ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ರೈತರ ಸಾಲ ಮನ್ನಾ: ರಾಹುಲ್
Recommended Video

ಪಾಟ್ನಾ, ಫೆಬ್ರವರಿ 3: ಕಾಂಗ್ರೆಸ್ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಬಗ್ಗೆ ಈಗಾಗಲೇ ಘೋಷಣೆ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರೆ ದೇಶದ ಎಲ್ಲ ರೈತರ ಸಾಲ ಮನ್ನಾ ಮಾಡುವುದಾಗಿ ಭಾನುವಾರ ಘೋಷಣೆ ಮಾಡಿದ್ದಾರೆ.
ಸಾಲ ಮನ್ನಾದ ಭರವಸೆಯು ಈ ಹಿಂದೆ ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಲು ಸಹಕಾರಿಯಾಗಿತ್ತು. "ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ರೈತರ ಸಾಲ ಮನ್ನಾ ಮಾಡಲಾಗುವುದು" ಎಂದು ಬಿಹಾರದ ಪಾಟ್ನಾದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಹೇಳಿದರು.
ಈ ಸಭೆಯಲ್ಲಿ ಕಾಂಗ್ರೆಸ್ ನ ಮಿತ್ರ ಪಕ್ಷಗಳ ನಾಯಕರಾದ ತೇಜಸ್ವಿ ಯಾದವ್, ಶರದ್ ಯಾದವ್ ಮತ್ತಿತರ ನಾಯಕರು ಇದ್ದರು. "ಮೋದಿ ಜೀ ಬಿಹಾರದ ರೈತರು ಹಾಗೂ ದೇಶದ ಇತರ ಭಾಗದ ರೈತರನ್ನು ಅವಮಾನಿಸಿದ್ದಾರೆ. ನೀವು ರೈತರನ್ನು ಅವಮಾನಿಸಿದರೆ, ಆ ನಂತರ ಅದಕ್ಕೆ ರೈತರು ಉತ್ತರ ನೀಡುತ್ತಾರೆ. ಈಗಾಗಲೇ ರೈತರು ಕಾಂಗ್ರೆಸ್ ಬೇಕು, ಬಿಜೆಪಿ ಬೇಡ ಎಂದು ಹೇಳುತ್ತಿದ್ದಾರೆ ಎಂದರು ರಾಹುಲ್.

ಫೆಬ್ರವರಿ ಒಂದನೇ ತಾರೀಕು ಮಧ್ಯಂತರ ಬಜೆಟ್ ಮಂಡಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ, ಸಣ್ಣ ಪ್ರಮಾಣದ ರೈತರಿಗೆ ಎರಡು ಸಾವಿರ ರುಪಾಯಿಯಂತೆ ಮೂರು ಕಂತಿನಲ್ಲಿ, ವರ್ಷಕ್ಕೆ ಆರು ಸಾವಿರ ರುಪಾಯಿಯನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡುವ ಯೋಜನೆ ತಂದಿದೆ. ಇದರಿಂದ ಸರಕಾರದ ಮೇಲೆ ವಾರ್ಷಿಕ ಎಪ್ಪತ್ತೈದು ಸಾವಿರ ಕೋಟಿ ರುಪಾಯಿ ವೆಚ್ಚದ ಹೊರೆ ಆಗಲಿದೆ.
ಆದರೆ, ಈ ಆರು ಸಾವಿರ ರುಪಾಯಿ ರೈತರಿಗೆ ನೀಡುವುದು 'ಕಡ್ಲೇಕಾಯಿ ಬೀಜ' ಕೊಟ್ಟಂಗೆ. ಯಾವುದಕ್ಕೂ ಸಾಲುವುದಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ಟೀಕೆ ಮಾಡಿತ್ತು.












Click it and Unblock the Notifications