ರಾಯಚೂರು ಕಲುಷಿತ ನೀರು ಪ್ರಕರಣ: ಸಂತ್ರಸ್ತ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರಕ್ಕೆ ಪ್ರಸ್ತಾವ
ರಾಯಚೂರು, ಜೂ. 7: ಕಲುಷಿತ ನೀರಿನ ಸೇವನೆಯಿಂದ ಮೃತಪಟ್ಟ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಂತ್ರಸ್ತರಿಗೆ 20 ಸಾವಿರ ರೂ.ವೈದ್ಯಕೀಯ ವೆಚ್ಚ, ಸಂಘ- ಸಂಸ್ಥೆಗಳ ಒತ್ತಾಯದ ಹಿನ್ನೆಲೆಯಲ್ಲಿ ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸುವ ಸರ್ವಾನುಮತದ ನಿರ್ಣಯವನ್ನು ನಗರಸಭೆಯ ತುರ್ತು ಸಭೆಯಲ್ಲಿ ಕೈಗೊಳ್ಳಲಾಯಿತು.
ಕುಡಿವ ನೀರಿಗೆ ಸಂಬಂಧಿಸಿ ನಗರಸಭೆ ಅಧ್ಯಕ್ಷ ಲಲಿತಾ ಕಡಗೋಳ ಆಂಜಿನೇಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ತೀವ್ರ ಮಾತಿನ ಚಕಮಕಿ ಘಟನೆ ನಡೆಯಿತು. ಆದರೆ, ಕಲುಷಿತ ಕುಡಿವ ನೀರಿನ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಸದಸ್ಯರು ಸರ್ವಾನು ಮತದಿಂದ ಪರಿಹಾರ ನೀಡುವುದಕ್ಕೆ ಸಂಬಂಧಿಸಿ ಒಕ್ಕೊರಳಿನ ನಿರ್ಣಯ ಕೈಗೊಂಡರು.
ಕಲುಷಿತ ನೀರು ಪೂರೈಕೆಯಿಂದ ಮೂವರ ಸಾವು ಖಂಡಿಸಿ ರಾಯಚೂರು ಬಂದ್
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
ಸಭೆ ಆರಂಭದಲ್ಲಿ ಆಯುಕ್ತ ಕೆ.ಗುರುಲಿಂಗಪ್ಪ ಅವರು, ಕಲುಷಿತ ನೀರು ಪ್ರಕರಣಕ್ಕೆ ಸಂಬಂಧಿಸಿ, ಸಭೆಗೆ ಮಾಹಿತಿ ನೀಡುವುದರೊಂದಿಗೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ವೆಂಕಟೇಶ ಮತ್ತು ಜೆಇ ಕೃಷ್ಣಾ ಅವರನ್ನು ಅಮಾನತುಗೊಳಿಸಿದ ವಿಷಯವನ್ನು ಸಭೆಗೆ ತಿಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಂದು ಹೇಳಿದರು. ಆದರೆ, ಈ ಎಲ್ಲಾ ವಿವರಣೆಗಳಿಗೆ ಸಂಬಂಧಿಸಿ ತೀವ್ರ ಅಸಮಾಧಾನಗೊಂಡ ಸದಸ್ಯರು ಯಾರ ಮೇಲೂ ಕ್ರಮ ಕೈಗೊಳ್ಳುವುದರಿಂದ ಬೀದಿಯಲ್ಲಿ ಹೋದ ನಗರಸಭೆ ಸದಸ್ಯರ ಗೌರವ ಮರಳಲು ಸಾಧ್ಯವೇ?. ಇಂತಹ ಘಟನೆ ನಡೆದಿರುವುದೇ ದುರದೃಷ್ಟಕರ. ಮತ್ತೇ ಇದು ಮರುಕಳುಹಿಸಿದಂತೆ ಎಚ್ಚರ ವಹಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆಂದು ಹೇಳಿದರು.
ಸಭೆಯಲ್ಲಿ ಆರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯರಾದ ಶ್ರೀನಿವಾಸ ರೆಡ್ಡಿ, ದರೂರು ಬಸವರಾಜ ಅವರು ಮಾತನಾಡುತ್ತಾ, ಇಂತಹದೊಂದು ಪ್ರಕರಣ ನಡೆದಿದ್ದರೂ, ನಗರಸಭೆ ಅಧಿಕಾರಿಗಳು ಏಕೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ?. ಈ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳಾದ ನಿಮಗೆ ಮತ್ತು ಅಧ್ಯಕ್ಷರಿಗೆ ಮಾತ್ರ ಗಂಭೀರ ಎನಿಸಿದೆ, ಸದಸ್ಯರಿಗೆ ಇದು ಗಂಭೀರವಾಗಿರಲಿಲ್ಲವೇ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದರೂರು ಬಸವರಾಜ ಅವರು ಮಾತನಾಡುತ್ತಾ, ಈ ಬಗ್ಗೆ ಸದಸ್ಯರಿಗೇಕೆ ಮಾಹಿತಿ ನೀಡಲಿಲ್ಲ?. ನೀರು ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ಸಹ ಯಾವುದೇ ಮಾಹಿತಿ ನೀಡಿಲ್ಲ. ಈಗ ಉತ್ತರ ಕೊಡಲು ಯಾರು ಇಲ್ಲ ಎಂದು ಆಯುಕ್ತರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಈ ರೀತಿ ಅಧಿಕಾರ ನಿರ್ವಹಿಸುವುದರಿಂದ ಇಂದು ಈ ಘಟನೆ ನಡೆಯಲು ಸಾಧ್ಯವಾಗಿದೆ. ನಗರಸಭೆ ಸದಸ್ಯರಾದ ನಾವು ಜನರ ಮಧ್ಯೆ ಯಾವ ರೀತಿಯಲ್ಲಿ ತಿರುಗಾಡಬೇಕು ಎಂದು ಪ್ರಶ್ನಿಸಿದರು.
ರಾಯಚೂರಲ್ಲಿ ಕಲುಷಿತ ನೀರು: ವಾಂತಿ ಬೇಧಿಯಿಂದ ಒಬ್ಬ ಮಹಿಳೆ ಬಲಿ, ನೂರಾರು ಜನರು ಅಸ್ವಸ್ಥ
ನೀರಿನ ವಿಷಯದಲ್ಲಿ ಯಾರು ರಾಜಕೀಯ ಮಾಡುವುದು ಬೇಡ
ಬಿಜೆಪಿ ಸದಸ್ಯರಾದ ನಾಗರಾಜ ಮಾತನಾಡುತ್ತಾ, ಸತ್ತವರಿಗೆ ಪರಿಹಾರ, ಅಧಿಕಾರಿಗಳ ಅಮಾನತು ಮಾಡಿದರೇ, ಈ ಸಮಸ್ಯೆ ಬಗೆಹರಿಯುವುದೇ?. ಜನರಿಗೆ ಒಳ್ಳೆಯ ನೀರು ಕೊಡಲು ಸಾಧ್ಯವಾಗದಿದ್ದರೇ ನಾವು ಇರುವುದಾದರೂ ಏಕೆ?. ಅಲಂ, ಬ್ಲಿಚಿಂಗ್ ಇಲ್ಲದೇ ಸುಧೀರ್ಘ ಅವಧಿಯಿಂದ ನೀರು ಪೂರೈಕೆ ಮಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಸರ್ಕಾರದಿಂದ ಸತ್ತವರಿಗೆ 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಆದರೆ, ಈ ರೀತಿಯ ಘಟನೆಗಳು ಮತ್ತೇ ಮರಕಳುಹಿಸದಂತೆ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ನಗರದ ಜನರಿಗೆ ನಾವು ಕುಡಿವ ನೀರು ಬದಲು, ವಿಷ ಕೊಡುತ್ತಿದ್ದೇವೆ. ನಾವು ಜನರ ಮಧ್ಯೆ ಮುಖ ಎತ್ತಿ ಕೊಂಡು ಅವರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವೇ?. ನೀರಿನ ವಿಷಯದಲ್ಲಿ ಯಾರು ರಾಜಕೀಯ ಮಾಡುವುದು ಬೇಡ. ಈಗ ನಡೆದ ಘಟನೆ ಪುನಃ ನಡೆಯದಂತೆ ಗಮನ ಹರಿಸುವಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕೆಂದು ಹೇಳಿದರು. ಈ ಸಭೆಯಲ್ಲಿ ಉಪಾಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಉಪಸ್ಥಿತರಿದ್ದರು.
ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ
ನಗರಸಭೆ ಮುಂಭಾಗದಲ್ಲಿ ನಾಗರೀಕರ ವೇದಿಕೆಯ ಮುಖಂಡರು ಹಾಗೂ ವಿವಿಧ ಪಕ್ಷಗಳ ನಾಯಕರು ಧರಣಿ ನಡೆಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಾರದಿದ್ದರೇ, ನಗರಸಭೆಗೆ ಮುತ್ತಿಗೆ ಹಾಕುವ ಎಚ್ಚರಿಕೆಯೂ ನೀಡಲಾಗಿತ್ತು. ನಗರಸಭೆ ಕಲುಷಿತ ನೀರು ಕುಡಿದು ಮೃತಪಟ್ಟ ಕುಟುಂಬಸ್ಥರಿಗೆ ಸಿಎಂ ರಿಲೀಫ್ ಫಂಡ್ ನಿಂದ ಪ್ರತಿ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ರಾಯಚೂರು ನಗರಸಭೆ ವತಿಯಿಂದ ಕಲುಷಿತ ನೀರು ಸರಬರಾಜು ಮಾಡಿದ್ದ ಪ್ರಕರಣದಲ್ಲಿ ಇದುವರೆಗೂ ಮೂರು ಜನ ಮೃತಪಟ್ಟಿದ್ದು, ಇದೀಗ ರಾಯಚೂರು ನಗರದಲ್ಲಿ ಪ್ರತಿಭಟನೆ ಕಾವು ಮತ್ತಷ್ಟು ಏರತೊಡಗಿದೆ. ಇದರಿಂದ ಎಚ್ಚೆತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮೃತಪಟ್ಟ ಮೂರು ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಪ್ರಕರಣದಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚನೆ ಮಾಡಿ ವರದಿ ಪಡೆಯಲಾಗುವುದು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದರು.
25 ಲಕ್ಷ ಅನುದಾನ ನೀಡಲು ಒತ್ತಾಯ
ಮೃತಪಟ್ಟವರಿಗೆ ನಷ್ಟ ಪರಿಹಾರ ಒದಗಿಸುವ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು. ಮೃತ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡುವುದರಿಂದ ಉಪಯೋಗವಿಲ್ಲ. ತಲಾ ಒಂದು ಕುಟುಂಬಕ್ಕೆ 25 ಲಕ್ಷ ಅನುದಾನ ನೀಡಬೇಕೆಂದು ಮುಷ್ಕರ ನಿರತರು ಒತ್ತಾಯಿಸಿದರು. ನಿಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿ, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ನಂತರ 15 ದಿನ ಗಡುವು ನೀಡಿ, ಪ್ರತಿಭಟನೆ ಹಿಂಪಡೆಯಲಾಯಿತು
(ಒನ್ಇಂಡಿಯಾ ಸುದ್ದಿ)