ಸಿಎಂ ನಿತೀಶ್ "ಭ್ರಷ್ಟಾಚಾರದ ಭೀಷ್ಮ ಪಿತಾಮಹ" ಎಂದ ತೇಜಸ್ವಿ ಯಾದವ್
ಪಾಟ್ನಾ, ಅಕ್ಟೋಬರ್.22: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಯಕರ ನಡುವಿನ ಮಾತಿನ ಕುಸ್ತಿ ಜೋರಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಮಹಾಘಟಬಂಧನ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ವಾಗ್ದಾಳಿ ಮುಂದುವರಿಸಿದ್ದಾರೆ.
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಾವಿರಾರು ಕೋಟಿ ರೂಪಾಯಿ ಹಗರಣಗಳನ್ನೇ ಮಾಡಿದ್ದು, ರಾಜ್ಯವು ಭ್ರಷ್ಟಾಚಾರದಲ್ಲಿ ಉತ್ತುಂಗದ ಸ್ಥಾನದಲ್ಲಿದೆ ಎಂದು ತೇಜಸ್ವಿ ಯಾದವ್ ದೂಷಿಸಿದ್ದಾರೆ. ಸಿಎಂ ನಿತೀಶ್ ಕುಮಾರ್ ಅವರು "ಭ್ರಷ್ಟಾಚಾರದ ಭೀಷ್ಮ ಪಿತಾಮಹ" ಎಂದು ಲೇವಡಿ ಮಾಡಿದ್ದಾರೆ.
ವಿಧಾನಸಭಾ ಚುನಾವಣೆ ಬಳಿಕ ರಾಷ್ಟ್ರೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಈಗಿನ ಸರ್ಕಾರವು ನಡೆಸಿರುವ ಅಕ್ರಮ ಮತ್ತು ಹಗರಣಗಳನ್ನೆಲ್ಲ ಬಯಲಿಗೆ ಎಳೆಯುತ್ತೇವೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ.

"ಭ್ರಷ್ಟಾಚಾರದ ಭೀಷ್ಮ ಪಿತಾಮಹ":
ಬಿಹಾರದಲ್ಲಿ ಸರ್ಕಾರದ ಬೊಕ್ಕಸದಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಬರೋಬ್ಬರಿ 30000 ಕೋಟಿ ರೂಪಾಯಿ ಹಣವನ್ನು ವಂಚಿಸಿದೆ. ಇಷ್ಟಾದರೂ ಯಾವುದೇ ಹಗರಣದಲ್ಲಿ ಸಿಎಂ ನಿತೀಶ್ ಕುಮಾರ್ ನೇರವಾಗಿ ಭಾಗಿಯಾಗಿರುವ ಬಗ್ಗೆ ಉಲ್ಲೇಖವಾಗಿಲ್ಲ. ಹಾಗಾಗಿಯೇ ಅವರನ್ನು "ಭ್ರಷ್ಟಾಚಾರದ ಭೀಷ್ಮ ಪಿತಾಮಹ" ಅಂತಾ ಕರೆಯಲಾಗುತ್ತದೆ ಎಂದು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಕಿಡಿ ಕಾರಿದ್ದಾರೆ.
ಖಾಲಿ ಇರುವ ಇಲಾಖೆಗಳ ಬಗ್ಗೆ ಮಾಹಿತಿ:
ಬಿಹಾರದಲ್ಲಿ 15 ವರ್ಷ ಅಧಿಕಾರ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಉದ್ಯೋಗ ಖಾಲಿ ಉಳಿದಿರುವ ಬಗ್ಗೆ ತಿಳಿದಿಲ್ಲ ಮಾಹಿತಿ ಇಲ್ಲ ಎನ್ನುವುದು ನಗು ತರಿಸುವಂತಾ ವಿಚಾರವಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದರು. ರಾಜ್ಯದ ಬೋಧಕ ಮತ್ತು ಬೋಧಕೇತರ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಉದ್ಯೋಗಗಳು ಖಾಲಿಯಾಗಿವೆ. ಅಲ್ಲದೇ ಬಿಹಾರದಲ್ಲಿ ನಡೆದ 60 ಹಗರಣಗಳಲ್ಲಿ 30,000 ಕೋಟಿ ರೂಪಾಯಿ ದೋಚಲಾಗಿದ್ದು, ಆ ಹಣದ ಲೆಕ್ಕ ಕೊಡುವವರೂ ಯಾರು. ಅದೆಲ್ಲ ಜನತೆಗೆ ಸೇರಿದ ಹಣವಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದರು.












Click it and Unblock the Notifications