ಜಿಪಂ ಚುನಾವಣೇಲಿ 40 ಮತ ಪಡೆದಾಕೆ ಎಚ್ ಡಿಕೆ ವಿರುದ್ಧ ಬಿಜೆಪಿ ಸ್ಪರ್ಧಿ
ರಾಮನಗರ, ಏಪ್ರಿಲ್ 23: ಬಿಜೆಪಿ ಅಭ್ಯರ್ಥಿಗಳ ನಾಲ್ಕನೆ ಪಟ್ಟಿಯಲ್ಲಿ ರಾಮನಗರ ಕ್ಷೇತ್ರದಿಂದ ಎಚ್.ಲೀಲಾವತಿ ಎಂಬುವರ ಹೆಸರನ್ನು ಘೋಷಣೆ ಮಾಡಲಾಗಿದೆ. ವರಿಷ್ಠರ ನಡೆಯಿಂದ ಆಕ್ರೋಶಗೊಂಡ ಕಾರ್ಯಕರ್ತರು ಜಿಲ್ಲಾಧ್ಯಕ್ಷರ ಕೊಠಡಿಗೆ ನುಗ್ಗಿ, ಚೇರ್ ಗಳನ್ನು ಪುಡಿಗಟ್ಟಿ ದಾಂಧಲೆ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿರುವ ಪ್ರತಿಷ್ಠಿತ ಕ್ಷೇತ್ರದಲ್ಲಿ ಪ್ರಬಲವಾದ ಅಭ್ಯರ್ಥಿ, ಮಾಜಿ ಸಂಸದೆ ತೇಜಸ್ವಿನಿ ಅವರನ್ನು ಕಣಕ್ಕಿಳಿಸುವ ಮಾತನಾಡಿದ ಬಿಜೆಪಿಯ ವರಿಷ್ಠರು ದಿಢೀರನೆ ತಮ್ಮ ನಿರ್ಧಾರ ಬದಲಿಸಿ, ಟಿಕೆಟ್ ಗಾಗಿ ಅರ್ಜಿ ಸಲ್ಲಿಸದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹಲವು ಅನುಮಾನಗಳನ್ನು ಮೂಡಿಸಿವೆ.
ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ದುಡಿದ ಮುಖಂಡರನ್ನು ಕಡೆಗಣಿಸಲಾಗಿದೆ ಎಂದು ಕಾರ್ಯಕರ್ತರು, ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖಂಡರು ಮತ್ತು ಕಾರ್ಯಕರ್ತರು, ಬಿಜೆಪಿ ಜಿಲ್ಲಾಧ್ಯಕ್ಷ ಹುಳುವಾಡಿ ದೇವರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಗಮನ ಸೆಳೆದಿರುವ ಕುಮಾರಣ್ಣ ಸ್ಪರ್ಧಿಸಿರುವ ರಾಮನಗರ ರಣಾಂಗಣ
ಬಿಜೆಪಿಯ ನಾಲ್ಕನೇ ಪಟ್ಟಿಯಲ್ಲಿ ರಾಮನಗರದ ಅಭ್ಯರ್ಥಿಯಾಗಿ ಘೋಷಿಸಿರುವ ಎಚ್.ಲೀಲಾವತಿ ಅವರು ಕಳೆದ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಕೇವಲ ನಲವತ್ತು ಮತಗಳನ್ನು ಪಡೆದಿದ್ದರು. ಅಂಥ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿದರು
ಅಭ್ಯರ್ಥಿ ಅಯ್ಕೆಯಲ್ಲಿ ಜಿಲ್ಲಾಧ್ಯಕ್ಷರ ಕೈವಾಡವಿದೆ. ಪಕ್ಷದ ನಾಯಕರಲ್ಲಿ ಪ್ರಬಲ ಪೈಪೋಟಿ ಒಡ್ಡಲಿದ್ದ ಅಭ್ಯರ್ಥಿಗಳ ಹೆಸರನ್ನು ಸೇರಿಸದೆ ಡಮ್ಮಿ ಕ್ಯಾಂಡಿಡೇಟ್ ಹಾಕಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆ ಬಳಿಕ ಜಿಲ್ಲಾಧ್ಯಕ್ಷ ಕಚೇರಿಯಲ್ಲಿದ್ದ ಚೇರ್ ಗಳನ್ನು ಹೊರತಂದು ಪುಡಿಪುಡಿ ಮಾಡಿದರು. ಅಲ್ಲದೇ ಪೀಠೋಪಕರಣಗಳನ್ನು ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.