ಕಾಂಗ್ರೆಸ್ ಸೇರುವ ಕಸರತ್ತಿನಿಂದ ಹಿಂದೆ ಸರಿದ ಪ್ರಶಾಂತ್ ಕಿಶೋರ್
ಬಿಹಾರ ಮೇ 5: ಕಾಂಗ್ರೆಸ್ ಸೇರುವ ಕಸರತ್ತಿನಿಂದ ಹಿಂದೆ ಸರಿದಿರುವ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಬಿಹಾರದಿಂದ ತಮ್ಮ ರಾಜಕೀಯ ಹೊಸ ಯಾತ್ರೆ ಶುರು ಮಾಡುವುದಾಗಿ ಘೋಷಿಸಿದ್ದಾರೆ.
ಹೊಸ ರಾಜಕೀಯ ಪಕ್ಷವನ್ನು ಘೋಷಿಸುವುದನ್ನು ನಿಲ್ಲಿಸಿರುವುದಾಗಿ ಹೇಳಿದ ಅವರು ಬಿಹಾರದಲ್ಲಿ ಹೊಸ ರಾಜ್ಯವನ್ನು ನಿರ್ಮಿಸಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದಾಗಿ ಹೇಳಿದ್ದಾರೆ. ಆದಷ್ಟು ಜನರನ್ನು ಭೇಟಿ ಮಾಡಲು ಅಕ್ಟೋಬರ್ 2 ರಿಂದ 3,000 ಕಿ.ಮೀ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಸದ್ಯದಲ್ಲಿ ಬಿಹಾರದಲ್ಲಿ ಯಾವುದೇ ಚುನಾವಣೆಗಳಿಲ್ಲ. ಆದ್ದರಿಂದ ಮುಂದಿನ ಮೂರ್ನಾಲ್ಕು ವರ್ಷಗಳು ಜನರನ್ನು ತಲುಪುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ನೆಲಕಚ್ಚಿರುವ 135 ವರ್ಷಗಳ ಹಳೆಯ ಕಾಂಗ್ರೆಸ್ಗೆ ಕಾಯಕಲ್ಪ ನೀಡಿ ಮೇಲಕ್ಕೆತ್ತಲು ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದರು. ಮಾತ್ರವಲ್ಲದೆ ಸೋನಿಯಾ ಗಾಂಧಿ ಜತೆಗೆ ಹಲವು ಸುತ್ತಿನ ಸಭೆ ನಡೆಸಿದ್ದರು. ಹೀಗಾಗಿ ಅವರು ಕಾಂಗ್ರೆಸ್ ಸೇರುವ ವದಂತಿಯೂ ಹರಡಿತ್ತು. ಆದರೀಗ ಕಾಂಗ್ರೆಸ್ನ ಆಂತರಿಕ ಗೊಂದಲ ಅರ್ಥ ಮಾಡಿಕೊಂಡ ಬಳಿಕ ಪ್ರಶಾಂತ್ ಬಂದ ಆಹ್ವಾನವನ್ನೂ ನಿರಾಕರಿಸಿ ದೂರ ಸರಿದಿದ್ದಾರೆ ಎನ್ನಲಾಗುತ್ತಿದೆ. ಈಗ ತಮ್ಮದೇ ಆದ ಪ್ರತ್ಯೇಕ ರಾಜಕೀಯ ಹೊಸ ಯಾತ್ರೆ ಶುರು ಮಾಡುವ ಕುರಿತು ಅವರು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.

''ಹತ್ತು ವರ್ಷಗಳಿಂದ ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ರೀತಿಯಲ್ಲಿ ಭಾಗಿಯಾಗುವುದಕ್ಕಾಗಿ ನಡೆದ ಅನ್ವೇಷಣೆ ಮತ್ತು ಜನಪರ ನೀತಿ ರೂಪಿಸುವಲ್ಲಿ ನೀಡಿದ ನೆರವು ಏರುಪೇರಿನ ರೋಲರ್ಕೋಸ್ಟರ್ನಂತಿತ್ತು. ಈಗ ನಾನು ಪ್ರಯಾಣದ ಪುಟ ತಿರುವುತ್ತಿದ್ದಂತೆ ಹೊಸ ಸತ್ಯಗಳು ಗೋಚರಿಸಿವೆ. ನಿಜವಾದ ಒಡೆಯರಾದ ಜನರ ಬಳಿಗೆ ಹೋಗಲು, ವಿಚಾರಗಳನ್ನು ಸರಿಯಾಗಿ ತಿಳಿಯಲು ಹಾಗೂ ಉತ್ತಮ ಜನಾಡಳಿತ ಮಾರ್ಗದಲ್ಲಿ ಸಾಗಲು ಇದು ಸಕಾಲ ಎನ್ನುವುದು ತೋರುತ್ತಿದೆ. ಅಂತಹದ್ದೊಂದು ಯಾತ್ರೆಯ ಆರಂಭ ಬಿಹಾರದಿಂದ ಆಗಲಿದೆ,'' ಎಂದು ಹೇಳಿದ್ದಾರೆ.

ಆದರೆ, ಪ್ರಶಾಂತ್ ಕಿಶೋರ್ ಎಲ್ಲಿಯೂ ತಾವು ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಸುಳಿವು ಬಿಟ್ಟುಕೊಟ್ಟಿಲ್ಲ. ಇರುವ ಪಕ್ಷದಲ್ಲಿ ಮರು ಸೇರ್ಪಡೆಯಾಗುವ ಮಾಹಿತಿಯನ್ನೂ ನೀಡಿಲ್ಲ. ಆದರೆ ರಾಜಕೀಯ ಹೊಸ ಯಾತ್ರೆ ಶುರುಮಾಡುವುದಾಗಿ ಹೇಳುವ ಮೂಲಕ ತಾವು ಕಾಂಗ್ರೆಸ್ ಸೇರುತ್ತಾರೆನ್ನುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಬಿಹಾರವು ಪ್ರಶಾಂತ್ ಕಿಶೋರ್ ಅವರ ತವರು ರಾಜ್ಯ. ಈ ಮೊದಲು ಅವರು ಅಲ್ಲಿಂದಲೇ ರಾಜಕೀಯ ಸಾಹಸ ಆರಂಭಿಸಿದ್ದರು. ಜೆಡಿಯು ಸೇರುವ ಮೂಲಕ ಸಕ್ರಿಯ ರಾಜಕಾರಣ ಶುರು ಮಾಡಿದ್ದರು. ಆದರೆ, ನಿತೀಶ್ ಕುಮಾರ್ ಅವರ ಜೊತೆಗಿನ ಹೊಂದಾಣಿಕೆ ಕೊರತೆಯಿಂದ ಅವರು ಕೆಲವೇ ತಿಂಗಳಲ್ಲಿ ಹೊರ ಬಂದಿದ್ದರು.












Click it and Unblock the Notifications