"ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್-ಬಿಜೆಪಿ ಕುದುರೆ ವ್ಯಾಪಾರ?"
ಪಾಟ್ನಾ, ನವೆಂಬರ್.09: ಬಿಹಾರದ ಸ್ವಾಭಿಮಾನಿ ಜನರು ಯಾವುದೇ ಕಾರಣಕ್ಕೂ ತಮಗಾದ ಮೋಸವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಬಿಹಾರದ ಕಾಂಗ್ರೆಸ್ ವೀಕ್ಷಕರಾಗಿ ನೇಮಕಗೊಂಡಿರುವ ಅವಿನಾಶ್ ಪಾಂಡೆ ಸೋಮವಾರ ಹೇಳಿದ್ದಾರೆ.
ಪಾಟ್ನಾದಲ್ಲಿ ಮಾತನಾಡಿರುವ ಬಿಹಾರ ಚುನಾವಣಾ ಕಾಂಗ್ರೆಸ್ ವೀಕ್ಷಕ ಅವಿನಾಶ್ ಪಾಂಡೆ, ಸಿಎಂ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿಯೇ ಬಿಹಾರವನ್ನು ಅತ್ಯಂತ ಸ್ವಾಭಿಮಾನಿಗಳ ರಾಜ್ಯ ಎಂದು ಗುರುತಿಸಲಾಗಿದೆ. "ಬಿಹಾರದ ಜನರು ಏನು ಬೇಕಾದರೂ ಸರಿಹಿಸಿಕೊಳ್ಳುತ್ತಾರೆ. ಆದರೆ ವಿಶ್ವಾಸದ ಹೆಸರಿನಲ್ಲಿ ಮಾಡಿರುವ ಮೋಸವನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ, ಸಹಿಸಿಕೊಳ್ಳುವುದೂ ಇಲ್ಲ" ಎಂದು ಹೇಳಿದ್ದಾರೆ..
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಅಂತಿಮ ಹಂತದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟವು ಸಾಕಷ್ಟು ಪ್ರಯತ್ನಗಳನ್ನು ಮಾಡಿದವು. ಕುದುರೆ ವ್ಯಾಪಾರಕ್ಕೂ ತಂತ್ರ ರೂಪಿಸಿದ್ದವು ಎಂದು ಅವಿನಾಶ್ ಪಾಂಡೆ ಆರೋಪಿಸಿದ್ದಾರೆ.

ಬಿಹಾರಕ್ಕೆ ಕಾಂಗ್ರೆಸ್ಸಿನಿಂದ ಇಬ್ಬರು ವೀಕ್ಷಕರ ನೇಮಕ:
ರಾಷ್ಟ್ರೀಯ ಜನತಾ ದಳ(RJD) ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಧಿಕಾರ ಸಿಗುವುದು ನಿಶ್ಚಿತ ಎಂಬ ವರದಿಗಳು ಹೊರ ಬೀಳುತ್ತಿದ್ದಂತೆ ಅಖಿತ ಭಾರತ ಕಾಂಗ್ರೆಸ್ ಕಮಿಟಿ ಅಧ್ಯಕ್ಷೆ ಸೋನಿಯಾ ಗಾಂಧಿ ವೀಕ್ಷಕರನ್ನು ನೇಮಿಸಿದ್ದಾರೆ. ಬಿಹಾರದಲ್ಲಿ ಚುನಾವಣೋತ್ತರ ರಾಜಕೀಯ ಬೆಳವಣಿಗೆಗಳ ಮೇಲೆ ನಿಗಾ ವಹಿಸಲು ಹಾಗೂ ನಿರ್ವಹಿಸುವುದಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸರ್ಜೇವಾಲಾ ಮತ್ತು ಅವಿನಾಶ್ ಪಾಂಡೆರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.
ನವೆಂಬರ್.10 ಫಲಿತಾಂಶದ ಮೇಲೆ ಕಣ್ಣು:
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ಎಲ್ಲ ದೃಷ್ಟಿ ನೆಟ್ಟಿದೆ. ನವೆಂಬರ್.10ರಂದು 243 ಕ್ಷೇತ್ರಗಳ ರಾಜಕೀಯ ಭವಿಷ್ಯ ಹೊರಬೀಳಲಿದೆ. ಚುನಾವಣಾ ಫಲಿತಾಂಶ ಹೊರ ಬೀಳುವುದಕ್ಕೂ ಮೊದಲೇ ರಾಜಕೀಯ ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆ ಮುಂದಿನ ರಾಜಕೀಯ ತಂತ್ರಗಾರಿಕೆ ಮತ್ತು ಪ್ರಕ್ರಿಯೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಲಕ್ಷ್ಯ ನೆಟ್ಟಿದೆ. ಬಿಹಾರ ಚುನಾವಣೋತ್ತರ ವೀಕ್ಷಕರನ್ನಾಗಿ ರಂದೀಪ್ ಸರ್ಜೇವಾಲಾ ಮತ್ತು ಅವಿನಾಶ್ ಪಾಂಡೆರನ್ನು ನೇಮಿಸಿದ್ದರು.
2020ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. ಅಕ್ಟೋಬರ್.28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್.03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. ಶನಿವಾರ 3ನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ.












Click it and Unblock the Notifications