ಬಿಹಾರದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ: ಡಿಸಿಎಂ ತೇಜಸ್ವಿ ಯಾದವ್
ಪಾಟ್ನಾ, ಆಗಸ್ಟ್ 12: ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ 2020ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆರ್ಜೆಡಿ ಪ್ರಚಾರದ ನೇತೃತ್ವ ವಹಿಸಿದ್ದಾಗ ತಾವು ನೀಡಿದ್ದ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಭರವಸೆಯನ್ನು ಹೊಸದಾಗಿ ರಚಿಸಲಾದ ತಮ್ಮ ಸರ್ಕಾರವು ಈಡೇರಿಸುತ್ತದೆ ಎಂದು ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಮ್ಮ ನಾಯಕ ನಿತೀಶ್ ಕುಮಾರ್ ಅವರು ಉದ್ಯೋಗ ಸೃಷ್ಟಿಗೆ 'ಪ್ರಮುಖ ಆದ್ಯತೆ' ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ನಿತೀಶ್ ಜೊತೆ ಕೈಜೋಡಿಸದಂತೆ ಇತರೆ ಪಕ್ಷಗಳ ಮೇಲೆ ಬಿಜೆಪಿ ಒತ್ತಡ ಹಾಕಲು ಯತ್ನಿಸಿತ್ತು: ಜೆಡಿಯು ಆರೋಪ
ಜೆಡಿಯು ನಾಯಕ ನಿತೀಶ್ ಕುಮಾರ್ ಬುಧವಾರ ಎಂಟನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಿತೀಶ್ ಕುಮಾರ್ ಬಿಜೆಪಿ ನೇತೃತ್ವದ ಎನ್ಡಿಎ ಜೊತೆಗಿನ ಸಂಬಂಧ ಮುರಿದುಕೊಂಡು 'ಮಹಾಘಟಬಂಧನ್' ಸರ್ಕಾರವನ್ನು ರಚಿಸಲು ಕಾಂಗ್ರೆಸ್ ಸೇರಿದಂತೆ ಆರ್ಜೆಡಿ ಮತ್ತು ಇತರ ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದ್ದಾರೆ.
''ಸರಕಾರಿ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡುವ ಮೂಲಕ ನಾವು ಉದ್ಯೋಗ ಸೃಷ್ಠಿಸುವ ಕೆಲಸ ಪ್ರಾರಂಭಿಸುತ್ತೇವೆ. ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಿದ ನಂತರ ನಾವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತೇವೆ" ಎಂದು ಯಾದವ್ ಎಂದು ತಿಳಿಸಿದರು.
ಇದು ಕೇವಲ ಭರವಸೆಯಾಗಿರದೆ ಬಿಹಾರದಲ್ಲಿ ಉದ್ಯೋಗ ಸೃಷ್ಟಿಯ ಅಗತ್ಯಕ್ಕೆ ಮನ್ನಣೆಯಾಗಿದೆ ಎಂದು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದರು.
ಬಿಜೆಪಿಯಂತೆ ಪ್ರಚಾರ ಮಾಡುವುದು ನಮಗೆ ಗೊತ್ತಿಲ್ಲ; "ಸಮಸ್ಯೆಯೆಂದರೆ ಪ್ರಚಾರ ಮಾಡುವುದು ಹೇಗೆ ಎಂದು ನಮಗೆ ತಿಳಿದಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪ್ರಚಾರದಲ್ಲಿ ನಿಪುಣ. ಆದರೆ, ನಮ್ಮ ಸರ್ಕಾರದ ಕಾರ್ಯವೈಖರಿಯನ್ನು ನೋಡಿದ ನಂತರ ಜನರೇ ನಿರ್ಧರಿಸಲಿದ್ದಾರೆ" ಎಂದು ತೇಜಸ್ವಿ ಯಾದವ್ ಹೇಳಿದರು.
"ಇತ್ತೀಚೆಗೆ ನಿತೀಶ್ ಕುಮಾರ್ ಅವರನ್ನು ನಿಜವಾದ ಸಮಾಜವಾದಿ ಎಂದು ಕರೆದದ್ದು ಪ್ರಧಾನಿಯಲ್ಲವೇ? ಸಿಎಂ ಈಗ ಸೈದ್ಧಾಂತಿಕ ಗೆಳೆಯರ ಸಹಭಾಗಿತ್ವದಲ್ಲಿ ಸರ್ಕಾರವನ್ನು ಮುನ್ನಡೆಸುತ್ತಿರುವುದಕ್ಕೆ ಅವರು ಸಂತೋಷಪಡಬೇಕು," ಎಂದು ಯಾದವ್ ಟೀಕಿಸಿದರು.
"ನಾವೆಲ್ಲರೂ ಸಮಾಜವಾದಿಗಳು, ನಾವು ಹೋರಾಡಬಹುದು, ಆದರೆ ಹೃದಯದಲ್ಲಿ ನಾವು ಒಟ್ಟಿಗೆ ಇರುತ್ತೇವೆ," ಎಂದರು.
ನಿತೀಶ್ ಕುಮಾರ್, ಲಾಲು ಪ್ರಸಾದ್ ಅವರೊಂದಿಗೆ ಕೈಜೋಡಿಸಿದಾಗ ಮಹಾಘಟಬಂಧನ್ ಎಂಬ ಪದವು ಅಸ್ತಿತ್ವಕ್ಕೆ ಬಂದಿತು. ಅವರು ನಮ್ಮೊಂದಿಗೆ ಮರಳಿರುವುದು ನಮಗೆ ತುಂಬಾ ಖುಷಿ ತಂದಿದೆ" ಎಂದು 2015ರ ವಿಧಾನಸಭಾ ಚುನಾವಣೆಯಲ್ಲಿ ಪಾದಾರ್ಪಣೆ ಮಾಡಿ ಮಹಾಮೈತ್ರಿಕೂಟ ಸರ್ಕಾರದ ಉಪ ಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್ ಹೇಳಿದರು.