ್ಯ ತನಿಖೆಯಲ್ಲಿ ಹೊರಬಿದ್ದಿದೆ.
ಲೋಕಾಯುಕ್ತ ಕಾನೂನು ವಿಭಾಗಕ್ಕೆ ವರದಿ ಸಲ್ಲಿಕೆ ಆಗಿದೆ. ದೇವದರ್ಗ ಪಿಡಿಓ ಆಗಿದ್ದ ಶಾಸಕರ ಆಪ್ತ ಸಹಾಯಕ ಪ್ರಭುಲಿಂಗ ಪಾಟೀಲ, ನರೇಗಾ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕ ಬಸಣ್ಣ ನಾಯಕ, ಮಸ್ಕಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಬಾಬುರಾವ್ ರಾಥೋಡ, ಕ್ಯಾದಿಗೇರಾ ಪಂಚಾಯಿತಿಯ ಪಿಡಿಓ ಸಿ. ಬಿ. ಪಾಟೀಲ ಮತ್ತು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾಗಪ್ಪ, ಕಮಲಾ, ಶಿವಮ್ಮ ಮತ್ತು ಹನುಮಂತರಾಯ ಅವರ ವಿರುದ್ಧ ಏನು ಕ್ರಮ ಆಗುತ್ತದೆ ಎನ್ನುವುದನ್ನು ಎದುರು ನೋಡಲಾಗುತ್ತಿದೆ. ಹಣ ದುರ್ಬಳಕೆ ಮಾಡಿಕೊಂಡವರ ಪಟ್ಟಿಯಲ್ಲಿದ್ದ ಬಾಲಗೌಡ ಎನ್ನುವವರು ನಿವೃತ್ತರಾಗಿದ್ದು, ಭೀಮರಾಯ ಅವರು ನಿಧನರಾಗಿದ್ದಾರೆ.

ಲೋಕಾಯುಕ್ತ ಪೊಲೀಸರಿಂದ ತನಿಖೆ
ಉದ್ಯೋಗ ಖಾತರಿ ಯೋಜನೆಯಡಿ ಕುಡಿಯುವ ನೀರು, ವಸತಿ ಯೋಜನೆ, ಶೌಚಾಲಯ ಹಣ ಮತ್ತು ಇತರೆ ವಸತಿ ಯೋಜನೆಗಳಡಿ ಸುಮಾರು 5 ಕೋಟಿ ರೂಪಾಯಿಗೂ ಅಧಿಕ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. 2015ರಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಜೈ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಆರಂಭದಲ್ಲಿ ನನೆಗುದಿಗೆ ಬಿದ್ದಿದ್ದ ಕಡತವನ್ನು ಲೋಕಾಯುಕ್ತ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದರು.

ಸ್ಥಳ ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಹೊನ್ನಕಾಟಮಳ್ಳಿ, ಹೇಮನೂರು ಕೊತ್ತದೊಡ್ಡಿ, ಮಲ್ಲಿನಾಯಕನದೊಡ್ಡಿ ಗ್ರಾಮಗಳಿಗೆ ಫಲಾನುಭವಿಗಳ ಪಟ್ಟಿಯೊಂದಿಗೆ ಲೋಕಾಯುಕ್ತ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್, ಕಂಪ್ಯೂಟರ್ ಆಪರೇಟರ್ ಅಯ್ಯಪ್ಪ, ಅರ್ಜಿದಾರರು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಈ ಹಿಂದೆ ನಡೆದಿರುವ ಕಾಮಗಾರಿಯ ಸ್ಥಳಗಳನ್ನು ಪರಿಶೀಲಿಸಿದ್ದಾರೆ.

ಮೃತರ ಹೆಸರಿನಲ್ಲೂ ಕಾಮಗಾರಿ
ವಸತಿ ಯೋಜನೆ ಫಲಾನುಭವಿಗಳಾದ ಅನುಪಮಾ, ಕಾಂತಮ್ಮ, ಮಲ್ಲಮ್ಮ, ಹನುಮಂತಿ ಅವರನ್ನು ವಿಚಾರಿಸಿದ್ದಾರೆ. ನರೇಗಾ ಯೋಜನೆಯಡಿ 20ಕ್ಕೂ ಹೆಚ್ಚು ಕಾಮಗಾರಿಗಳನ್ನು ನಿರ್ವಹಿಸದೆ 13ನೇ ಹಣಕಾಸು ಯೋಜನೆಯಲ್ಲಿ ಮತ್ತು ಬಸವ ವಸತಿ ಯೋಜನೆ ಅಡಿಯಲ್ಲಿ ಮೃತರ ಹೆಸರಿನಲ್ಲಿಯೂ ಕಾಮಗಾರಿಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ಹೀಗೆ ಹಣ ದುರ್ಬಳಕೆ ಮಾಡಿರುವುದು ತನಿಖೆಯಲ್ಲಿ ಪತ್ತೆ ಆಗಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಹಣ ದುರ್ಬಳಕೆ
ಕಾಮಗಾರಿಗಳನ್ನು ನಿರ್ವಹಿಸದಿದ್ದರೂ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಅರಕೇರಾ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ಗಳಿಂದ ಒಟ್ಟು 4 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ದುರ್ಬಳಕೆ ಆಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕಳೆದ ಸೆಪ್ಟೆಂಬರ್ನಲ್ಲಿ ಎಲ್ಲರಿಗೂ ನೋಟಿಸ್ ಕೂಡ ನೀಡಿದ್ದರು. ಬಹುತೇಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಹಣ ದುರ್ಬಳಕೆ ಬಹುತೇಕ ಸಾಬೀತು ಆಗಿರುವುದರಿಂದ ಎಲ್ಲರಿಗೂ ಇದೀಗ ಬಂಧನದ ಭೀತಿ ಎದುರಾಗಿದೆ.












Click it and Unblock the Notifications