ಬಿಹಾರದಲ್ಲಿ ಸಚಿವರಾದ 3 ದಿನದಲ್ಲೇ ಮೇವಾಲಾಲ್ ಕುರ್ಚಿಗೆ ಕುತ್ತು!
ಪಾಟ್ನಾ, ನವೆಂಬರ್.18: ಬಿಹಾರದಲ್ಲಿ ನೂತನ ಸರ್ಕಾರದ ಸಂಪುಟ ರಚನೆಯಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಈಗಾಗಲೇ ರಾಜ್ಯದ ಶಿಕ್ಷಣ ಸಚಿವ ಸ್ಥಾನದಿಂದ ಮೇವಾಲಾಲ್ ಚೌಧರಿ ಅವರನ್ನು ಕೆಳಗಿಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬುಧವಾರ ಸಿಎಂ ನಿತೀಶ್ ಕುಮಾರ್ ಮತ್ತು ಶಿಕ್ಷಣ ಸಚಿವ ಮೇವಲಾಲ್ ಚೌಧರಿ ಭೇಟಿಯು ಸಾಕಷ್ಟು ಊಹಾಪೋಹಗಳನ್ನು ಹುಟ್ಟು ಹಾಕಿದೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ತಮ್ಮದೇ ಸಂಪುಟ ಸಚಿವರ ವಿರುದ್ಧ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳುತ್ತಾರೆಯೇ ಎಂದು ರಾಷ್ಟ್ರೀಯ ಜನತಾ ದಳವು ಪ್ರಶ್ನೆ ಮಾಡಿತ್ತು.
ಆರ್ ಜೆಡಿ ಆರೋಪದ ಬೆನ್ನಲ್ಲೇ ಪಾಟ್ನಾದ ಅನ್ನೆ ಮಾರ್ಗ್ ನಲ್ಲಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧಿಕೃತ ನಿವಾಸದಲ್ಲಿ ಉಭಯ ನಾಯಕರು ಭೇಟಿಯಾಗಿದ್ದರು. ನ.16ರಂದು ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೇವಾಲಾಲ್ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಲಾಗುತ್ತಿದೆ.

ಮೇವಾಲಾಲ್ ಚೌಧರಿ ವಿರುದ್ಧ ಭ್ರಷ್ಟಾಚಾರ ಆರೋಪ:
ಬಿಹಾರದ ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೇವಾಲಾಲ್ ಚೌಧರಿ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪವಿದೆ. 2017ರಲ್ಲಿ ಭಗಲ್ ಪುರ್ ಸಬುರ್ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಗಿ ಕಾರ್ಯ ನಿರ್ವಹಿಸುತತ್ತಿದ್ದ ಸಂದರ್ಭದಲ್ಲಿ ಭಾರಿ ಹಗರಣಗಳನ್ನು ಮಾಡಿರುವ ಆರೋಪವಿದೆ. ವಿಶ್ವವಿದ್ಯಾಲಯದ 161 ಸಹಾಯಕ ಪ್ರಾಧ್ಯಾಪಕರ ಅಕ್ರಮ ನೇಮಕ ಮತ್ತು ಕಿರಿಯ ವಿಜ್ಞಾನಿಗಳಿಂದ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಮೇವಾಲಾಲ್ ಚೌಧರಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿತ್ತು. ಸಹಾಯಕ ಪ್ರಾಧ್ಯಾಪಕರ ಅಕ್ರಮ ನೇಮಕಾತಿಯಷ್ಟೇ ಅಲ್ಲದೇ ಸಬೌರ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲೂ ಅಕ್ರಮ ಎಸಗಿರುವ ಬಗ್ಗೆ ಮೇವಾಲಾಲ್ ಚೌಧರಿ ವಿರುದ್ಧ ಆರೋಪಿಸಲಾಗಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವಧಿಯಲ್ಲಿ ತನಿಖೆ:
ಇದೀಗ ಭಾರತದ ರಾಷ್ಟ್ರಪತಿ ಆಗಿರುವ ರಾಮನಾಥ್ ಕೋವಿಂದ್ ಅವರು ಬಿಹಾರ ರಾಜ್ಯಪಾಲರಾಗಿದ್ದ 2017ರ ಅವಧಿಯಲ್ಲಿ ಮೇವಲಾಲ್ ಚೌಧರಿ ವಿರುದ್ಧ ತನಿಖೆಗೆ ಆದೇಶಿಸಲಾಗಿತ್ತು. ಹಿರಿಯ ಅಧಿಕಾರಿಗಳ ತಂಡ ನಡೆಸಿದ ತನಿಖೆಯಲ್ಲಿ ಮೇವಾಲಾಲ್ ಚೌಧರಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ನಿಜವೆಂದು ತಿಳಿದುಬಂದಿತ್ತು. ಹೀಗಿದ್ದರೂ ಬಿಹಾರದ ನೂತನ ಶಿಕ್ಷಣ ಸಚಿವ ಮೇವಾಲಾಲ್ ಚೌಧರಿ ಅವರು ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಿದ್ದಾರೆ.
ನಿತೀಶ್ ಕುಮಾರ್ ವಿರುದ್ಧ ಲಾಲೂ ಟ್ವೀಟ್ ಅಸ್ತ್ರ:
ಬಿಹಾರ ಚುನಾವಣೆ ಸಂದರ್ಭದಲ್ಲಿ ತೇಜಸ್ವಿ ಯಾದವ್ ತಮ್ಮ ಸರ್ಕಾರ ರಚನೆಯಾದಲ್ಲಿ ನಡೆಯುವ ಮೊದಲ ಸಂಪುಟ ಸಭೆಯಲ್ಲೇ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ನಿತೀಶ್ ಕುಮಾರ್ ಅವರು ಉದ್ಯೋಗ ಸೃಷ್ಟಿಯಲ್ಲೇ ಅಕ್ರಮವೆಸಗಿದ ಮೇವಾಲಾಲ್ ಚೌಧರಿಯವರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ತಮ್ಮ ಆದ್ಯತೆ ಯಾವುದಕ್ಕೆ ನೀಡುತ್ತೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಲಾಲೂ ಪ್ರಸಾದ್ ಯಾದವ್ ಕುಟುಕಿದ್ದಾರೆ.












Click it and Unblock the Notifications