ನಿತೀಶ್ ಕುಮಾರ್ ಅವರ 10 ವರ್ಷಗಳ ಆಡಳಿತಾವಧಿ ವ್ಯರ್ಥ ಮಾಡಿದ ಯುಪಿಎ
ಬಿಹಾರ, ಅಕ್ಟೋಬರ್ 23: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹತ್ತು ವರ್ಷಗಳ ಆಡಳಿತಾವಧಿಯನ್ನು ಹಿಂದಿನ ಯುಪಿಎ ಸರ್ಕಾರ ವ್ಯರ್ಥಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಅವಧಿಯಲ್ಲಿ ಬಿಹಾರದಲ್ಲೂ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದರು. 1990ರಿಂದ 15 ವರ್ಷ ಆರ್ಜೆಡಿ ಆಡಳಿತವಿತ್ತು. 2005ರಿಂದ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಎನ್ಡಿಎ ಸರ್ಕಾರಗಳ ವಿವಿಧ ಉಪಕ್ರಮಗಳ ಕುರಿತು ಮಾತನಾಡಿದ ಅವರು, ಲಾಲು ಪ್ರಸಾದ್ ಯಾದವ್ ಅವರ ಆರ್ಜೆಡಿಯ 15 ವರ್ಷಗಳ ಆಡಳಿತದಲ್ಲಿ ಕೊಲೆ, ಸುಲಿಗೆ, ದೌರ್ಜನ್ಯ ಸೇರಿದಂತೆ ಹಲವು ಅಪರಾಧಗಳು ನಡೆದಿವೆ ಎಂದರು.

ನಿತೀಶ್ ಕುಮಾರ್ ಅವರ 10 ವರ್ಷಗಳ ಆಡಳಿತಾವಧಿಯನ್ನು ಯುಪಿಎ ವ್ಯರ್ಥಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಬಿಹಾರವನ್ನು ಅಭಿವೃದ್ಧಿಪಡಿಸಲು ನಿತೀಶ್ ಕುಮಾರ್ಗೆ ಯುಪಿಎ ಸರ್ಕಾರ ಸಹಕಾರ ನೀಡಿಲ್ಲ, ಬದಲಾಗಿ ಎಲ್ಲಾ ಕೆಲಸಗಳಲ್ಲೂ ಅಡ್ಡಗಾಲು ಹಾಕಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತವಾಗಿರದಿದ್ದಿದ್ದರೆ ರಾಜ್ಯದಲ್ಲಿ ಕೊರೋನಾದಿಂದ ಇನ್ನಷ್ಟು ನಾಗರಿಕರು ಮೃತಪಡುತ್ತಿದ್ದರು, ಊಹಿಸಲು ಸಾಧ್ಯವಿಲ್ಲದಷ್ಟು ತೊಂದರೆ, ಪ್ರಾಣಹಾನಿ, ಆರೋಗ್ಯ ಸಮಸ್ಯೆಯುಂಟಾಗುತ್ತಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಮೊದಲು ಬಿಹಾರ ಮಂದಿ ಅಪರಾಧ ಮತ್ತು ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದರು. ಬಡವರಿಗೆ ಮೀಸಲಿಟ್ಟಿದ್ದ ಹಣ ಭ್ರಷ್ಟಾಚಾರಿಗಳ ಕೈಸೇರುತ್ತಿತ್ತು. ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಬಂದ ಮೇಲೆ ಅದನ್ನು ಪತ್ತೆಹಚ್ಚಿ ಭ್ರಷ್ಟಾಚಾರವನ್ನು ತಗ್ಗಿಸಿತು. ಕೊರೊನಾ ಸಮಯದಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಉಚಿತ ಆಹಾರ ವಿತರಿಸಿದೆ ಎಂದು ಹೇಳಿದರು.
ಬಿಹಾರ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ಎಲ್ಲಾ ಪೂರ್ವ ಸಮೀಕ್ಷೆಗಳು ಎನ್ ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದೇ ಸಮೀಕ್ಷೆಗಳು ಹೇಳುತ್ತಿವೆ, ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಭದ್ರತೆ ಮತ್ತು ಸುರಕ್ಷತೆ ವಿಚಾರದಲ್ಲಿ ಬಿಹಾರಿಗಳು ಎಲ್ಲರಿಗಿಂತ ತುಸು ಮುಂದೆ.ಚೀನಾ ಜೊತೆ ಗಲ್ವಾನ್ ಕಣಿವೆ ಸಂಘರ್ಷ ಮತ್ತು ಕಳೆದ ವರ್ಷದ ಪುಲ್ವಾಮಾ ದಾಳಿಯನ್ನು ಪ್ರಸ್ತಾಪಿಸಿದ ಮೋದಿ, ಗಲ್ವಾನ್ ಕಣಿವೆಯಲ್ಲಿ ಬಿಹಾರದ ಯೋಧರು ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಕೂಡ ಬಿಹಾರದ ಪುತ್ರರು ಕೆಚ್ಚೆದೆಯಿಂದ ಹೋರಾಡಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.












Click it and Unblock the Notifications