ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಹಲವು ಪಕ್ಷಗಳು ಬಿಜೆಪಿ ತೊರೆದಿವೆ; ತೇಜಸ್ವಿ ಯಾದವ್
ಪಾಟ್ನಾ, ಸೆ. 25; ''ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಜೆಡಿಯು, ಅಕಾಲಿದಳ ಮತ್ತು ಶಿವಸೇನೆ ಬಿಜೆಪಿ ನೇತೃತ್ವದ ಎನ್ಡಿಎ ತೊರೆದಿವೆ'' ಎಂದು ಆರ್ಜೆಡಿ ನಾಯಕ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.
ಮಾಜಿ ಉಪಪ್ರಧಾನಿ ದೇವಿಲಾಲ್ ಅವರ ಜನ್ಮದಿನದ ಅಂಗವಾಗಿ ಐಎನ್ಎಲ್ಡಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು ಸುಳ್ಳು ಹೇಳಿಕೆಗಳು ಮತ್ತು ಭರವಸೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿಯನ್ನು "ಬಡ್ಕಾ ಜೂತಾ ಪಾರ್ಟಿ" (ದೊಡ್ಡ ಸುಳ್ಳು ಪಕ್ಷ) ಎಂದು ಕರೆದಿದ್ದಾರೆ..
ನಗರದಲ್ಲಿ ವಿಮಾನ ನಿಲ್ದಾಣವಿಲ್ಲದಿದ್ದರೂ ಗೃಹ ಸಚಿವ ಅಮಿತ್ ಶಾ ಅವರು ಬಿಹಾರದ ಪುರ್ನಿಯಾದಲ್ಲಿ ತಮ್ಮ ಇತ್ತೀಚಿನ ಸಾರ್ವಜನಿಕ ಸಭೆಯಲ್ಲಿ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರ್ಯಾಲಿಯಲ್ಲಿ ಮುಂದೆ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, 'ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಬೇಕು' ಎಂದು ಕರೆ ನೀಡಿದರು. ಈ "ವಿರೋಧ ಪಕ್ಷಗಳ ಒಗ್ಗಟ್ಟು" 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇಸರಿ ಪಕ್ಷವು ಕೆಟ್ಟದಾಗಿ ಸೋಲುವುದನ್ನು ಖಚಿತಪಡಿಸುತ್ತದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಜೆಪಿಯೇತರ ಪಕ್ಷಗಳೆಲ್ಲ ಒಗ್ಗೂಡಿದರೆ ದೇಶವನ್ನು ನಾಶ ಮಾಡುವ ಕೆಲಸ ಮಾಡುತ್ತಿರುವವರನ್ನು ಕಿತ್ತೊಗೆಯಬಹುದು ಎಂದ ನಿತೀಶ್ ಕುಮಾರ್, ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಯಾವುದೇ ಜಗಳವಿಲ್ಲ, ಬಿಜೆಪಿ ಗಲಭೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ತೃತೀಯ ರಂಗಕ್ಕೆ ಶಕ್ತಿ ಪ್ರದರ್ಶನದಲ್ಲಿ, ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕದಳವು ತನ್ನ 'ದೇವಿ ಲಾಲ್ ಸಮಾನ್ ರ್ಯಾಲಿ'ಗೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಿದೆ.
ನಿತೀಶ್ ಕುಮಾರ್, ಶರದ್ ಪವಾರ್, ಕೆಸಿ ತ್ಯಾಗಿ, ಸುಖ್ಬೀರ್ ಸಿಂಗ್ ಬಾದಲ್, ಸೀತಾರಾಮ್ ಯೆಚೂರಿ, ತೇಜಸ್ವಿ ಯಾದವ್, ಎನ್ಸಿ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಶಿವಸೇನೆಯ ಅರವಿಂದ್ ಸಾವಂತ್ ಸೇರಿದಂತೆ ವಿರೋಧ ಪಕ್ಷದ ಉನ್ನತ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
2024 ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಆಡಳಿತಾರೂಢ ಬಿಜೆಪಿ ವಿರುದ್ಧ ಸಮಾನ ಮನಸ್ಕ ಶಕ್ತಿಗಳ ಬಲವರ್ಧನೆಯನ್ನು ಗುರುತಿಸುವ ಐತಿಹಾಸಿಕ ಸಭೆ ಇದಾಗಿದೆ ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ.












Click it and Unblock the Notifications