ಬಿಜೆಪಿ, ಜೆಡಿಯು ಮೈತ್ರಿಯಲ್ಲಿ ಬಿರುಕು; ಮೋದಿಗೆ ಸ್ವಾಗತವಿಲ್ಲ!
ಪಾಟ್ನಾ, ಜುಲೈ 12: ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿ ಮೈತ್ರಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಹಲವು ಬಾರಿ ಸಾಬೀತಾಗಿದೆ. ಮಂಗಳವಾರ ನಡೆದಿರುವ ಘಟನೆಯೊಂದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪಾಟ್ನಾಗೆ ಭೇಟಿ ನೀಡಬೇಕಿತ್ತು. ಆದರೆ ಈ ಬಗ್ಗೆ ಬಿಹಾರ ಸರ್ಕಾರ ಯಾವುದೇ ಪತ್ರಿಕೆಗಳಿಗೆ ಸ್ವಾಗತ ಜಾಹೀರಾತುಗಳನ್ನು ನೀಡಿಲ್ಲ. ಆದರೆ ಬಿಜೆಪಿಯೇತರ ಪಕ್ಷದ ಸರ್ಕಾರವಿರುವ ಜಾರ್ಖಂಡ್ನಲ್ಲಿ ಪ್ರಧಾನಿಗೆ ಸ್ವಾಗತ ಕೋರುವ ದೊಡ್ಡ ಜಾಹೀರಾತುಗಳನ್ನು ನೀಡಲಾಗಿದೆ. ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಿದ್ದಾರೆ.
ಈ ಹಿಂದೆಯೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಕೇಂದ್ರದ ಬಿಜೆಪಿ ಸರ್ಕಾರದ ಹಲವು ಯೋಜನೆಗಳ ವಿರುದ್ಧ ಮಾತನಾಡಿದ್ದರು. ಇತ್ತೀಚೆಗೆ ಘೋಷಣೆಯಾದ ಅಗ್ನಿಪಥ್ ಯೋಜನೆಯಲ್ಲಿ ನಾಲ್ಕು ವರ್ಷಗಳ ಕಾಲ ಮಾತ್ರ ಯುವಕರಿಗೆ ಉದ್ಯೋಗ ನೀಡುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು.

ಮಿತ್ರ ಪಕ್ಷಕ್ಕಿಂತ ಹೆಚ್ಚಾಗಿ ನಿತೀಶ್ ಕುಮಾರ್ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಬಿಜೆಪಿ ಕೂಡ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುವನ್ನು ತನ್ನ ಮಿತ್ರಪಕ್ಷಗಳ ಸ್ಥಾನದಿಂದ ಹೊರಗಿಟ್ಟಿತ್ತು. ಜೆಡಿಯು ಏಕಾಂಗಿಯಾಗಿ ಚುನಾವಣೆ ಎದುರಿಸಿತ್ತು.
ಜೆಡಿಯು ನಾಯಕರು ಹೇಳಿದ್ದೇನು?; ಪ್ರಧಾನಿ ಭೇಟಿ ವೇಳೆ ಸ್ವಾಗತ ಜಾಹೀರಾತುಗಳು ನೀಡದಿರುವುದರ ಕುರಿತು ಹಿರಿಯ ಜೆಡಿಯು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. "ಇದು ಉದ್ದೇಶಪೂರ್ವಕವಾಗಿ ಮಾಡಿರುವುದಲ್ಲ" ಎಂದು ಹೇಳಿದ್ದಾರೆ.

ಪಾಟ್ನಾಗೆ ಸ್ಪೀಕರ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಭೇಟಿ ನೀಡುತ್ತಿದ್ದು, ಅದಕ್ಕಾಗಿಯೇ ವಿಧಾನಸಭೆ ಸಚಿವಾಲಯ ಸಕ್ರಿಯವಾಗಿದೆ. ರಾಜ್ಯ ಸರ್ಕಾರದ ಇಲಾಖೆಗಳಿಂದ ಏನು ಸಹಕಾರ ನಿರೀಕ್ಷಿಸಲಾಗಿತ್ತೋ? ಅದನ್ನೆಲ್ಲಾ ನೀಡಲಾಗಿದೆ ಎಂದು ಜೆಡಿಯು ಮುಖಂಡರೊಬ್ಬರು ತಿಳಿಸಿದ್ದಾರೆ.
ಇದರ ಜೊತೆಗೆ ಸರ್ಕಾರ ಜಾಹೀರಾತು ನೀಡದಿದ್ದರೂ, ಹಿಂದೂ ಜಾಗರಣ್ ಮಂಚ್ ಎಂಬ ಸಂಘಟನೆಯನ್ನು ಪ್ರತಿನಿಧಿಸುತ್ತಿರುವ ಉದ್ಯಮಿ ಜೀವನ್ ಕುಮಾರ್ ಎಂಬುವವರು ನೀಡಿರುವ ಪೂರ್ಣ ಪುಟದ ಜಾಹೀರಾತು ಗಮನ ಸೆಳೆದಿದೆ.
ಪಾಟ್ನಾ ಪ್ರವಾಸದಲ್ಲಿ ಪ್ರಧಾನಿ ಮೋದಿ ವಿಧಾನಸೌಧ ಕಟ್ಟಡಕ್ಕೆ 100 ವರ್ಷ ಪೂರೈಸಿದ ಸಮಾರೋಪ ಸಮಾರಂಭದ ಅಂಗವಾಗಿ ಕಟ್ಟಡದ ಆವರಣದಲ್ಲಿ ಶತಮಾನೋತ್ಸವ ಸ್ತಂಭವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ವಸ್ತುಸಂಗ್ರಹಾಲಯಕ್ಕೂ ಅಡಿಪಾಯ ಹಾಕಲಿದ್ದಾರೆ.
ಪಾಟ್ನಾಗೆ ಬರುವ ಮೊದಲು, ಪ್ರಧಾನಿ ಮೋದಿ ಜಾರ್ಖಂಡ್ನ ದಿಯೋಘರ್ನಲ್ಲಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಜೊತೆಗೆ ಕೆಲವು ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಹಲವು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ.












Click it and Unblock the Notifications