ಅ.20 ರಂದು ಮಂತ್ರಾಲಯಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ
ರಾಯಚೂರು, ಅಕ್ಟೋಬರ್ 19: ಭಾರತ ಐಕ್ಯತಾ ಯಾತ್ರೆ ಮೊದಲ ಹಂತದಲ್ಲಿ ಅಪಾರ ಜನ ಮನ್ನಣೆ ಗಳಿಸಿ ಮುನ್ನುಗ್ಗುತ್ತಿದೆ. ಎರಡನೇ ಹಂತದಲ್ಲಿ ರಾಜ್ಯ ಪ್ರವೇಶಿಸುವ ಮುನ್ನ ರಾಹುಲ್ ಗಾಂಧಿ ದೇಶದ ಪ್ರಸಿದ್ಧ ಧಾರ್ಮಿಕ ತಾಣ ಮಂತ್ರಾಲಯದ ರಾಯರ ದರ್ಶನ ಪಡೆಯಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಉತ್ಸುಕರಾಗಿದ್ದಾರೆ.
ಕರ್ನಾಟಕದಲ್ಲಿ ಬಹು ಭಾಗ ಸಂಚರಿಸಿದ ಯಾತ್ರೆ, ಸದ್ಯ ಬಳ್ಳಾರಿ ಬಳಿಯ ಆಂಧ್ರದ ಗಡಿ ದಾಟಿದೆ. ರಾಯಚೂರು ತಾಲೂಕಿನಲ್ಲಿ ಅಕ್ಟೋಬರ್ 21 ರಿಂದ ಅಕ್ಟೋಬರ್ 23 ರವರೆಗೆ ಪಾದಯಾತ್ರೆ ಮುಂದುವರಿಯಲಿದೆ. ರಾಯಚೂರು ಗಡಿ ಪ್ರವೇಶಕ್ಕೆ ಮುನ್ನ ರಾಹುಲ್ ಗಾಂಧಿ ಮಂತ್ರಾಲಯಕ್ಕೂ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ರಾಹುಲ್ ಗಾಂಧಿ ಈ ಅಪರೂಪದ ಭೇಟಿಯೊಂದಿಗೆ ಮಾಜಿ ಪ್ರಧಾನಿ ನೆಹರೂ ಕುಟುಂಬದ ಮೊದಲ ವ್ಯಕ್ತಿಯೊಬ್ಬರು ರಾಯರ ದರ್ಶನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಪಾದಯಾತ್ರೆ ಮುಗಿಸಿರುವ ರಾಹುಲ್ ಅಕ್ಟೋಬರ್ 18 ರಿಂದ ಆಂಧ್ರದ ಕರ್ನೂಲು ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಆಂಧ್ರದಲ್ಲಿರುವ ಪಾದಯಾತ್ರೆ, ದೇಶದ ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯಕ್ಕೆ ಅಕ್ಟೋಬರ್ 20 ರಂದು ರಾತ್ರಿ ತಲುಪಲಿದೆ. ರಾಹುಲ್ ಗಾಂಧಿ ಅಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲಿದ್ದಾರೆ ಎಂದು ಮಠದ ಮೂಲಗಳು ಖಚಿತಪಡಿಸಿವೆ. ರಾತ್ರಿ ವಾಸ್ತವ್ಯಕ್ಕೂ ಮೊದಲು ಅಥವಾ ಅಕ್ಟೋಬರ್ 21 ರಂದು ಬೆಳಗ್ಗೆ ರಾಯರ ದರ್ಶನ ಪಡೆದು ಪಾದಯಾತ್ರೆ ಆರಂಭಿಸುವ ಸಾಧ್ಯತೆಯಿದೆ. ಶ್ರೀಮಠದ ಆಡಳಿತ ಅಗತ್ಯ ಸಿದ್ಧತೆಗೆ ತೊಡಗಿದೆ.

ಮಂತ್ರಾಲಯದಿಂದ ತುಂಗಭದ್ರಾ ನದಿ ಮೇಲಿನ ಸೇತುವೆ ದಾಟಿದ ನಂತರ ರಾಹುಲ್ ಗಾಂಧಿ ಅಕ್ಟೋಬರ್ 21 ರಂದು ರಾಯಚೂರು ವ್ಯಾಪ್ತಿಯ ಪ್ರವಾಸ ಆರಂಭಿಸಲಿದ್ದಾರೆ. ಈ ಭಾಗದಲ್ಲಿ ಪ್ರವಾಸ ಕೈಗೊಳ್ಳುವ ಬಹುತೇಕ ರಾಜಕೀಯ ನಾಯಕರು ಮಂತ್ರಾಲಯ ಮಠಕ್ಕೆ ಭೇಟಿ ನೀಡುವುದು ರೂಢಿ. ಕೇಂದ್ರ ನಾಯಕರ ಪೈಕಿ ಮಾಜಿ ಪ್ರಧಾನಿ ದಿ. ಪಿ. ವಿ. ನರಸಿಂಹ ರಾವ್, ಅಮಿತ್ ಶಾ, ಶೋಭಾ ಕರಂದ್ಲಾಜೆ, ಸಿ. ಟಿ. ರವಿ, ವೀರಪ್ಪ ಮೊಯ್ಲಿ ಸೇರಿ ಅನೇಕರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಆದರೆ, ಇಂದಿರಾ ಗಾಂಧಿ ಮತ್ತವರ ಕುಟುಂಬದವರು ರಾಜ್ಯದ ಈ ಭಾಗದಲ್ಲಿ ಪ್ರವಾಸ ಕೈಗೊಂಡರೂ ಮಂತ್ರಾಲಯಕ್ಕೆ ಭೇಟಿ ನೀಡಿರಲಿಲ್ಲ. ಇದೇ ಮೊದಲ ಬಾರಿ ಗಾಂಧಿ ಕುಟುಂಬದ ರಾಹುಲ್ ಅವರು ಮಂತ್ರಾಲಯಕ್ಕೆ ಆಗಮಿಸುತ್ತಿದ್ದು, ಹೆಚ್ಚು ಮಹತ್ವ ಪಡೆದಿದೆ. ಭಾರತ ಐಕ್ಯತಾ ಯಾತ್ರೆ, ಮಂತ್ರಾಲಯ ಕ್ಷೇತ್ರದ ಮೂಲಕವೇ ಸಾಗುವಂತೆ ಮಾಡುವುದು ಹಾಗೂ ಶ್ರೀ ಮಠಕ್ಕೆ ಗಾಂಧಿ ಕುಟುಂಬದ ವ್ಯಕ್ತಿಯೊಬ್ಬರು ಐತಿಹಾಸಿಕ ಯಾತ್ರೆ ವೇಳೆ ಭೇಟಿ ಕಾರ್ಯಕ್ರಮ ನಿಗದಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯಲು ಆಂಧ್ರ ಕಾಂಗ್ರೆಸ್ ಮುಂದಾಗಿದೆ.












Click it and Unblock the Notifications