ಕಾಂಗ್ರೆಸ್ ಸೇರ್ಪಡೆಗೊಂಡ ಶರದ್ ಯಾದವ್ ಪುತ್ರಿ ಸುಭಾಷಿಣಿ
ಪಾಟ್ನಾ, ಅ. 14: ಮಹಾಘಟಬಂಧನ್, ಮಿತ್ರ ಲಾಲೂ ಪ್ರಸಾದ್ ಅವರಿಗೆ ಬೇಡವಾಗಿರುವ ಹಿರಿಯ ಮುಖಂಡ ಶರದ್ ಯಾದವ್ ಅವರಿಗೆ ಮತ್ತೊಂದು ಅಘಾತವಾಗಿದೆ. ಅವರ ಪುತ್ರಿ ಸುಭಾಷಿಣಿ ರಾಜ್ ರಾವ್ ಅವರು ಬುಧವಾರದಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಬಿಹಾರ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಝಾ, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಯಾದವ್ ಸಮ್ಮುಖದಲ್ಲಿ ಸುಹಾಸಿನಿ ಅಲ್ಲದೆ ಲೋಕ ಜನಶಕ್ತಿ ಪಕ್ಷದ ಮುಖಂಡ ಮಾಜಿ ಸಂಸದ ಕಾಳಿ ಪಾಂಡೆ ಕೂಡಾ ಭಾರತದ ಅತ್ಯಂತ ಪುರಾತನ ಪಕ್ಷ ಸೇರಿದರು. ಇಬ್ಬರಿಗೂ ಟಿಕೆಟ್ ಸಿಗುವ ಭರವಸೆ ಸಿಕ್ಕಿದೆ ಎಂಬ ಮಾಹಿತಿಯಿದೆ.
ಮೈತ್ರಿಕೂಟಗಳಿಗೆ ಬೇಡವಾದ LJD, ಬಿಹಾರ ರಣಕಣದಲ್ಲಿ ಏಕಾಂಗಿ
ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವ ಸುಭಾಷಿಣಿ ಅವರು ತಮ್ಮ ತಂದೆಯ ಆಶಯದಂತೆ ಬಿಹಾರ ಅಭಿವೃದ್ಧಿ ಹಾಗೂ ಮಹಾಘಟಬಂಧನ್ ಉದ್ದೇಶದಂತೆ ನಡೆದುಕೊಳ್ಳುವುದಾಗಿ ಹೇಳಿದ್ದಾರೆ.
ಶರದ್ ಯಾದವ್ ಪುತ್ರಿ ಸುಭಾಷಿಣಿ ಪ್ರತಿಕ್ರಿಯೆ
ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದ ಸುಭಾಷಿಣಿ, "ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ತಂದೆ ಶರದ್ ಯಾದವ್ ಅವರ ಆರೋಗ್ಯ ಈಗ ಸ್ವಲ್ಪ ಸುಧಾರಿಸಿದೆ. ಆದರೆ, ಬಿಹಾರ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಕಷ್ಟ. ಮಹಾಘಟಬಂಧನ್ ಹಾಗೂ ಅಪ್ಪನ ಆಶಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ'' ಎಂದಿದ್ದಾರೆ.
ಕಾಳಿ ಪಾಂಡೆ ಪ್ರತಿಕ್ರಿಯೆ
ಕಾಳಿ ಪಾಂಡೆ: 1980ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬಿಹಾರ ವಿಧಾನಸಭೆಗೆ ಆಯ್ಕೆಯಾಗಿದ್ದ ಪಾಂಡೆ ಅವರು 1984ರಲ್ಲಿ ಗೋಪಾಲ್ ಗಂಜ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದ ಕಾಳಿ ಪಾಂಡೆ ಅವರು ನಾನು ಇಂದು ಮನೆಗೆ ಮರಳಿದ್ದಂತಾಗಿದೆ ಎಂದು ಹೇಳಿದರು.
ಬಿಹಾರ ಚುನಾವಣೆ: ಬಿಜೆಪಿ ರೆಬೆಲ್ಗಳ ಆಶ್ರಯತಾಣವಾದ ಎಲ್ಜೆಪಿ
ಬಿಹಾರ ವಿಧಾನಸಭೆ ಚುನಾವಣೆ
243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.
ಮಹಾಘಟಬಂಧನ್ ನಿಂದ ಶರದ್ ದೂರ
ಒಂದುಕಾಲದಲ್ಲಿ ಬಿಹಾರ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ವ ಪಡೆದುಕೊಂಡಿದ್ದ ಮಾಜಿ ಕೇಂದ್ರ ಸಚಿವ ಶರದ್ ಯಾದವ್ ಇಂದು ಏಕಾಂಗಿಯಾಗಿದ್ದಾರೆ. ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್ ಮೈತ್ರಿಕೂಟದಿಂದ ದೂರ ಉಳಿದಿರುವ ಶರದ್ ಅವರ ಲೋಕತಾಂತ್ರಿಕ ಜನತಾ ದಳ ಪ್ರತ್ಯೇಕವಾಗಿ ಕಣಕ್ಕಿಳಿಯುತ್ತಿದೆ. ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಜೊತೆ ಸದಾ ಕಾಲ ಮೈತ್ರಿ ಉಳಿಸಿಕೊಂಡಿದ್ದ ಎಲ್ ಜೆಡಿ ಈಗ ಏಕಾಂಗಿಯಾಗಿ ರಣಕ್ಕಿಳಿಯುವುದು ಖಚಿತವಾಗಿದೆ. ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಲೋಕತಾಂತ್ರಿಕ ಜನತಾ ದಳ ಪಕ್ಷವು 51 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.