'ಮದ್ಯ ನಿಷೇಧದ ಬಳಿಕ ಅಪರಾಧ ಪ್ರಮಾಣ ಇಳಿಕೆ': ನಿತೀಶ್ ಕುಮಾರ್
ಪಾಟ್ನಾ, ನವೆಂಬರ್ 15: ಮದ್ಯಮಾರಾಟ ನಿಷೇಧ ಮಾಡಿದ ಬಳಿಕ ಬಿಹಾರದಲ್ಲಿ ಅಪರಾಧ ಪ್ರಮಾಣವು ಇಳಿಕೆ ಆಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಹಾಗೆಯೇ ಬಿಹಾರದಲ್ಲಿ ಮದ್ಯ ನಿಷೇಧ ಮಾಡಿರುವುದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಬಿಹಾರದಲ್ಲಿ ಮದ್ಯ ನಿಷೇಧವನ್ನು ಎಎನ್ಐ ಬಳಿ ಉಲ್ಲೇಖ ಮಾಡಿ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, "ಬಿಹಾರದಲ್ಲಿ ಮದ್ಯ ನಿಷೇಧ ಮಾಡಿದ ಬಳಿಕ ಅದನ್ನು ಹಲವಾರು ಮಂದಿ ವಿರೋಧ ಮಾಡಿದ್ದಾರೆ. ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದ ಬಳಿಕ ರಾಜ್ಯದಲ್ಲಿ ಅಪರಾಧ ಪ್ರಮಾಣ ಇಳಿಕೆ ಆಗಿದೆ," ಎಂದು ತಿಳಿಸಿದ್ದಾರೆ.
"ನಾನು ಬಿಹಾರದಲ್ಲಿ ಮದ್ಯವನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ ಬಳಿಕ ಹಲವಾರು ಮಂದಿ ನನ್ನ ವಿರುದ್ಧ ಮಾತನಾಡಿದರು. ಆದರೆ ನಾನು ಮದ್ಯ ನಿಷೇಧದ ಬಗ್ಗೆ ಗಂಭೀರವಾಗಿ ನಿರ್ಧಾರ ಕೈಗೊಂಡಿದ್ದೇನೆ. ಯಾರು ನನ್ನ ವಿರುದ್ಧವಾಗಿ ಇದ್ದರೋ ಅವರ ಬಗ್ಗೆ ನನಗೆ ಬೇಸರವಾಗುತ್ತದೆ," ಎಂದು ಕೂಡಾ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.

"ಬಿಹಾರದಲ್ಲಿ ಮದ್ಯ ನಿಷೇಧ ಮಾಡಿರುವುದು ಬೇರೆಯೇ ವಿಚಾರ. ಎಲ್ಲರಿಗೂ ಅವರವರದ್ದೇ ಆದ ಭಾವನೆಗಳು ಇರುತ್ತದೆ. ಮಹಿಳೆಯರಿಗೆ ಒಂದು ಭಾವನೆ ಹಾಗೂ ಪುರುಷರಿಗೆ ಒಂದು ಭಾವನೆ ಇರುತ್ತದೆ. ಆದರೆ ನಾವು ಎಲ್ಲರ ಭಾವನೆಯನ್ನು ಕೇಳುತ್ತೇವೆ. ನಾನು ಮದ್ಯ ನಿಷೇಧದ ಪರವಾಗಿ ನಿಲ್ಲುತ್ತೇನೆ," ಎಂದರು.
"ಬಿಹಾರದಲ್ಲಿ ಅಪರಾಧ ಪ್ರಮಾಣವು ಏರಿಕೆ ಆಗಿದ್ದರೆ ಎಂಬ ವಿಚಾರ ಬರುವುದಿಲ್ಲ. ಬಿಹಾರದಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಆಗಿದೆ. ಯಾವುದೇ ಅಪರಾಧ ಪ್ರಕರಣಗಳು ನಡೆದರೆ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ. ಆಡಳಿತ ಹಾಗೂ ಪೊಲೀಸರು ಬಹಳ ಎಚ್ಚರಿಕೆಯಿಂದ ಇದ್ದಾರೆ. ಏನೇ ನಡೆದರೂ ಆಡಳಿತ ಹಾಗೂ ಪೊಲೀಸರು ಅಗತ್ಯ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ," ಎಂದು ವಿವರಿಸಿದರು.
"ನಕ್ಸಲರ ದಾಳಿ ನಡೆದಿದೆ, ಆದರೆ ಅಪರಾಧ ಪ್ರಮಾಣ ಇಳಿದಿದೆ"
"ಇನ್ನು ಕೆಲವು ಪ್ರದೇಶಗಳಲ್ಲಿ ಕೆಲವು ಘಟನೆಗಳು ನಡೆಯುತ್ತಿದೆ. ನಕ್ಸಲರ ದಾಳಿಯ ಬಗ್ಗೆ ವರದಿಗಳು ಆಗಿದೆ. ಈ ಬಗ್ಗೆ ನಾವು ತನಿಖೆಯನ್ನು ನಡೆಸುತ್ತೇವೆ. ಇದು ಬೇರೆಯೇ ವಿಚಾರ. ಆದರೆ ಸಾಮಾನ್ಯವಾಗಿ ಬಿಹಾರದಲ್ಲಿ ಅಪರಾಧ ಪ್ರಮಾಣವು ಇಳಿಕೆ ಆಗಿದೆ. ಅದರಲ್ಲೂ ಮುಖ್ಯವಾಗಿ ಬಿಹಾರದಲ್ಲಿ ಮದ್ಯವನ್ನು ನಿಷೇಧ ಮಾಡಿದ ಬಳಿಕ ಅಪರಾಧ ಪ್ರಮಾಣ ಇಳಿಕೆ ಆಗಿದೆ ಎಂದು ನಾನು ಹೇಳಬಹುದು," ಎಂದು ತಿಳಿಸಿದರು. ಬಿಹಾರದ ಗಯಾ ಜಿಲ್ಲೆಯ ಗ್ರಾಮವೊಂದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾವೋವಾದಿಗಳು ಹತ್ಯೆ ಮಾಡಿದ್ದಾರೆ.
ನಕಲಿ ಮದ್ಯ ಸೇವಿಸಿ ಹಲವಾರು ಮಂದಿ ಸಾವು
ಬಿಹಾರದಲ್ಲಿ ನಕಲಿ ಮದ್ಯ ಸೇವನೆ ಮಾಡಿ ಜನರು ಸಾವನ್ನಪ್ಪುತ್ತಿರುವ ಪ್ರಕರಣಗಳು ಅಧಿಕವಾಗುತ್ತಿದೆ. ನವೆಂಬರ್ ಮೊದಲ ವಾರದಲ್ಲಿ ಮೂರು ದಿನದಲ್ಲೇ ಮೂವತ್ತು ಮಂದಿ ಸಾವನ್ನಪ್ಪಿದ್ದರು. ಈ ವಿಚಾರದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗೋಷ್ಠಿಯನ್ನು ನಡೆಸಿ ಮಾತನಾಡಿದ ಆರ್ಜೆಡಿ ನಾಯಕ ಚಿರಾಗ್ ಪಾಸ್ವಾನ್, "ಬಿಹಾರದಲ್ಲಿ ಈಗಲೂ ಕೂಡಾ ಜನರಿಗೆ ಮದ್ಯ ಹೇಗೆ ಲಭ್ಯವಾಗುತ್ತಿದೆ ಎಂಬ ಬಗ್ಗೆ ನಿತೀಶ್ ಕುಮಾರ್ ಉತ್ತರವನ್ನು ನೀಡಲ್ಲ. ಬಿಹಾರದಲ್ಲಿ ಜನರಿಗೆ ನಿಷೇಧದ ನಡುವೆಯೂ ಮದ್ಯ ಲಭ್ಯವಾಗುವುದರ ಅಕ್ರಮದ ಹಿಂದೆ ಹಿರಿಯ ಅಧಿಕಾರಿಗಳು ಇದ್ದಾರೆ," ಎಂದು ಆರೋಪ ಮಾಡಿದ್ದರು.
2016 ರಿಂದ ಬಿಹಾರದಲ್ಲಿ ಮದ್ಯವನ್ನು ನಿಷೇಧ ಮಾಡಲಾಗಿದೆ. ಈ ವಿಚಾರದಲ್ಲಿ ನವೆಂಬರ್ 16 ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆಯನ್ನು ನಡೆಸಲಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆಯೂ ಮದ್ಯ ನಿಷೇಧದ ವಿಚಾರದಲ್ಲಿ ಬಿಹಾರದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಮದ್ಯ ನಿಷೇಧ ಮಾಡಿದ ಬಳಿಕ ರಾಜ್ಯದಲ್ಲಿನ ಬೆಳವಣಿಗೆಯ ಬಗ್ಗೆ ಚರ್ಚೆ ಮಾಡಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications