ಮಂಗಳವಾರ ಬೆಂಗಳೂರಿಗೆ ಬರಲಿದ್ದಾರೆ ಅತೃಪ್ತ ಶಾಸಕರು
ಪುಣೆ, ಜುಲೈ 27: ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅತೃಪ್ತ ಶಾಸಕರು ಪುಣೆಯಿಂದ ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಜುಲೈ 6 ರಂದು ರಾಜೀನಾಮೆ ನೀಡಿ ಅವರೆಲ್ಲರೂ ಮುಂಬೈಗೆ ತೆರಳಿದ್ದರು. ಅಲ್ಲಿಂದ ಈಗ ಪುಣೆಗೆ ವಾಸ್ತವ್ಯ ಬದಲಾಯಿಸಿದ್ದಾರೆ.
ಸೋಮವಾರ ಯಡಿಯೂರಪ್ಪ ಅವರು ಬಹುಮತ ಸಾಬೀತು ಮಾಡಲಿದ್ದು, ಅಂದು ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಪಕ್ಷಗಳು ತಂತಮ್ಮ ಶಾಸಕರಿಗೆ ವ್ಹಿಪ್ ನೀಡಲಿವೆ. ಹಾಗಾಗಿ ಅಂದು ಬಾರದೆ, ಮಾರನೇಯ ದಿನವಾದ ಮಂಗಳವಾರ ನಗರಕ್ಕೆ ಅವರು ವಾಪಸ್ ಬರಲಿದ್ದಾರೆ.
ಮಂಗಳವಾರ ನಗರಕ್ಕೆ ಬಂದ ನಂತರ ಬುಧವಾರ ಹದಿನೈದೂ ಜನ ಶಾಸಕರು ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದು, ತಾವು ರಾಜೀನಾಮೆ ನೀಡಿದ ಉದ್ದೇಶ, ನಮ್ಮ ಮುಂದಿನ ನಡೆ ಇನ್ನಿತರೆ ಸಂಗತಿಗಳ ಬಗ್ಗೆ ತಿಳಿಸಲಿದ್ದಾರೆ.

ಅತೃಪ್ತ ಶಾಸಕರ ಜೊತೆಗೆ ಪುಣೆ ಹೊಟೆಲ್ನಲ್ಲಿದ್ದ ಕಾಂಗ್ರೆಸ್ ಶಾಸಕ ಶೀವರಾಮ್ ಹೆಬ್ಬಾರ್ ಅವರು ಈಗಾಗಲೇ ವಾಪಸ್ ಬಂದಿದ್ದು, ಇನ್ನು 12 ಶಾಸಕರು ಪುಣೆ ಹೊಟೆಲ್ನಲ್ಲಿ ತಂಗಿದ್ದಾರೆ. ಈ ಶಾಸಕರು ಕೆಲವು ದಿನಗಳ ಹಿಂದೆಯಷ್ಟೆ ಮುಂಬೈ ಹೊಟೆಲ್ನಿಂದ ತಮ್ಮ ವಾಸ್ತವ್ಯವನ್ನು ಪುಣೆಗೆ ಬದಲಾಯಿಸಿದ್ದಾರೆ.
ಅತೃಪ್ತ ಶಾಸಕರಲ್ಲಿ ಇಬ್ಬರು ಸಿದ್ದರಾಮಯ್ಯ ಅವರ ಸಂಪರ್ಕದಲ್ಲಿದ್ದಾರೆ ಎಂದು ಇಂದು ಎಂ.ಬಿ.ಪಾಟೀಲ್ ಅವರು ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು ಎಂದಿರುವ ಅತೃಪ್ತರು, ನಾವು ಒಗ್ಗಟ್ಟಾಗಿದ್ದೇವೆ. ನಾವು ಸಿದ್ದರಾಮಯ್ಯ ಸಂಪರ್ಕದಲ್ಲಿ ಇಲ್ಲ ಎಂದು ಅತೃಪ್ತ ಶಾಸಕರು ಸ್ಪಷ್ಟಪಡಿಸಿದ್ದಾರೆ.
ಅತೃಪ್ತ ಶಾಸಕರಲ್ಲಿ ಒಬ್ಬರಾದ ಎಚ್.ವಿಶ್ವನಾಥ್ ಅವರು, 'ರಾಜೀನಾಮೆ ಕುರಿತು ಪುಸ್ತಕ ಬರೆಯುವುದಾಗಿ ಈಗಾಗಲೇ ಹೇಳಿದ್ದಾರೆ. ರಾಜೀನಾಮೆಗೆ ಕಾರಣ ಸೇರಿದಂತೆ ಇನ್ನುಳಿದ ಅಂಶಗಳನ್ನು ಅದರಲ್ಲಿ ಉಲ್ಲೇಖಿಸುವುದಾಗಿ ಅವರು ಹೇಳಿದ್ದಾರೆ'.












Click it and Unblock the Notifications