ಬಹುಮತ ಸಾಬೀತು ಪಡಿಸುವ ವೇಳೆ ಗೋವಾ ಮುಖ್ಯಮಂತ್ರಿ ಕಣ್ಣೀರಿಟ್ಟಿದ್ದೇಕೆ?
ಪಣಜಿ, ಮಾರ್ಚ್ 21: ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಅವರು ಸೋಮವಾರ ರಾತ್ರಿ ಪ್ರಮಾಣವಚನಸ್ವೀಕರಿಸಿದ್ದರು. ಬುಧವಾರ ನಡೆದ ಬಹುಮತ ಸಾಬೀತು ಸಭೆಯಲ್ಲಿ ಮನೋಹರ್ ಪರಿಕ್ಕರ್ ಅವರನ್ನು ನೆನೆದು ಕಣ್ಣೀರಿಟ್ಟರು.
ಬಹುಮತ ಸಾಬೀತಿನ ನಂತರ ಮಾತನಾಡುವಾಗ ಮನೋಹರ್ ಪರಿಕ್ಕರ್ ಅವರನ್ನು ನೆನಪಿಸಿಕೊಂಡು ಭಾವುಕರಾದ ಪ್ರಮೋದ್ ಅವರು, ಮನೋಹರ್ ಪರಿಕ್ಕರ್ ಅವರಿಂದಲೇ ನಾನು ಇಂದು ಇಲ್ಲಿದ್ದೇನೆ. ಶಾಸಕನಾಗಿದ್ದು, ಸ್ಪೀಕರ್ ಆಗಿದ್ದು, ಹಾಗೇ ಇಂದು ಮುಖ್ಯಮಂತ್ರಿಯಾಗಿದ್ದೂ ಕೂಡ ಅವರಿಂದಲೇ, ಅವರಿಗಾಗಿಯೇ ಎಂದು ಕಣ್ಣೀರು ಹಾಕಿದರು.
ಪರಿಕ್ಕರ್ ಅವರು ದೂರದೃಷ್ಟಿಯುಳ್ಳ ನಾಯಕ ಎಂದು ಡೆಪ್ಯೂಟಿ ಸ್ಪೀಕರ್ ಹೇಳಿದರು. ಅಲ್ಲದೆ ವಿಪಕ್ಷ ನಾಯಕ (ಐಎನ್ಸಿ) ಚಂದ್ರಕಾಂತ ಕವ್ಲೇಕರ್ ಮಾತನಾಡಿ, ಮನೋಹರ್ ಪರಿಕ್ಕರ್ ಅವರ ಕೆಲಸದ ಶೈಲಿಯನ್ನೇ ನಾವೂ ಅನುಕರಣೆ ಮಾಡಬೇಕು. ಅವರು ರಕ್ಷಣಾ ಸಚಿವರಾಗಿ ನಮ್ಮ ಇಡೀ ಗೋವಾಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ ಎಂದು ಹೇಳಿದರು.

ವಿಶ್ವಾಸಮತದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಲ್ಲಾ ಶಾಸಕರನ್ನೂ ಗೋವಾದ ಫೈವ್ ಸ್ಟಾರ್ ಹೊಟೆಲ್ ವೊಂದಕ್ಕೆ ಕಳಿಸಿತ್ತು. ಒಟ್ಟು 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾ ಸದ್ಯಕ್ಕೆ 36 ಸದಸ್ಯ ಬಲ ಹೊಂದಿದೆ.
ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಮತ್ತು ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ನಿಧನದಿಂದ ಹಾಗೂ ಕಾಂಗ್ರೆಸ್ ನ ಇಬ್ಬರು ಶಾಸಕರಾದ ಸುಭಾಶ್ ಶಿರೋಡ್ಕರ್ ಮತ್ತು ದಯಾನಂದ್ ಸೊಪ್ಟೆ ಅವರ ರಾಜೀನಾಮೆಯಿಂದ ನಾಲ್ಕು ಸ್ಥಾನಗಳು ತೆರವಾಗಿವೆ.












Click it and Unblock the Notifications